ಶಿಗ್ಗಾಂವಿಯಲ್ಲಿ ಸಮರ್ಪಕ ಯೂರಿಯಾ ಗೊಬ್ಬರಕ್ಕೆ ರೈತರ ಪರದಾಟ

KannadaprabhaNewsNetwork |  
Published : Jun 30, 2026, 02:15 AM IST
ಶಿಗ್ಗಾಂವಿ ತಾಲೂಕಿನ ಕುನ್ನೂರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದೆ ರೈತರು ಯುರಿಯಾ ಗೊಬ್ಬರಕ್ಕೆ ಮುಗಿಬಿದ್ದಿರುವುದು. | Kannada Prabha

ಸಾರಾಂಶ

ತಾಲೂಕಿನಾದ್ಯಾಂತ ವಿವಿಧ ಗ್ರಾಮಗಳ ರೈತರು ಸಮರ್ಪಕ ರಸಗೊಬ್ಬರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರಿ ವಿತರಣಾ ವ್ಯವಸ್ಥೆ ಹಾಗೂ ಖಾಸಗಿ ರಸಗೊಬ್ಬರ ಮಳಿಗೆಗಳ ವಿರುದ್ಧ ರೈತರು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಗ್ಗಾಂವಿ: ತಾಲೂಕಿನಾದ್ಯಾಂತ ವಿವಿಧ ಗ್ರಾಮಗಳ ರೈತರು ಸಮರ್ಪಕ ರಸಗೊಬ್ಬರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರಿ ವಿತರಣಾ ವ್ಯವಸ್ಥೆ ಹಾಗೂ ಖಾಸಗಿ ರಸಗೊಬ್ಬರ ಮಳಿಗೆಗಳ ವಿರುದ್ಧ ರೈತರು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕುನ್ನೂರ ವ್ಯವಸಾಯ ಸೇವಾ ಸಹಕಾರಿ ಸಂಘದ ಮೂಲಕ ರೈತರಿಗೆ ಪ್ರತಿ ಎಫ್‌ಐಡಿ ಸಂಖ್ಯೆಗೆ ಕೇವಲ ಒಂದು ಚೀಲ ಯೂರಿಯಾ ರಸಗೊಬ್ಬರ ನೀಡಲಾಗುತ್ತಿದೆ. ಕೃಷಿ ಭೂಮಿಯ ಅಗತ್ಯಕ್ಕೆ ಹೋಲಿಸಿದರೆ ಈ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು, ರೈತರಿಗೆ ಬೆಳೆ ನಿರ್ವಹಣೆ ಕಷ್ಟಕರವಾಗಿದೆ. ಒಂದು ಚೀಲ ರಸಗೊಬ್ಬರ ಪಡೆಯಲು ರೈತರು ದಿನಪೂರ್ತಿ ಮಳಿಗೆಗಳ ಮುಂದೆ ಕಾಯುವಂತಾಗಿದೆ.

ಇನ್ನೊಂದೆಡೆ ಖಾಸಗಿ ರಸಗೊಬ್ಬರ ಮಳಿಗೆಗಳಲ್ಲಿ ರೈತರ ಸಂಕಷ್ಟವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಎರಡು ಚೀಲ ಯೂರಿಯಾ ಪಡೆಯಲು ಕಡ್ಡಾಯವಾಗಿ ಲಿಂಕ್ ಹೆಸರಿನಲ್ಲಿ ಬೇಡವಾದ ಇತರೆ ರಸಾಯನಿಕ ಗೊಬ್ಬರವನ್ನು ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ. ಇದರೊಂದಿಗೆ ಮಾರಾಟ ಮಾಡುತ್ತಿದ್ದಾರೆ. ಅನಗತ್ಯ ರಸಾಯನಿಕ ಗೊಬ್ಬರ ಬೇಡಿಕೆ ಇಡುತ್ತಿದ್ದು ಎರಡು ಚೀಲಕ್ಕೆ ₹೭೦೦ ಬೆಲೆಯ ಅನಗತ್ಯ ವಸ್ತುವನ್ನು ಖರೀದಿಸುವುದು ಅನಿವಾರ್ಯತೆ ಇದ್ದು, ಅಗತ್ಯ ವಸ್ತುವಾದ ರಸಗೊಬ್ಬರವನ್ನು ಪಡೆಯಲು ರೈತರು ಹೆಚ್ಚುವರಿ ಹಣ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ.

ಸರ್ಕಾರವು ರಾಜ್ಯದಲ್ಲಿ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ ಎಂದು ಹೇಳುತ್ತಿದ್ದರೂ, ಗ್ರಾಮೀಣ ಭಾಗದ ರೈತರಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದೊರೆಯುತ್ತಿಲ್ಲ. ಎಫ್‌ಐಡಿ, ಬಯೋಮೆಟ್ರಿಕ್ ಹಾಗೂ ಓಟಿಪಿ ನಿಯಮಗಳಿಂದ ರೈತರಿಗೆ ಮತ್ತಷ್ಟು ತೊಂದರೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರ ಎಫ್‌ಐಡಿಯನ್ನು ತೆಗೆದುಕೊಂಡು ಒಂದು ಎಕರೆಗೆ ಒಂದು ರಸಾಯನಿಕ ಯೂರಿಯಾ ಗೊಬ್ಬರವನ್ನು ನೀಡಲಾಗುತ್ತಿದೆ. ಆದರೆ ನಾಲ್ಕು ಎಕರೆಗೆ ನಾಲ್ಕು ಚೀಲ ಗೊಬ್ಬರವನ್ನು ನೀಡುವದು, ಕೇವಲ ಒಂದೆ ಖರೀದಿಸಿದರೆ ಉಳಿದ ಮೂರು ರಸಾಯನಿಕ ಯೂರಿಯಾ ಗೊಬ್ಬರವನ್ನು ಬೇರೆಡೆ ತೆಗೆದುಕೊಳ್ಳಬಹುದು ಎಂದು ಶಿಗ್ಗಾಂವಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ್ ಗೇಜ್ಲಿ ಹೇಳಿದರು.

ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಖಾಸಗಿ ಮಳಿಗೆಗಳ ಅನಧಿಕೃತ ಷರತ್ತುಗಳಿಗೆ ಕಡಿವಾಣ ಹಾಕಿ, ರೈತರಿಗೆ ಸರಳ ಹಾಗೂ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ರೈತ ಶಿವಾನಂದ ದೊಡ್ಡಮನಿ ಹೇಳಿದರು.

ತಾಲೂಕಿನಲ್ಲಿ ಗೊಬ್ಬರ ಮಳಿಗೆಯವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಕೃಷಿ ಅಧಿಕಾರಿಗಳು ತನಿಖೆಯನ್ನು ಮಾಡಿ ಅವರ ಮೇಲೆ ಕ್ರಮಗಿಸಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಎನ್. ಸಮಗೊಂಡ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಪುರ ಗ್ರಾಮ ಪಂಚಾಯಿತಿ ಮೇಲೆ ಲೋಕಾಯುಕ್ತ ದಾಳಿ
ಮತದಾರರ ಸಂವಿಧಾನಬದ್ಧ ಹಕ್ಕು ರಕ್ಷಣೆಗೆ ಶ್ರಮಿಸಿ: ಮಿಥುನ್ ಪಾಟೀಲ