ಹಬ್ಬಗಳು ಸಮಾಜವನ್ನು ಒಗ್ಗೂಡಿಸುವ ಮಾಧ್ಯಮಗಳಾಗಿದ್ದು, ವಿವಿಧ ಧರ್ಮಿಯರು ಒಟ್ಟಾಗಿ ಹಬ್ಬಗಳನ್ನು ಆಚರಿಸಿದಾಗ ಪರಸ್ಪರ ಸೌಹಾರ್ದತೆ ಹೆಚ್ಚುತ್ತದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಅಭಿಪ್ರಾಯಪಟ್ಟರು.
ಮಲ್ಪೆ: ಹಬ್ಬಗಳು ಸಮಾಜವನ್ನು ಒಗ್ಗೂಡಿಸುವ ಮಾಧ್ಯಮಗಳಾಗಿದ್ದು, ವಿವಿಧ ಧರ್ಮಿಯರು ಒಟ್ಟಾಗಿ ಹಬ್ಬಗಳನ್ನು ಆಚರಿಸಿದಾಗ ಪರಸ್ಪರ ಸೌಹಾರ್ದತೆ ಹೆಚ್ಚುತ್ತದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಅಭಿಪ್ರಾಯಪಟ್ಟರು. ಮಂಗಳವಾರ ಸಂಜೆ ಜಮಾತೆ ಇಸ್ಲಾಮಿ ಹಿಂದ್ ಮಲ್ಪೆ ಶಾಖೆ ವತಿಯಿಂದ ಮಲ್ಪೆಯಲ್ಲಿ ಆಯೋಜಿಸಿದ್ದ ಈದ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು. ರಮ್ಜಾನ್ ಹಬ್ಬದಲ್ಲಿ ಪ್ರಾರ್ಥನೆ, ಉಪವಾಸ, ದಾನಧರ್ಮಗಳು ಪ್ರಮುಖ ಭಾಗವಾಗಿದ್ದು, ಇತರ ಧರ್ಮಗಳ ಹಬ್ಬಗಳಲ್ಲಿ ಕೂಡ ಇದರ ಸಾಮ್ಯತೆಯನ್ನು ಕಾಣುತ್ತೇವೆ. ಉಪವಾಸ, ಪ್ರಾರ್ಥನೆಯ ಮೂಲಕ ದೇಹದ ಶುದ್ದಿ, ಮಾನಸಿಕ ಹಾಗೂ ಆಧ್ಯಾತ್ಮಿಕ ಪರಿವರ್ತನೆಗೆ ಕಾರಣವಾಗುತ್ತದೆ. ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ದೂರಗೊಳಿಸಿ ಸಕಾರತ್ಮಕ ಆಲೋಚನೆಗಳನ್ನು ಮಾಡಲು ಹಬ್ಬ ಸೂಕ್ತ ಅವಕಾಶವಾಗಿದೆ ಎಂದರು.
ಮಾನವ ಸೃಷ್ಟಿಕರ್ತನ ಸಂಬಂಧ ಗಟ್ಟಿಗೊಳಿಸುವ ಹಬ್ಬ: ಈದ್ ಸಂದೇಶ ನೀಡಿದ ಮಣಿಪಾಲ ಎಂಐಟಿ ಅಸೋಸಿಯೇಟ್ ಪ್ರೊ. ಜಮಾಲುದ್ದೀನ್ ಹಿಂದಿ ಮಾತನಾಡಿ ಈದ್ ಸಾರ್ವತ್ರಿಕ ಹಬ್ಬವಾಗಿದ್ದು, ಈ ಸಮಯ ಮಾನವ ಮತ್ತು ಸೃಷ್ಟಿಕರ್ತನ ನಡುವಿನ ಸಂಬಂಧ ಮತ್ತು ಸೃಷ್ಟಿಗಳೊಂದಿಗೆ ಇರುವ ಸಂಬಂಧವನ್ನು ಗಟ್ಟಿಗೊಳಿಸುವ ಸಮಯವಾಗಿದೆ. ರಮ್ಜಾನ್ ಹಬ್ಬದ ಸಂದರ್ಭದಲ್ಲಿ ನಮ್ಮ ನೆರೆಹೊರೆಯವರು ಯಾರೂ ಕೂಡ ಹಸಿವಿನಿಂದ ಇರಬಾರದು ಎಂಬ ಸ್ಪಷ್ಟ ಸಂದೇಶವಿದೆ. ನಮ್ಮ ಆಚರಣೆಗಳನ್ನು ಇತರರೊಂದಿಗೆ ಹಂಚಿಕೊಂಡಾಗ ಸಮಾಜದಲ್ಲಿ ಸೌಹಾರ್ದತೆ ಮೂಡಲು ಸಾಧ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ಮಲ್ಪೆ ಸಿಎಸ್ಐ ಚರ್ಚಿನ ಧರ್ಮಗುರು ವಿನಯ್ ಸಂದೇಶ್ ಸಂದೇಶ ನೀಡಿದರು. ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕ ಅಬ್ದುಲ್ ಅಝೀಜ್, ಸ್ಥಾನೀಯ ಸಂಚಾಲಕ ಅಬ್ದುಲ್ ರೆಹಮಾನ್ ಹಾಗೂ ಇತರರು ಉಪಸ್ಥಿತರಿದ್ದರು. ಸಫ್ವಾನ್ ಪ್ರಾರ್ಥನೆ ನೆರವೇರಿಸಿ, ಶಬೀರ್ ಮಲ್ಪೆ ವಂದಿಸಿದರು. ಶೊಯೆಬ್ ಅಹ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.