ಚಾ.ನಗರದಲ್ಲಿ ಪಟಾಕಿ, ಪೂಜಾ ಸಾಮಗ್ರಿಗಳ ವ್ಯಾಪಾರ ಬಲು ಜೋರು
ದೀಪಾವಳಿಯನ್ನು ಮೂರು ದಿನಗಳ ಸಡಗರ ಸಂಭ್ರಮದಿಂದ ಆಚರಿಸಲು ಜಿಲ್ಲೆಯಾದ್ಯಂತ ಜನರು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸೋಮವಾರ ರಾತ್ರಿಯಿಂದ ಬೆಳಕಿನ ಹಬ್ಬ ದೀಪಾವಳಿ ಪ್ರಾರಂಭವಾಗಲಿದ್ದು ಇದಕ್ಕಾಗಿ ಗ್ರಾಮೀಣ ಪ್ರದೇಶದ ಜನರು ಸಾಮಗ್ರಿಗಳನ್ನು ಖರೀದಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.
ಈ ಸಂಭ್ರಮದ ದೀಪಾವಳಿ ಆಚರಣೆ ನಡುವೆ ಮಳೆರಾಯ ಅಗಮಿಸಿದ್ದು ಮಕ್ಕಳು ಬಹಳ ಖುಷಿಯಿಂದ ತಮ್ಮ ಪೋಷಕರ ಜೊತೆ ಪಟಾಕಿ ಅಂಗಡಿಗಳಿಗೆ ಬಂದು ಪಟಾಕಿಗಳನ್ನು ಖರೀದಿಸುತ್ತಿದ್ದರು.ದೀಪಾವಳಿ ದೊಡ್ಡ ಮತ್ತು ಭವ್ಯವಾದ ಹಬ್ಬಗಳಲ್ಲಿ ಒಂದಾಗಿದೆ. ದೀಪಾವಳಿಯು ಸಂತೋಷ, ದೀಪಾವಳಿ ಎಂದರೆ ಬೆಳಕಿನ ಹಬ್ಬ ವಿಜಯ ಮತ್ತು ಸಾಮರಸ್ಯವನ್ನು ಗುರುತಿಸಲು ಸ್ಮರಿಸುವ ಹಬ್ಬವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಸಂಪತ್ತು ಮತ್ತು ಸಮೃದ್ಧಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ.
ಜಿಲ್ಲಾ ಕೇಂದ್ರ ಚಾಮರಾಜನಗರದ ಮೆಘಾ ಕಾಂಪ್ಲೆಕ್ಸ್ ಬಳಿ ಪಟಾಕಿ ಅಂಗಡಿಗಳು ಹಾಗೂ ಅಂಗಡಿ ಬೀದಿಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು, ಅದರಲ್ಲೂ ಮೆಘಾ ಕಾಂಪ್ಲೆಕ್ಸ್ ಪಕ್ಕದ ಮೈದಾನದಲ್ಲಿ ತೆರೆದಿರುವ ಪಟಾಕಿ ಅಂಗಡಿಗಳ ಮುಂದೆ ವ್ಯಾಪಾರದ ಭರಾಟೆ ಬಲು ಜೋರಾಗಿಯೇ ಇತ್ತು.
ಸೋಮವಾರ ಬೆಳಗ್ಗೆಯಿಂದಲೇ ವಸ್ತುಗಳನ್ನು ಖರೀದಿಸಲು ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಹಳೆ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳು, ಪಟಾಕಿ ಅಂಗಡಿಗಳಿಗೆ ಮುಗಿಬಿದ್ದರು.
ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನ ದೀಪಾವಳಿ ಜಾತ್ರೆ ಮತ್ತು ಮಹಾ ರಥೋತ್ಸವ ನಡೆಯುತ್ತಿರುವುದರಿಂದ ಭಕ್ತರು ತಂಡೋಪ ತಂಡವಾಗಿ ಮಹದೇಶ್ವರನ ಬೆಟ್ಟಕ್ಕೆ ತೆರಳುತ್ತಿದ್ದರು.