ಚನ್ನಪಟ್ಟಣ: ಭೂಹಳ್ಳಿ, ಮೆಣಸಿಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು ೧೯ಕೋಟಿ ಕಾವೇರಿ ನೀರಾವರಿ ನಿಗಮ, ವಿವಿಧ ಇಲಾಖೆಗಳಿಂದ ಬಿಡುಗಡೆಯಾಗಿರುವ ೨೪ ಕೋಟಿ ರು.ವೆಚ್ಚದ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದರು.
ಈ ಹಿಂದೆ ಇಗ್ಗಲೂರು ಜಲಾಶಯದಿಂದ ಒಂದೇ ಮಾರ್ಗದಲ್ಲಿ ನೀರನ್ನು ಕೆರೆಗಳಿಗೆ ತರಲಾಗುತ್ತಿತ್ತು. ಇದರಿಂದ ಕೆರೆಗಳಿಗೆ ನೀರು ಸಮರ್ಪಕವಾಗಿ ಸರಬರಾಜಾಗದೆ ಗ್ರಾಮಸ್ಥರಿಗೆ ತೊಂದರೆ ಆಗುತ್ತಿತ್ತು. ಇದನ್ನು ಮಾರ್ಪಾಡು ಮಾಡಿ ಎರಡು ಮಾರ್ಗಗಳಿಂದ ಕೆರೆಗಳಿಗೆ ನೀರು ಸಂಪರ್ಕ ಕಲ್ಪಿಸಲು ಕಾಮಗಾರಿ ಪ್ರಾರಂಭಿಸಲಾಗಿದೆ. ೨ ತಿಂಗಳಲ್ಲಿ ಕೆಲಸ ಮುಗಿದ ಮೆಣಸಿಗನಹಳ್ಳಿ, ಉಜ್ಜನಹಳ್ಳಿ ಸೇರಿದಂತೆ ಭಾಗದ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ತಾಲೂಕಿನ ದೊಡ್ಡನಹಳ್ಳಿ ಮತ್ತು ಮೆಲ್ಲುಂಗರೆ ಗ್ರಾಮಗಳಲ್ಲಿ ಕೆರೆ ಇಲ್ಲದೇ ಗ್ರಾವಸ್ಥರಿಗೆ ಬಹಳ ತೊಂದರೆ ಆಗುತ್ತಿತ್ತು. ಇದನ್ನು ಮನಗಂಡು ಗ್ರಾಮಸ್ಥರ ಕೋರಿಕೆಯಂತೆ ದೊಡ್ಡನಹಳ್ಳಿ ಮತ್ತು ಮೆಲ್ಲುಂಗೆರೆ ಗ್ರಾಮಗಳಲ್ಲಿ ತಲಾ ೨ ಕೆರೆಗಳನ್ನು ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಿ ಈ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಹಿಂದೆ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಆದರೆ, ಹಿಂದೆ ಶಾಸಕರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಕೆರೆಗಳಿಗೆ ಸಮಪರ್ಕವಾಗಿ ನೀಡುವ ನೀರು ಬಿಡಿಸುವ ಕೆಲಸ ಮಾಡಲಿಲ್ಲ. ಇದರಿಂದ ಕೆರೆಗಳು ಬತ್ತಿ, ಅಂತರ್ಜಲ ಕುಸಿದು, ಈಗ ಗ್ರಾಮೀಣ ಭಾಗದಲ್ಲಿ ನೀರಿಗೆ ತೊಂದರೆ ಎದುರಾಗಿದೆ ಎಂದು ದೂರಿದರು.ಈ ಸಂದರ್ಭದಲ್ಲಿ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್. ಗಂಗಾಧರ್, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ಹಾಪಕಾಮ್ಸ್ ನಿರ್ದೇಶಕ ಪ್ರದೀಪ್ ಕುಮಾರ್, ಭೂಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಭೈರಪ್ಪ ಮುಖಂಡರಾದ ಅರಳಾಳುಸಂದ್ರ ಶಿವಪ್ಪ, ಸಿಂಗರಾಜಪುರ ರಾಜಣ್ಣ, ಪಿ.ಡಿ.ರಾಜು ಇತರರಿದ್ದರು.
ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಬಳಿ ಕಾವೇರಿ ನೀರಾವರಿ ನಿಗಮದ ಪೈಪ್ಲೈನ್ ಕಾಮಗಾರಿಗೆ ಶಾಸಕ ಯೋಗೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು.