ಕನ್ನಡಪ್ರಭ ವಾರ್ತೆ ಸಕಲೇಶಪುರಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಯುವುದು ಉತ್ತಮ ಲಕ್ಷಣವಲ್ಲ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ ಕೆ ದಿನೇಶ್ ಹೇಳಿದರು. ಶನಿವಾರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ಹಾನುಬಾಳು ಕಾಫಿ ಬೆಳೆಗಾರರ ಸಹಕಾರ ಸಂಘದ ವತಿಯಿಂದ ಔಷಧಿ ಮತ್ತು ರಸಗೊಬ್ಬರ ಮಾರಾಟ ಮಳಿಗೆಯನ್ನು ದೇವಾಲದಕೆರೆಯಲ್ಲಿ ಉದ್ಘಾಟಿಸಿದ ನಂತರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಮಲೆನಾಡಿನಲ್ಲಿ ಸಹಕಾರ ಸಂಘಗಳ ಸಂಖ್ಯೆ ತೀರ ಅಲ್ಪ. ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಾಕಷ್ಟು ಸಹಕಾರ ಸಂಘಗಳು ರಾಜಕೀಯದಿಂದಾಗಿ ನಾಶವಾಗಿವೆ. ಆದ್ದರಿಂದ ಸಹಕಾರ ಸಂಘದಲ್ಲಿ ರಾಜಕೀಯ ಬೆರೆಸಬಾರದು ಎಂದರು.ಬೆಳೆಗಾರರಲ್ಲಿ ವೃತ್ತಿಪರತೆಯ ಕೊರತೆ ಕಾಡುತ್ತಿದೆ. ಯಾವುದೇ ಬೆಳೆಗೂ ಮಣ್ಣು, ನೀರು, ಗೊಬ್ಬರದ ಅಗತ್ಯವಿದೆ. ಇವುಗಳ ಬಳಕೆಯ ಬಗ್ಗೆ ಸಾಕಷ್ಟು ಬೆಳೆಗಾರರಿಗೆ ಅರಿವಿನ ಕೊರತೆ ಇದೆ. ಅಲ್ಲದೆ ಮಾರುಕಟ್ಟೆ ಜ್ಞಾನ ಸಹ ಅಗತ್ಯವಿದೆ. ತಮ್ಮ ಬೆಳೆಯನ್ನು ಯಾವಾಗ ಯಾವ ಬೆಲೆಗೆ ಮಾರಾಟ ಮಾಡಬೇಕು ಎಂಬ ಪರಿಕಲ್ಪನೆ ಹೊಂದುವುದು ಅಗತ್ಯ. ಗೊಬ್ಬರ ಬಳಕೆಯನ್ನು ಸಹ ಹೆಚ್ಚಿನ ಜಾಗೃತೆಯಿಂದ ಬಳಸುವ ಅಗತ್ಯವಿದೆ. ಸಮಯವಲ್ಲದ ಸಮಯದಲ್ಲಿ ಉಚಿತವಲ್ಲದ ಗೊಬ್ಬರ ನೀಡಿದರೆ ಹಣ ವ್ಯರ್ಥವಾಗಲಿದೆ. ಆದ್ದರಿಂದ ಇಂತಹ ವಿಚಾರಣಾ ಸಂಕಿರಣಗಳಲ್ಲಿ ಬೆಳೆಗಾರರು ಭಾಗವಹಿಸುವುದು ಅಗತ್ಯ. ಸಾಕಷ್ಟು ಹೋರಾಟದ ಮೂಲಕ ಬೆಳೆಗಾರ ಸಾಲ ತೀರುವಳಿಗೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಈ ಯೋಜನೆಯ ಲಾಭ ಪಡೆಯಲು ಸಾಕಷ್ಟು ಬೆಳೆಗಾರರು ವಿಫಲರಾಗಿದ್ದು, ರಾಜ್ಯದಲ್ಲಿ ಸುಮಾರು ಆರು ಸಾವಿರ ಬೆಳೆಗಾರರು ಸುಸ್ತಿದಾರರಾಗಿದ್ದಾರೆ ಎಂದರು. ಕಾಫಿ ಬೆಳೆಗಾರರು ಹೆಚ್ಚೆಚ್ಚು ಮಾಹಿತಿ ಸಂಗ್ರಹಿಸುವುದರಿಂದ ಆರ್ಥಿಕ ವಾಗಿ ಅಭಿವೃದ್ಧಿ ಹೊಂದಬಹುದಾಗಿದೆ. ಕಾಫಿ ಬೆಳೆಗಿಂತ ಮತ್ತೊಂದು ಉತ್ತಮ ಬೆಳೆಯಿಲ್ಲ. ಎಲ್ಲ ರಂಗದಲ್ಲೂ ಕಷ್ಟಗಳಿರುತ್ತವೆ. ಕಷ್ಟಗಳನ್ನು ಮೆಟ್ಟಿ ನಿಂತಾಗ ಉತ್ತಮ ಬೆಳೆಗಾರರಾಗಬಹುದು ಎಂದರು. ಕಾಫಿ ಮಂಡಳಿಯಿಂದ ಕಾಫಿ ತೋಟಗಳಲ್ಲಿ ಆಧುನಿಕ ತಂತ್ರಜ್ಞಾನ ಆಳವಡಿಕೆಗೆ ಪರೀಕ್ಷೆಗಳು ನಡೆಯುತ್ತಿದೆ. ಇದರಿಂದ ಕಾರ್ಮಿಕ ಕೊರತೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಕಾಫಿಗೆ ಉತ್ತಮ ಭವಿಷ್ಯವಿದ್ದು ನೆರಳಿನಾಶ್ರಯದಲ್ಲಿ ಬೆಳೆಯುವ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ. ಬೆಳೆಗಾರರು ಮರಗಳನ್ನು ಉಳಿಸಿಕೊಂಡು ಕಾಫಿ ಬೆಳೆಯುವುದು ಒಳ್ಳೆಯದು ಎಂದರು.
ಮುಖಂಡರಾದ ಗುಂಡೆಗೌಡ, ನರೇಶ್, ರವಿ, ಚಂದ್ರಶೇಖರ ರತ್ನಕಾರ್, ರಾಜೀವ್, ಪ್ರತಿಮಾ ಮುಂತಾದವರಿದ್ದರು.