ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬೊಮ್ಮಲಾಪುರ ಗಂಗಪ್ಪಗೆ ಸೇರಿದ ಜಮೀನಿನಲ್ಲಿ ಮಂಗಳವಾರ ಬೆಳಗ್ಗೆ ಹುಲಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಹುಲಿ ಇದೆ ಬೇಗ ಬರುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಕೆಲ ರೈತರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೇ ಇಬ್ಬರು ಡಿಆರ್ಎಫ್ಒ, ಎಡಿಎಸ್ ಹಾಗೂ ಗಾರ್ಡ್ಗಳು ಸೇರಿದಂತೆ ಏಳು ಮಂದಿ ಗಂಗಪ್ಪ ಜಮೀನಿಗೆ ಹೋಗುವಷ್ಟರಲ್ಲಿ ಆಕ್ರೋಶಗೊಂಡ ರೈತರು ಗಂಗಪ್ಪ ಜಮೀನಿನಲ್ಲಿ ಇಡಲಾಗಿದ್ದ ಬೋನಿಗೆ ಏಳು ಅರಣ್ಯ ಸಿಬ್ಬಂದಿಯನ್ನು ನುಗ್ಗಿಸಿ ಲಾಕ್ ಮಾಡಿದ್ದಾರೆ.ಬೋನಿಗೆ ಅರಣ್ಯ ಸಿಬ್ಬಂದಿ ಕೂಡಿ ಹಾಕಿದ್ದಾರೆಂಬ ವಿಷಯ ತಿಳಿದ ಕೊಡಸೋಗೆ ಗ್ರಾಪಂ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಶಿವಪ್ರಸಾದ್ ಆಲಿಯಾಸ್ ಗುಂಡಣ್ಣ ಕೂಡಿ ಹಾಕಿದ್ದ ರೈತರಿಗೆ ಮಾತನಾಡಿ ಬೋನಿನಿಂದ ಬಿಡಿಸಿದ್ದರು ಎಂದು ಪ್ರತ್ಯೇಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.ಅರಣ್ಯ ಸಿಬ್ಬಂದಿ ಬೋನಿಗೆ ಕೂಡಿ ಹಾಕಿರುವ ವಿಷಯ ಅರಿತ ಗುಂಡ್ಲುಪೇಟೆ ಎಸಿಎಫ್ ಕೆ.ಸುರೇಶ್, ಬಂಡೀಪುರ ಎಸಿಎಫ್ ಎನ್.ಪಿ.ನವೀನ್ ಕುಮಾರ್ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಎನ್.ಜಯಕುಮಾರ್ ಜೊತೆ ಸ್ಥಳಕ್ಕಾಗಮಿಸಿದಾಗ ರೈತರು ಹಾಗು ಅರಣ್ಯ ಇಲಾಖೆ ಅಧಿಕಾರಿಗಳ ಮಾತಿನ ಚಕಮಕಿ ನಡೆಯಿತು.
ಗುಂಡ್ಲುಪೇಟೆ ಎಸಿಎಫ್ ಕೆ.ಸುರೇಶ್ ಮಾತನಾಡಿ, ಹುಲಿ ಹಾವಳಿ ತಡೆಗೆ ನಾಳೆಯಿಂದ ಸಾಕಾನೆ ಮೂಲಕ ಕೂಂಬಿಂಗ್ ನಡೆಸಲಾಗುತ್ತದೆ ಎಂದು ರೈತರ ಮನವೊಲಿಸಿದ್ದಾರೆ.
ಸಿಬ್ಬಂದಿಯಲ್ಲಿ ಹೆಚ್ಚಿದ ಆತಂಕ?
ಬೊಮ್ಮಲಾಪುದ ಬಳಿ ಹುಲಿ ಇದೆ ಎಂಬ ಮಾಹಿತಿ ಮೇರೆಗೆ ಹೋದ ಏಳು ಮಂದಿ ಅರಣ್ಯ ಸಿಬ್ಬಂದಿಯನ್ನು ಬೋನಿಗೆ ಮಂಗಳವಾರ ಕೆಲ ರೈತರು 20 ನಿಮಿಷಗಳ ಕಾಲ ಕೂಡಿ ಹಾಕಿದ್ದರು. ಇದು ಅರಣ್ಯ ಸಿಬ್ಬಂದಿಯಲ್ಲಿ ಆತಂಕದ ಜೊತೆಗೆ ಅರಣ್ಯ ಇಲಾಖೆ ಮೇಲಾಧಿಕಾರಿಗಳ ಮೇಲೆ ಅಸಮದಾನಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಬಳಿ ಅರಣ್ಯ ಸಿಬ್ಬಂದಿಯನ್ನು ಬೋನಿಗೆ ಕೂಡಿ ಹಾಕಿದ್ದ ಕೆಲ ರೈತರು.
ಅರಣ್ಯ ಸಿಬ್ಬಂದಿ ಕೂಡಿ ಹಾಕಿದ್ದ ಸ್ಥಳಕ್ಕೆ ಎಸಿಎಫ್ ಕೆ.ಸುರೇಶ್, ನವೀನ್ ಕುಮಾರ್ ಭೇಟಿ ನೀಡಿದ್ದರು.