ಕನ್ನಡಪ್ರಭ ವಾರ್ತೆ ಶಿರಾ
ರೈತರು ದೇಶದ ಬೆನ್ನುಲೆಬು ಎಷ್ಟೇ ಕಷ್ಟ ಬಂದರು, ವಿಷಮ ಪರಿಸ್ಥಿತಿ ಎದುರಾದರೂ ಕೃಷಿ ಕಾಯಕ ಬಿಡುವುದಿಲ್ಲ. ಬದಲಾದ ಪರಿಸ್ಥಿತಿ ಇಂದು ರೈತರು ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಫಟಿಕಪುರಿ ಮಹಾ ಸಂಸ್ಥಾನ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 21ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಾನಿಧ್ಯವಹಿಸಿ ಮಾತನಾಡಿದರು. ಕೃಷಿಗೆ ಉತ್ತೇಜನ ಕೊಡುವ ಕೆಲಸ ಸರ್ಕಾರ ಬಾಯಿಮಾತಿಗೆ ಮಾಡದೇ ಅನುಷ್ಠಾನಕ್ಕೆ ತರಬೇಕಿದೆ. ಸಣ್ಣಪುಟ್ಟ ಸಬ್ಸಿಡಿ ಆಸೆಗಳಿಂದ ರೈತರ ಜೀವನ ಸಧೃಡವಾಗುವುದಿಲ್ಲ ದೂರದೃಷ್ಟಿ ಯೋಜನೆಗಳು ದೂರ ಉಳಿಯದೇ ರೈತಾಪಿ ವರ್ಗಕ್ಕೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕಿದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಹಾರದ ಕೊರತೆಯಿಂದ ಉಂಟಾಗುವ ಹಾನಿಯನ್ನು ತಡೆಯಲು ಸಾಧ್ಯವಿಲ್ಲ ಎಂದರು.
ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ. ಜಯಚಂದ್ರ ಮಾತನಾಡಿ, ಕ್ಷೇತ್ರದ ಸ್ಥಳ ಮಹಿಮೆಯಿಂದ ನಾನಿಲ್ಲಿ ಮಾಡಿಹೋದ ಸಂಕಲ್ಪಗಳು ಈಡೇರಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿ ಬಗ್ಗೆ ನೀಲನಕ್ಷೆ ರೂಪಿಸಿದ್ದೇನೆ. ಬಹುವಾಗಿ ಶ್ರೀಗಳ ಆಶಯವನ್ನು ಜಾರಿಗೆ ತರಲು ಕಟಿಬದ್ಧವಾಗಿದ್ದೇನೆ ಎಂದರು.ಹಾಲ್ದೊಡ್ಡೇರಿಯಿಂದ ಚಿರತಹಳ್ಳಿ ವರೆಗೂ ನೀರು ಹರಿಸಲು ಯೋಜನೆಯನ್ನು ರೂಪಿಸಲಾಗಿದೆ. ಅಲ್ಲದೆ ಯುವ ಜನತೆಗೆ ಉದ್ಯೋಗ ಒದಗಿಸಲು ಶಿರಾ ನಗರದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ, ಕೃಷಿ ಜೊತೆಗೆ ರೈತರು ಹೈನುಗಾರಿಕೆ ಹೆಚ್ಚು ಆದ್ಯತೆ ನೀಡಿ , ಹಸುಗಳನ್ನು ಸಾಕಣೆ ಮಾಡುವಂತಹ ಪ್ರವೃತ್ತಿ ಬೆಳೆಸಿಕೊಂಡರೆ ಜೀವನದ ಆರ್ಥಿಕ ಭದ್ರತೆಗೆ ಭದ್ರಬುನಾದಿಯಾಗಲಿದೆ.ನಂಜಾವಧೂತ ಶ್ರೀಗಳ ನೀರಾವರಿ ಹೋರಾಟದ ಫಲ ಅಪ್ಪರ ಭದ್ರ, ಎತ್ತಿನಹೊಳೆ, ಹೇಮಾವತಿ ನೀರಾವರಿ ಯೋಜನೆಗಳಲ್ಲಿ ನಮ್ಮ ಜಿಲ್ಲೆ ಮತ್ತು ತಾಲೂಕಿಗೆ ಹೆಚ್ಚು ನೀರು ಹರಿಯಲು ಸಾಧ್ಯವಾಯಿತು ಎಂದರು.
ನಿವೃತ್ತ ಐ.ಎ.ಎಸ್ ಅಧಿಕಾರಿ ಗೋವಿಂದರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಒಕ್ಕಲಿಗರ ಸಂಘದ ಸದಸ್ಯ ಹನುಮಂತರಾಯಪ್ಪ, ನಾದೂರು ಗ್ರಾಪಂ ಅಧ್ಯಕ್ಷೆ ರಕ್ಷಿತಾ ಮಾರುತಿ, ತಹಸೀಲ್ದಾರ್ ದತ್ತಾತ್ರೇಯ ಜೆ ಗಾದ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಶಾರದಮ್ಮ, ತಾ.ಪಂ.ಇಒ ಅನಂತರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಮಕೃಷ್ಣ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಜಿ.ಎನ್. ಮೂರ್ತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ. ಶ್ರೀನಿವಾಸ್ ಸೇರಿದಂತೆ ಸಾವಿರಾರು ರೈತರು, ಭಕ್ತರೂ ಉಪಸ್ಥಿತರಿದ್ದರು.