-ವಧು-ವರರ ಬೃಹತ್ ಸಮಾವೇಶ ಉದ್ಘಾಟಿಸಿದ ಮಹೇಶರೆಡ್ಡಿ ಮುದ್ನಾಳ್
ಕನ್ನಡಪ್ರಭ ವಾರ್ತೆ ಯಾದಗಿರಿ
ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯ ಹಂತವಾಗಿದೆ. ಉತ್ತಮ ಸಂಗಾತಿಗಳ ಆಯ್ಕೆ ಪ್ರತಿಯೊಬ್ಬರ ಆಕಾಂಕ್ಷೆಯಾಗಿರುತ್ತದೆ. ವಧು-ವರರ ವೇದಿಕೆ ಆಯೋಜನೆ ಮುಖಾಂತರ ಸಂಗಾತಿಗಳ ಆಯ್ಕೆ ಸುಲಭವಾಗುವುದು ಎಂದು ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್ ಹೇಳಿದರು.ಯಾದಗಿರಿ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ವೀರಶೈವ ಲಿಂಗಾಯತ, ರಡ್ಡಿ, ವೀರಮಹೇಶ್ವರ ಸ್ವಾಮಿ ಹಾಗೂ ಉಪ ಪಂಗಡಗಳ ವಧು-ವರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದಾಸಬಾಳ ಮಠದ ಶ್ರೀ ವೀರೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳನ್ನು ಒಳಗೊಂಡ ವಧು-ವರರ ಸಮಾವೇಶ ಏರ್ಪಡಿಸಿದ್ದು ಸಮಾಜ ಬಾಂಧವರ ವೈವಾಹಿಕ ಸಂಬಂಧಗಳನ್ನು ಬೆಳೆಸಲು ಅತ್ಯಂತ ಅನುಕೂಲಕರವಾಗಿದೆ ಎಂದರು.
ವೇದಿಕೆಯ ಮೇಲೆ ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಅವಿನಾಶ ಜಗನ್ನಾಥ್, ಬಸವರಾಜಯ್ಯ ಸ್ವಾಮಿ ದಂಡಗುಂಡ, ಪ್ರೇಮಾ ಪ್ರಿಂಟರ್ಸ್ ಮಹೇಶ ಕುಮಾರ ಹಿರೇಮಠ, ಜಂಗಮ ಸಮಾಜ ಮುಖಂಡ ಚನ್ನವೀರಯ್ಯಸ್ವಾಮಿ ಹಿರೇಮಠ ಕೌಳೂರು, ಸಿದ್ದು ಬಿರಾದರ ಆಶನಾಳ, ಬಸಯ್ಯಸ್ವಾಮಿ ಬಾಚಿಮಟ್ಟಿ, ರುದ್ರಸ್ವಾಮಿ ಹಿರೇಮಠ ಮತ್ತಿತರರು ಇದ್ದರು.ವಧು-ವರರ ಸಮಾವೇಶಕ್ಕೆ ಬೆಂಗಳೂರು, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯ ಆಂಧ್ರ ತೆಲಂಗಾಣದಿಂದ ಹೈದ್ರಾಬಾದ್, ಮಹೇಬೂಬ ನಗರದಿಂದ ವೀರಶೈವ ಲಿಂಗಾಯತ ಉಪ ಪಂಗಡಗಳ ನೂರಾರು ವಧುವರರ ಪೋಷಕರು, ಸಂಬಂಧಿಕರು ಆಗಮಿಸಿದ್ದರು. ಈ ವೇಳೆ ಪರಸ್ಪರ ವಧು-ವರರ ಮಾಹಿತಿಯನ್ನು ವಿನಿಮಯ ಮಾಡಿಕೊಂಡರು.
-----ಯಾದಗಿರಿ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವೀರಶೈವ ಲಿಂಗಾಯತ, ರಡ್ಡಿ, ವೀರಮಹೇಶ್ವರ ಸ್ವಾಮಿ ಹಾಗೂ ಉಪ ಪಂಗಡಗಳ ವಧು-ವರರ ಬೃಹತ್ ಸಮಾವೇಶವನ್ನು ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್ ಉದ್ಘಾಟಿಸಿದರು.7ವೈಡಿಆರ್13