ಕನ್ನಡಪ್ರಭ ವಾರ್ತೆ ರಾಮನಗರ
ಗಣೇಶ ಭಕ್ತರ ಮನೆಗೆ ತೆರಳಲು ಸಿದ್ಧನಾಗಿದ್ದಾನೆ. ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳೆ ಹೆಚ್ಚಾಗಿ ಖರೀದಿಯಾಗುತ್ತಿವೆ. ಸಮುದಾಯ, ಸಾರ್ವಜನಿಕ ಗಣೇಶೋತ್ಸವ ಅದ್ಧೂರಿತನಕ್ಕೆ ಸಿದ್ಧತೆ ಮಾಡಿಕೊಂಡಿವೆ. ಮಳೆ ಕೈಕೊಟ್ಟರು ಗೌರಿ-ಗಣೇಶ ಹಬ್ಬದ ಮುಖೇನ ವರುಣದೇವ ಕರುಣೆ ತೋರಲಿ ಎಂಬ ಪ್ರಾರ್ಥನೆ ಎಲ್ಲರ ಮೊಗದಲ್ಲಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ತರಕಾರಿ ಬೆಲೆ ಗಗನಕ್ಕೇರಿದ್ದು, ಕೊಳ್ಳುವವರ ಕೈ ಬಿಸಿಯಾಗಿದೆ.
ರಾಮನಗರದ ಎಪಿಎಂಸಿ ಮಾರುಕಟ್ಟೆ , ಹಲೇ ಬಸ್ ನಿಲ್ದಾಣ, ಎಂ.ಜಿ.ರಸ್ತೆಗಳ ಇಕ್ಕೆಲೆಗಳಲ್ಲಿ ಭರ್ಜರಿ ಜನ ಸಂದಣಿ. ಬಾಳೆ ಹಣ್ಣು 1 ಕೆ.ಜಿ.100-120 ರು.ಗಳಾಗಿದೆ. ಸೇಬು, ಕಿತ್ತಳೆ, ಮೂಸಂಬಿ ಬೆಲೆ,ಬೇಳೆ ಎಣ್ಣೆ ಮತ್ತಿತರ ದಿನಸಿ ಬೆಲೆ ಮುಗಿಲು ಮುಟ್ಟಿದೆ. ಆದರೂ ಜನ ಕೊಳ್ಳಲು ಮುಗಿಬಿದ್ದಿದ್ದಾರೆ.ನಗರದ ಮುಖ್ಯ ರಸ್ತೆಗಳಿಂದ ಹಿಡಿದು ಗ್ರಾಮೀಣ ಭಾಗದ ಓಣಿ-ಬಡಾವಣೆಗಳ ತನಕ ವಿವಿಧ ಮಾದರಿ ಪೆಂಡಾಲ್, ಬಣ್ಣ ಬಣ್ಣದ ವಿದ್ಯುತ್ ದೀಪಗಳ ತೋರಣ ಝಗಮಗಿಸುತ್ತಿದೆ. ರಸ್ತೆಯುದ್ದಕ್ಕೂ ಮರದ ರೆಂಬೆಗಳಿಗೆ ಲೈಟಿಂಗ್ಸ್, ಪೆಂಡಾಲ್ಗಳ ಮುಂದೆ ಕಣ್ಣು ಕೋರೈಸುವ ಬೆಳಕಿನ ಕಮಾನುಗಳು ಸಂಭ್ರಮದ ಕಳೆಯನ್ನು ಇಮ್ಮಡಿ ಗೊಳಿಸಿವೆ. ಗ್ರಾಮೀಣ ಪ್ರದೇಶದಿಂದ ಯುವಕರ ತಂಡಗಳು ಟಾಟಾ ವಾಹನಗಳಲ್ಲಿ ಬಂದು ಗಣೇಶನ ಮೂರ್ತಿ ಕೊಂಡು ಹೋಗುತ್ತಿದ್ದ ದೃಶ್ಯ ಕಾಣಿಸುತ್ತಿತ್ತು.
....ಕೋಟ್ ....
- ಎಚ್.ಎ.ಇಕ್ಬಾಲ್ ಹುಸೇನ್, ಶಾಸಕರು
ಪೊಲೀಸ್ ಇಲಾಖೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳ, ವಿಸರ್ಜನಾ ಮೆರವಣಿಗೆ ಮಾರ್ಗ, ಕೆರೆ, ನದಿಗಳು ಮತ್ತು ವಿಸರ್ಜನಾ ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜಿಸಲು ಕ್ರಮಕೈಗೊಂಡಿದೆ. 800ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 450 ಗೃಹರಕ್ಷಕ ದಳ, 4 ಕೆ.ಎಸ್.ಆರ್.ಪಿ ತುಕಡಿಗಳು,10 ಡಿ.ಎ.ಆರ್ ತುಕಡಿಗಳನ್ನು ನಿಯೋಜಿಸಲಾಗಿದ್ದು, 1286 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲು ವಹಿಸಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ), ರಾಸಾಯನಿಕ/ಭಾರ ಲೋಹ ಆಧಾರಿತ ಬಣ್ಣಗಳಿಂದ ಅಲಂಕರಿಸಿದ ಗೌರಿ-ಗಣೇಶ ಮೂರ್ತಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ, ವಿತರಣೆ, ಪ್ರದರ್ಶನ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.