ಪೂರೈಕೆ ಕಡಿತ ಇದ್ದರೂ ಮುಂಗಾರಿಗೆ ಗೊಬ್ಬರ ದಾಸ್ತಾನು

KannadaprabhaNewsNetwork |  
Published : Jun 08, 2026, 01:15 AM IST
ಚಚಚ | Kannada Prabha

ಸಾರಾಂಶ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಏಪ್ರಿಲ್‌ನಿಂದ ಜೂನ್‌ ಈ ವೇಳೆಗೆ ಪೂರೈಕೆ ಆಗಬೇಕಾಗಿದ್ದ ಪ್ರಮಾಣದಲ್ಲಿ ಕೇವಲ ಅರ್ಧದಷ್ಟು ರಸಗೊಬ್ಬರ ಮಾತ್ರ ಪೂರೈಕೆಯಾದರೂ, ಬರೋಬ್ಬರಿ 55,448 ಮೆಟ್ರಿಕ್‌ ಟನ್‌ ದಾಸ್ತಾನು ಲಭ್ಯವಿದ್ದು, ರೈತರು ಸದ್ಯಕ್ಕೆ ಆತಂಕ ಪಡಬೇಕಿಲ್ಲ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಏಪ್ರಿಲ್‌ನಿಂದ ಜೂನ್‌ ಈ ವೇಳೆಗೆ ಪೂರೈಕೆ ಆಗಬೇಕಾಗಿದ್ದ ಪ್ರಮಾಣದಲ್ಲಿ ಕೇವಲ ಅರ್ಧದಷ್ಟು ರಸಗೊಬ್ಬರ ಮಾತ್ರ ಪೂರೈಕೆಯಾದರೂ, ಬರೋಬ್ಬರಿ 55,448 ಮೆಟ್ರಿಕ್‌ ಟನ್‌ ದಾಸ್ತಾನು ಲಭ್ಯವಿದ್ದು, ರೈತರು ಸದ್ಯಕ್ಕೆ ಆತಂಕ ಪಡಬೇಕಿಲ್ಲ.

ಹೌದು, ಕಳೆದ ಏಪ್ರಿಲ್‌ನಿಂದ ಜೂನ್‌ 6 ಅವಧಿಯಲ್ಲಿ ಜಿಲ್ಲೆಗೆ ಒಟ್ಟು 63,890 ಮೆಟ್ರಿಕ್‌ ಟನ್‌ನಷ್ಟು ರಸಗೊಬ್ಬರ ಪೂರೈಕೆ ಆಗಬೇಕಾಗಿತ್ತು. ಆದರೆ, ಈ ಬಾರಿ ಕೇವಲ 30,279 ಮೆಟ್ರಿಕ್‌ ಟನ್‌ನಷ್ಟು ಮಾತ್ರ ಪೂರೈಕೆ ಆಗಿದೆ. ಶೇ.47.39 ರಷ್ಟು ಮಾತ್ರ ಪೂರೈಕೆ ಆಗಿದೆ. ಶೇ.52.61 ರಷ್ಟು ರಸಗೊಬ್ಬರ ಜಿಲ್ಲೆಗೆ ಬಂದಿಲ್ಲ.

ಆದರೂ, ಮುಂಗಾರು ಅವಧಿಯಲ್ಲಿ ರೈತರಿಗೆ ಯಾವುದೇ ತೊಂದರೆ ಉಂಟಾಗದಂತೆ ಕೃಷಿ ಇಲಾಖೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರದ ದಾಸ್ತಾನು ಶೇಖರಿಸಲಾಗಿದೆ.

ಗೊಬ್ಬರ ಶೇಖರಣೆಗೆ ಕಾಡಿವಾಣ

ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭಗೊಳ್ಳುತ್ತಿದಂತೆ ಮಾರ್ಚ್‌, ಏಪ್ರಿಲ್‌ನಲ್ಲಿ ಜಿಲ್ಲೆಯ ದೊಡ್ಡ ಹಿಡುವಳಿದಾರರು ಭಾರೀ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ ಮಾಡಿ ಶೇಖರಣೆ ಮುಂದಾದ ವೇಳೆ ಕೃಷಿ ಇಲಾಖೆ ಅಗತ್ಯವಿರುವ ರೈತರಿಗೆ ಮಾತ್ರ ಗೊಬ್ಬರ ನೀಡುವಂತೆ ಮಾರಾಟಗಾರರಿಗೆ ಕಟ್ಟುನಿಟ್ಟಿನ ನಿರ್ದೇಶಿಸಿದರು. ಈ ಮೂಲಕ ಅನಾಗತ್ಯ ರಸಗೊಬ್ಬರ ದಾಸ್ತಾನಿಗೆ ಬ್ರೇಕ್‌ ಹಾಕಲಾಯಿತು. ಇದರಿಂದ ಗೊಬ್ಬರ ಪೂರೈಕೆ ಕಡಿಮೆಯಾದರೂ ಯಾವುದೇ ತೊಂದರೆ ಆಗುತ್ತಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಮುಂಗಾರು ಅವಧಿಗೆ ಗೊಬ್ಬರದ ಆತಂಕ ಬೇಡ

