ಶಿವಮೊಗ್ಗ, ಚಿತ್ರದುರ್ಗ ಚುನಾಯಿತರು, ಅಧಿಕಾರಿಗಳ ಜತೆ ಸಮಾಲೋಚನೆ ಸಭೆ
ಪಂಚಾಯಿತಿ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹಣಕಾಸು ಹಂಚಿಕೆ ಹಾಗೂ ಆಡಳಿತ ಸುಧಾರಣೆಗಾಗಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ 5ನೇ ರಾಜ್ಯ ಹಣಕಾಸು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣ ಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ರಾಜ್ಯದ ಎಲ್ಲ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕ ಹಣಕಾಸು ಹಂಚಿಕೆ ಮತ್ತು ಆಡಳಿತ ಸುಧಾರಣೆ ಅಂಶಗಳ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ. 22 ಜಿಲ್ಲೆಗಳಲ್ಲಿ ಸಭೆ ನಡೆದಿದೆ. ಪ್ರಸಕ್ತ ಸಾಲಿನ ಜೂನ್ ಒಳಗೆ ಆಯೋಗವು ರಾಜ್ಯಪಾಲರಿಗೆ 5ನೇ ಹಣಕಾಸು ಶಿಫಾರಸುಗಳನ್ನು ಸಲ್ಲಿಸಲಿದೆ ಎಂದು ತಿಳಿಸಿದರು.
ಆಯೋಗದ ಸದಸ್ಯರಾದ ಆರ್.ಎಸ್.ಕೋಂಡೆ, ಮೊಹಮ್ಮದ್ ಸನಾವುಲ್ಲಾ, ಸಮಾಲೋಚಕರಾದ ಎಂ.ಕೆ.ಕೆಂಪೇಗೌಡ, ಸುಪ್ರಸನ್ನ, ಯಾಲಕ್ಕಿಗೌಡ, ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತೂದೂರು ಗ್ರಾಪಂ ಅಧ್ಯಕ್ಷ ಭುಜಂಗ, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಚಿತ್ರದುರ್ಗ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮತ್ತಿತರರು ಇದ್ದರು.
ಗ್ರಾಪಂಗಳು ಕುಡಿಯುವ ನೀರು ನಿರ್ವಹಣೆಯನ್ನು ಸ್ವಂತ ಲಭ್ಯ ಅನುದಾನದಿಂದ ಮಾಡುತ್ತಿವೆ. ವಿದ್ಯುತ್ ಶುಲ್ಕ ಮರುಹೊಂದಾಣಿಕೆ ಸಮರ್ಪಕವಾಗಿ ಆಗುತ್ತಿಲ್ಲ. ಹೆಚ್ಚುವರಿ ಶುಲ್ಕಗಳನ್ನು ಕಡಿತಗೊಳಸಲು ಪ್ರತಿ ಸ್ಥಾವರಕ್ಕೆ ವಿವರವಾದ ಪ್ರತ್ಯೇಕ ಬಿಲ್ಲುಗಳನ್ನು ನೀಡಿದರೆ ಗ್ರಾಪಂಗಳಿಗೆ ಅನುಕೂಲವಾಗುತ್ತದೆ.ಭುಜಂಗ, ತೂದೂರು ಗ್ರಾಪಂ ಅಧ್ಯಕ್ಷ.
ಮಲೆನಾಡು ಭಾಗದಲ್ಲಿ ಅದರದ್ದೇ ಆದ ಸಮಸ್ಯೆಗಳಿರುವ ಕಾರಣ ವಿಶೇಷವಾಗಿ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಜೆಜೆಎಂ ಯೋಜನೆ ಬಂದ ನಂತರ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ.ಎನ್.ಹೇಮಂತ್, ಜಿಪಂ ಸಿಇಒ.