ಗದಗ: ರೈತರು ರಸಗೊಬ್ಬರ ಖರೀದಿಸಲು ಇನ್ನು ಮುಂದೆ ಎಫ್ಐಡಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅಲ್ಲದೇ, ತಮ್ಮ ಎಲ್ಲ ಜಮೀನುಗಳನ್ನು ಸಹ ಎಫ್ಐಡಿಗೆ ಕಡ್ಡಾಯವಾಗಿ ಜೋಡಿಸಿರಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಪ್ರಸ್ತಾವಿಕವಾಗಿ ಮಾತನಾಡಿ, ಈ ಹಿಂದಿನ 2025ರ ಮುಂಗಾರು ಹಂಗಾಮಿನ ಅತಿವೃಷ್ಟಿ ಸಮಯದಲ್ಲಿ ರಸಗೊಬ್ಬರಗಳ ಅಧಿಕ ಬೇಡಿಕೆ ಎದುರಾದಾಗ ತಾಲೂಕಿನ ರಸಗೊಬ್ಬರ ವ್ಯಾಪಾರಸ್ಥರು ಇಲಾಖೆಯೊಂದಿಗೆ ಸಹಕರಿಸಿ ಪರಿಸ್ಥಿತಿ ನಿಭಾಯಿಸುವಲ್ಲಿ ಬಹಳ ಸಹಕಾರ ನೀಡಿದ್ದಾರೆ. ಪ್ರಸಕ್ತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮವಾಗಿ ರಸಗೊಬ್ಬರ ತಯಾರಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕೃಷಿ ಇಲಾಖೆಯು ಗೊಬ್ಬರ ತಯಾರಿಕಾ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ತಾಲೂಕಿನ ರೈತರಿಗೆ ಗೊಬ್ಬರ ಸಿಗುವಂತೆ ಪ್ರಯತ್ನಿಸುತ್ತಿದೆ. ತಾಲೂಕಿನ ರಸಗೊಬ್ಬರ ವ್ಯಾಪಾರಸ್ಥರು ಈ ಹಂಗಾಮಿನಲ್ಲಿಯೂ ತಮಗೆ ಲಭ್ಯವಿರುವ ರಸಗೊಬ್ಬರವನ್ನು, ವಿಶೇಷವಾಗಿ ಅದರಲ್ಲೂ ಯೂರಿಯಾ ಗೊಬ್ಬರವನ್ನು ಎಫ್ಐಡಿ, ಆಧರಿತ ಯುರಿಯಾ ವಿತರಣಾ ತಂತ್ರಾಂಶವನ್ನು ಬಳಸಿ ಪಿಒಸ್ ಮಷಿನ್ ಮೂಲಕ ರೈತರ ದಾಖಲೆಗಳನ್ವಯ ನಿರ್ದಿಷ್ಟ ಮಿತಿಯಲ್ಲಿ ವಿತರಿಸಲು ಸಹಕರಿಸಿ ಎಲ್ಲ ರೈತರ ಹಿತ ಕಾಪಾಡಬೇಕು ಎಂದು ಸೂಚಿಸಿದರು.ಈ ವೇಳೆ ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್., ಮೇಘನಾ ನಾಡಗೇರ, ಕಲಾವತಿ, ಪ್ರಕಾಶ ಕಗದಾಳ, ಸಂಜಯ್ ರೊದ್ದಂ, ಸೌಮ್ಯ, ರಾಜೇಶ್ವರಿ, ಬಸವರಾಜೇಶ್ವರಿ ಸೇರಿದಂತೆ ಕೃಷಿ ಪರಿಕರ ಮಾರಾಟಗಾರರು, ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ರೈತ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳು ಇದ್ದರು.