ಜಿಲ್ಲೆಯಲ್ಲಿ ಸುಮಾರು 97 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಈ ಪ್ರದೇಶಕ್ಕೆ ಜೂನ್‌ 6 ರವೇಳೆಗೆ ಸುಮಾರು 75,700 ಮೆಟ್ರಿಕ್‌ ಟನ್‌ನಷ್ಟು ರಸಗೊಬ್ಬರ ಬೇಕಾಗಿತ್ತು.

ಕಳೆದ ಏಪ್ರಿಲ್‌ 1ಕ್ಕೆ ಜಿಲ್ಲೆಯಲ್ಲಿ 57,261 ಮೆಟ್ರಿಕ್‌ ಟನ್‌ನಷ್ಟು ರಸಗೊಬ್ಬರ ಉಳಿದಿತ್ತು. ಏಪ್ರಿಲ್‌ನಿಂದ ಈವರೆಗೆ 32,544 ಮೆಟ್ರಿಕ್‌ ಟನ್‌ ಪೂರೈಕೆ ಆಗಿದೆ. ಅದರಲ್ಲಿ 34,356 ಮೆಟ್ರಿಕ್‌ ಟನ್‌ ರೈತರಿಗೆ ವಿತರಣೆ ಮಾಡಲಾಗಿದೆ, ಇನ್ನೂ 55,448 ಮೆಟ್ರಿಕ್‌ ಟನ್‌ ದಾಸ್ತಾನು ಇದೆ.ಹೀಗಾಗಿ, ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸರಬರಾಜು ಕೊರತೆಗೆ ಯುದ್ಧ ಕಾರಣ

ಒಟ್ಟು 13 ರಸಗೊಬ್ಬರ ಕಂಪನಿಗಳು ಜಿಲ್ಲೆಗೆ ಯೂರಿಯಾ, ಡಿಎಪಿ, ಎಂಒಪಿ ಹಾಗೂ ಕಾಂಪ್ಲೆಕ್ಸ್‌ ಗೊಬ್ಬರ ಪೂರೈಕೆ ಮಾಡುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದ ರಸಗೊಬ್ಬರ ತಯಾರಿಕೆಗೆ ಅಗತ್ಯ ಕಚ್ಚಾ ವಸ್ತು ದೊರೆಯದ ಕಾರಣಕ್ಕೆ ನಿಗದಿತ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡುವುದಕ್ಕೆ ಕಂಪನಿಗಳಿಂದ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

ಬಿತ್ತನೆ ಬೀಜಕ್ಕೂ ಕೊರತೆ ಇಲ್ಲ

ಜಿಲ್ಲೆಯಲ್ಲಿ ಭತ್ತ, ರಾಗಿ, ಮುಸುಕಿನ ಜೋಳ, ತೊಗರಿ, ಉದ್ದು, ಹೆಸರು, ಅಲಸಂದೆ, ನೆಲಗಡಲೆ ಹಾಗೂ ಸೂರ್ಯಕಾಂತಿ ಬಿತ್ತನೆ ಮಾಡಲಾಗುತ್ತದೆ. ಒಟ್ಟು ಮುಂಗಾರು ಅವಧಿಗೆ 6,358 ಕ್ವಿಂಟಾಲ್‌ ಬೇಡಿಕೆ ಇದ್ದು, ಸದ್ಯ 816.70 ಕ್ವಿಂಟಾಲ್‌ ಸರಬರಾಜು ಆಗಿದ್ದು, 112.74 ರೈತರಿಗೆ ವಿತರಣೆ ಆಗಿದೆ. ಇನ್ನೂ 703.96 ಕ್ವಿಂಟಾಲ್‌ ದಾಸ್ತಾನಿದೆ.

