ಬಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಅಡ್ಡ ಮತ ಭೀತಿ

KannadaprabhaNewsNetwork |  
Published : Oct 18, 2025, 02:02 AM IST
ಬಿಡಿಸಿಸಿ ಬ್ಯಾಂಕ್‌ | Kannada Prabha

ಸಾರಾಂಶ

ಮಾಜಿ ಸಂಸದ ರಮೇಶ ಕತ್ತಿ- ಶಾಸಕ ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಸಹೋದರರ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 7 ನಿರ್ದೇಶಕ ಸ್ಥಾನಗಳಿಗೆ ಅ.19ರಂದು ಮತದಾನ ನಡೆಯಲಿದೆ. ಈ ಚುನಾವಣೆಗೆ ಅಡ್ಡ ಮತದಾನದ ಭೀತಿ ಶುರುವಾಗಿದೆ. ಮಾಜಿ ಸಂಸದ ರಮೇಶ ಕತ್ತಿ- ಶಾಸಕ ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಸಹೋದರರ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ.

ಬಿಡಿಸಿಸಿ ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಸಹೋದರರ ಬಣಕ್ಕೆ ಮ್ಯಾಜಿಕ್‌ ನಂಬರ್‌ ತಲುಪಲು ಇನ್ನೂ ಎರಡು ಸ್ಥಾನಗಳಲ್ಲಿ ಗೆಲ್ಲಲೇಬೇಕಿದೆ. ಬ್ಯಾಂಕಿನ 16 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಈ ಪೈಕಿ ಜಾರಕಿಹೊಳಿ ಬಣದಲ್ಲಿ ಏಳು ನಿರ್ದೇಶಕರಿದ್ದಾರೆ. ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಮತ್ತು ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ಇವರಿಬ್ಬರೂ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೇ ತಟಸ್ಥವಾಗಿ ಉಳಿದುಕೊಂಡಿದ್ದಾರೆ. ಇವರಿಬ್ಬರೂ ಕತ್ತಿ- ಸವದಿ ಬಣಕ್ಕೆ ಬೆಂಬಲ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಇದೀಗ 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಇನ್ನು 3 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಬಣ ರಣತಂತ್ರ ರೂಪಿಸಿದೆ. ಇನ್ನು ಜಾರಕಿಹೊಳಿ ಬಣದ ಅಭ್ಯರ್ಥಿಗಳನ್ನು ಸೋಲಿಸಲು ಕತ್ತಿ- ಸವದಿ ಬಣ ಶತಾಯ ಗತಾಯ ಪ್ರಯತ್ನವನ್ನೂ ನಡೆಸಿದ್ದು, ತಂತ್ರ ಪ್ರತಿತಂತ್ರವನ್ನು ಕೂಡ ನಡೆಯುತ್ತಿವೆ. ಆದರೆ, ಈ ಎರಡೂ ಬಣಗಳಿಗೆ ಅಡ್ಡ ಮತದಾನದ ಆತಂಕ ಎದುರಾಗಿದ್ದು, ಯಾರಿಗೆ ಯಾರು ಮತ ಹಾಕುತ್ತಾರೆ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ.

ಅಡ್ಡ ಮತದಾನ ಭೀತಿ ಎದುರಾದ ಹಿನ್ನೆಲೆಯಲ್ಲಿ ಮತದಾರರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ರೆಸಾರ್ಟ್‌ ರಾಜಕೀಯಕ್ಕೆ ಮೊರೆ ಹೋಗಲಾಗಿದೆ. ಮತದಾರರನ್ನು (ಪಿಕೆಪಿಎಸ್‌ ಸದಸ್ಯರು) ಮಹಾರಾಷ್ಟ್ರ, ಗೋವಾ ರಾಜ್ಯಗಳ ರೆಸಾರ್ಟ್‌ಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ, ಮತದಾರರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ರೆಸಾರ್ಟ್‌ಗಳಲ್ಲಿರುವ ಮತದಾರರಿಗೆ ಮೊಬೈಲ್‌ಗಳನ್ನು ನಿಷೇಧಿಸಲಾಗಿದೆ. ಯಾರ ಸಂಪರ್ಕಕ್ಕೂ ಅವಕಾಶ ನೀಡಿಲ್ಲ ಎಂದೇ ಹೇಳಲಾಗುತ್ತಿದೆ.

ಹುಕ್ಕೇರಿ, ನಿಪ್ಪಾಣಿ, ಅಥಣಿ, ಕಿತ್ತೂರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಡ್ಡ ಮತದಾನ ನಡೆಯುವ ಆತಂಕವನ್ನು ಘಟಾನುಘಟಿ ನಾಯಕರೇ ಬಹಿರಂಗವಾಗಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆ ಜಾರಕಿಹೊಳಿ ಸಹೋದರರು, ಕತ್ತಿ-ಸವದಿ ಬಣಕ್ಕೆ ಪ್ರತಿಷ್ಠೆಯಾಗಿದೆ. ಹೇಗಾದರೂ ಮಾಡಿ ಬಿಡಿಸಿಸಿ ಬ್ಯಾಂಕಿನ ಮೇಲೆ ಪ್ರಬಲ ಹಿಡಿತ ಸಾಧಿಸಲು ಜಾರಕಿಹೊಳಿ ಮೂವರು ಸಹೋದರರು ಚುನಾವಣಾ ಆಖಾಡಕ್ಕಿಳಿದಿದ್ದಾರೆ. ಈ ನಿಟ್ಟಿನಲ್ಲಿ ರಣತಂತ್ರವನ್ನೂ ರೂಪಿಸಿದ್ದಾರೆ.

ಬಿಡಿಸಿಸಿ ಬ್ಯಾಂಕಿನ 7 ನಿರ್ದೇಶಕರ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಡ್ಡ ಮತದಾನದ ಆತಂಕ ಇದ್ದೇ ಇರುತ್ತದೆ. ಹುಕ್ಕೇರಿ, ನಿಪ್ಪಾಣಿ, ಅಥಣಿ ಸೇರಿದಂತೆ ಇತರೆ ಕಡೆಗಳಲ್ಲಿ ಅಡ್ಡ ಮತದಾನ ಭೀತಿಯಿದೆ.

ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