ಕನ್ನಡಪ್ರಭ ವರದಿ ಫಲಶ್ರುತಿ!ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಎಡಿಫೈ ಸ್ಕೂಲ್ನಿಂದ ತಮ್ಮೆನಹಳ್ಳಿ, ಕುದುರೆಗೆರೆ, ಅಂದನಪ್ಪ ಲೇಔಟ್ ಕಡೆಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಸಂಪೂರ್ಣ ಕಿತ್ತುಹೋಗಿತ್ತು. ಶಾಲೆಗಳಿಗೆ ಹೋಗುವ ಮಕ್ಕಳ ಸ್ಥಿತಿ ಹೇಳುತ್ತಿರದಾಗಿತ್ತು. ರಸ್ತೆಯಲ್ಲಿ ಧೂಳು ತುಂಬಿಕೊಂಡು ವಾಹನಗಳು ಸಂಚಾರ ಮಾಡಿದರೆ ಹಿಂದೆ ಬರುವ ವಾಹನ ಸವಾರರ ಕಣ್ಣಿಗೆ ಧೂಳು ರಾಚುತ್ತಿತ್ತು.
ಇದರ ಬಗ್ಗೆ ‘ಕನ್ನಡಪ್ರಭ’ ಫೆ.8ರಂದು ‘ನರಬಲಿಗಾಗಿ ಕಾಯುತ್ತಿದೆ ಗುಂಡಿ ಬಿದ್ದ ರಸ್ತೆ’ ಶೀರ್ಷಿಕೆಯಡಿ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಪ್ರಕಟಣೆಗೊಂಡ ಕೆಲವೇ ದಿನಗಳಲ್ಲಿ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ಕಾಂಕ್ರೀಟ್ ಹಾಕಿಸಲಾಗಿದೆ.ಶಾಸಕ ಎಸ್.ಮುನಿರಾಜು ಮಾತನಾಡಿ, ರಸ್ತೆಯ ಸಮಸ್ಯೆ ಬಹಳ ದಿನಗಳಿಂದ ಹಾಗೆಯೇ ಇತ್ತು, ಅನೇಕ ದೂರುಗಳು ಬಂದಿದ್ದವು. ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ಆದರೂ ಜನರ ಹಿತ ದೃಷ್ಟಿಯಿಂದ ರಸ್ತೆಗೆ ಕಾಂಕ್ರೀಟ್ ಹಾಕಿಸಲಾಗಿದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿ ಮೋಹನ್ ಮಾತನಾಡಿ, ರಸ್ತೆಗೆ ಕಾಂಕ್ರೀಟ್ ಹಾಕಿಸಲಾಗಿದೆ. ಒಳ್ಳೆಯ ಗುಣಮಟ್ಟದ ರಸ್ತೆ ಅಭಿವೃದ್ಧಿ ಮಾಡಿಸಿದ್ದೇವೆ. ಈಗ ಸುತ್ತಮುತ್ತಲ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.