ಗೊಬ್ಬರ ರೈತರಿಗೆ ತಲುಪುವವರೆಗೆ ಕಂಪನಿ ಜವಾಬ್ದಾರಿ ಇದೆ

ರಸಗೊಬ್ಬರ ಪೂರೈಕೆ ಮಾಡುವ ಕಂಪನಿಗಳು ರಸಗೊಬ್ಬರ ರೈತರಿಗೆ ತಲುಪುವವರೆಗೆ ನಿಗಾ ವಹಿಸಬೇಕೆಂದು ಚಿಕ್ಕಮಗಳೂರು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲೇಶ್‌ ಸೂಚಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಚಿಕ್ಕಮಗಳೂರು ಜಿಲ್ಲೆಗೆ ರಸಗೊಬ್ಬರ ಪೂರೈಕೆ ಮಾಡುವ 13

ಖಾಸಗಿ ಕಂಪನಿ ಪ್ರತಿನಿಧಿಗಳೊಂದಿಗೆ ಶನಿವಾರ ಗೂಗಲ್‌ ಸಭೆ ನಡೆಸಿ ಮಾತನಾಡಿದ ಅವರು, ಮುಂಗಾರು ಆರಂಭಗೊಂಡಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ, ಸರಿಯಾದ ಸಮಯಕ್ಕೆ ರಸಗೊಬ್ಬರ ಪೂರೈಕೆ ಮಾಡಬೇಕು. ಕಂಪನಿಯಿಂದ ಪೂರೈಕೆ ಆಗುವ ಗೊಬ್ಬರವನ್ನುಮಾರಾಟಗಾರರು (ಡೀಲರ್‌)ಗಳ ಪೂರೈಕ ರೈತರಿಗೆ ಮಾರಾಟ ಮಾಡುತ್ತೀರಾ, ಈ ವೇಳೆ ಗೊಬ್ಬರ ರೈತರಿಗೆ ತಲುಪುತ್ತಿದೆಯೇ ಎಂಬುದನ್ನು ನಿಗಾ ವಹಿಸುವುದು ಸಹ ಕಂಪನಿಗಳ ಜವಾಬ್ದಾರಿಯಾಗಿದೆ ಎಂದಿದ್ದಾರು.

ಜಿಲ್ಲಾಧಿಕಾರಿ ಸಭೆಗೆ ಸರಿಯಾದ ಮಾಹಿತಿ ಕೊಡಿ

ಸೋಮವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಸಗೊಬ್ಬರ ಪೂರೈಕೆ ಕಂಪನಿಗಳ ಪ್ರತಿನಿದಿಗಳೊಂದಿಗೆ ಸಭೆ ಆಯೋಜಿಸಲಾಗಿದೆ. ಸಭೆಗೆ ಸರಿಯಾದ ಮಾಹಿತಿ ತೆಗೆದುಕೊಂಡು ಬರಬೇಕು. ಜತೆಗೆ, ಮಧ್ಯಪ್ರಾಚ್ಯ ದೇಶದಲ್ಲಿ ಯುದ್ಧ ಕಾರಣ ನೀಡುವಂತಿಲ್ಲ. ವಾಸ್ತವಾಗಿ ಯಾವ ಕಾರಣಕ್ಕೆ ರಸಗೊಬ್ಬರ ಪೂರೈಕೆಗೆ ಹಿನ್ನೆಡೆ ಉಂಟಾಗಿದೆ ಎಂಬ ಅಂಶವನ್ನು ಸಭೆಗೆ ನೀಡಬೇಕು ಎಂದು ಖಡಕ್‌ ಎಚ್ಚರಿಕೆ ನೀಡಲಾಗಿದೆ.

ಕಳೆದ 3 ತಿಂಗಳಲ್ಲಿ ಜಿಲ್ಲೆಗೆ ಯಾವ ಗೊಬ್ಬರ ಎಷ್ಟು ಸರರಾಜು (ಮೆಟ್ರಿಕ್‌ ಟನ್‌)

ಗೊಬ್ಬರಪೂರೈಸಬೇಕಾಗಿದ್ದ ಪ್ರಮಾಣಪೂರೈಕೆಯಾದ ಪ್ರಮಾಣ

ಯೂರಿಯಾ16,670- 8,320

ಎಂಒಪಿ11,850- 3797

ಡಿಎಪಿ5860 -1148

ಕಾಂಪ್ಲೆಕ್ಸ್‌29,510 -17,015

ಒಟ್ಟು 63,890 -30,279

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಕ್ ಉಗ್ರರ ಜತೆ ಮತ್ತಷ್ಟು ಜನಕ್ಕೆ ನಂಟು ಸಾಧ್ಯತೆ!: ರಾಜನಹಳ್ಳಿ ಶಿವಕುಮಾರ ಶಂಕೆ
ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಸಲೀಂಗೆ ಸಚಿವ ಸ್ಥಾನಕ್ಕೆ ಒತ್ತಾಯ