ಬೇಗೂರು ಸೆಸ್ಕಾಂ ವಿರುದ್ಧ ರೈತಸಂಘ ಪ್ರತಿಭಟನೆ

KannadaprabhaNewsNetwork | Published : Aug 3, 2024 12:33 AM

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯ ಖಂಡಿಸಿ ರೈತಸಂಘದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಬೇಗೂರು ಸೆಸ್ಕಾಂನಲ್ಲಿ ಸಿಬ್ಬಂದಿಗಳ ನಿರ್ಲಕ್ಷ ಹಾಗೂ ಹಲವು ವರ್ಷಗಳಿಂದ ಜಾಂಡಾ ಹೂಡಿದ ಸಿಬ್ಬಂದಿ ವರ್ಗಾವಣೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದ ರೈತಸಂಘದ ಕಾರ್ಯಕರ್ತರು ಬೇಗೂರು ಎಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬೇಗೂರು-ಹಾಲಹಳ್ಳಿ ರಸ್ತೆಯ ಬಂಡಿಗೆರೆ ಮಾದೇಶ್ವರ ದೇವಸ್ಥಾನ ಬಳಿ ಸಮಾವೇಶಗೊಂಡ ರೈತರು, ರೈತಸಂಘದ ಮುಖಂಡ ಹೊನ್ನೂರು ಪ್ರಕಾಶ್‌ ನೇತೃತ್ವದಲ್ಲಿ ಮೈಸೂರು-ಗುಂಡ್ಲುಪೇಟೆ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಎಇಇ ಕಚೇರಿ ಮುಂದೆ ಧರಣಿ ನಡೆಸಿದರು.

ರೈತಸಂಘದ ಮುಖಂಡ ಹೊನ್ನೂರು ಪ್ರಕಾಶ್‌ ಮಾತನಾಡಿ, ಸೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ರೈತರ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ. ಬೇಗೂರು ಸೆಸ್ಕಾಂ ವಿಭಾಗದ ಲೈನ್ ಗಳು ಸರಿಯಾಗಿ ಇರುವುದಿಲ್ಲ. ಹಳೆಯ ಕಾಲದ ಕಂಬ ಬದಲಿಸಿ, ಟಿಸಿ ಹಾಕಿ ಎಂದರೆ ಹೆಚ್ಚು ಹಣ ನೀಡುವವರಿಗೆ ಮಾತ್ರ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಬಡ ರೈತನಿಗೆ ಟಿಸಿ ತೆಗೆದುಕೊಳ್ಳಲು ತುಂಬಾ ಕಷ್ಟವಾಗುತ್ತಿದ್ದು ಲೈನ್ ಮ್ಯಾನ್‌ಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಗುತ್ತಿಗೆದಾರರು ರೈತರಿಂದ ದುಪ್ಪಟ್ಟು ದುಡ್ಡನ್ನು ಪಡೆದು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ದೂರಿದರು. ಇಂತಹ ಭ್ರಷ್ಟರಿಗೆ ಬೇಗೂರು ಎಇಇ ಅನುವು ಮಾಡಿಕೊಟ್ಟಿದ್ದಾರೆ. ಹಲವು ವರ್ಷಗಳಿಂದ ಜಾಂಡಾ ಹೂಡಿರುವ ಸಿಬ್ಬಂದಿಗಳನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದಾಗ ಎಇಇ ರಾಮಚಂದ್ರ ರಾವ್‌ ಸ್ಥಳಕ್ಕಾಗಮಿಸಿ ರೈತರ ಸಮಸ್ಯೆ ಆಲಿಸಿದರು.

ಒಂದು ವಾರದ ತನಕ ಅವಕಾಶ ಕೊಡಿ ರೈತರ ಸಮಸ್ಯೆಗೆ ಸ್ಪಂದಿಸುವುದಾಗಿ ಎಇಇ ರಾಮಚಂದ್ರ ರಾವ್‌ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ವಾಪಸ್‌ ಪಡೆದರು. ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ವೀರನಪುರ ನಾಗಪ್ಪ, ಅಗತಗೌಡನಹಳ್ಳಿ ಜಗದೀಶ್‌, ಪುಟ್ಟೇಗೌಡ ಮಲ್ಲಯ್ಯನಪುರ, ಕರಿಯಪ್ಪಚಂಗಡಿ, ಮಾಡ್ರಳ್ಳಿ ಪಾಪಣ್ಣ, ಹಸಗೂಲಿ ಮಹೇಶ್, ಮಹೇಶ್ ಉತ್ತಂಗೇರಿಹುಂಡಿ, ಶ್ರೀನಿವಾಸ್, ಷಣ್ಮುಖ ಸ್ವಾಮಿ, ಮಹದೇವ ನಾಯಕ, ಮಹಾದೇವನಾಯಕ ಕೋಟೆಕೆರೆ, ಪ್ರಸಾದ್ ಕಮರಹಳ್ಳಿ, ಸ್ವಾಮಿಕೋಡಹಳ್ಳಿ, ಗಣೇಶ್ ಕೂತನೂರು, ಸಿದ್ದಲಿಂಗಪ್ಪ, ಕಬ್ಬಳ್ಳಿ ಪ್ರಕಾಶ್, ಮಹೇಶ ಡದಹಳ್ಳಿ ವೆಂಕಟರಂಗನಾಯಕ, ಯಡವನಹಳ್ಳಿ ಗೋವಿಂದನಾಯಕ, ಮಾದೇವ್, ಸಿದ್ದರಾಜು ಕೋಟೆಕೆರೆ, ಮರಿಶೆಟ್ಟಿ ಬೇಗೂರು, ವಸಂತ ವೀರನಪುರ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಇದ್ದರು.