- ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಮಹಾ ಸಭೆ
ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಬ್ಯಾಂಕ್ ಕಟ್ಟಡ ನಿರ್ಮಿಸಲು ಶಾಸಕರ ಅನುದಾನದಲ್ಲಿ ಆರ್ಥಿಕ ನೆರವು ನೀಡುವುದಾಗಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಸೋಮವಾರ ಪಟ್ಟಣದ ಶ್ರೀ ಶೃಂಗೇರಿ ಶಾರದ ಸಭಾ ಭವನದಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 106ನೇ ಸರ್ವ ಸದಸ್ಯರ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ರೇವಣ ಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 106 ವರ್ಷದ ಹಿಂದಿನ ಬ್ಯಾಂಕ್, 1967 ಸದಸ್ಯರಿದ್ದು, 1 ಕೋಟಿ 21 ಲಕ್ಷ ಶೇರು ಹೊಂದಿದೆ. ಸದಸ್ಯರಿಂದ ಶೇ.99 ರಷ್ಟು ಸಾಲ ವಸೂಲಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ ಎಂದರು.ಪಿಗ್ಮಿ ಉಳಿತಾಯ, ಠೇವಣಿಯಿಂದ ಹಣ ಸಂಗ್ರಹವಾಗುತ್ತಿದ್ದು, ದ್ವಿಚಕ್ರ ವಾಹನ ಸಾಲ, ಬಂಗಾರ ಅಡಮಾನ ಸಾಲ, ವ್ಯಾಪಾರ ಸಾಲ, ರೈತರ ಅನುಕೂಲಕ್ಕಾಗಿ ರಸಗೊಬ್ಬರ ಮಾರಾಟ ಹಾಗೂ ಯಶಸ್ವಿನಿ ಯೋಜನೆ ಅಲ್ಲದೆ ರೈತರು ಬೆಳೆ ಯುವ ಧವಸ-ಧಾನ್ಯ ಅಡಕೆ ಅಡಮಾನ ಸಾಲವನ್ನು ಹಿಂದಿನಂತೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಸಂಘ 2024- 25ನೇ ಸಾಲಿಗೆ ₹30,85,132,59 ಗಳ ದಾಖಲೆ ಲಾಭ ಗಳಿಸಿದೆ ಎಂದು ಹೇಳಿದರು. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕಾರ ನೀಡಿ, ಇನ್ನೂ ಹೆಚ್ಚಿನ ಲಾಭ ಪಡೆಯಲು ಕೋರುತ್ತೇನೆ. ಸಂಘದ ಅರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದೆ. ಸಹಕಾರ ಸಂಘಕ್ಕೆ ನೂತನ ಬ್ಯಾಂಕ್ ಕಟ್ಟಡ ನಿರ್ಮಿಸುವ ಕುರಿತು ವಿನ್ಯಾಸ ಕೂಡ ತಯಾರಿಸಲಾಗಿದೆ. ಅತಿ ಹೆಚ್ಚಿನ ಮತ ನೀಡಿ ನಿರ್ದೇಶಕರನ್ನು ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ತಿಳಿಸಿದ ಅವರು ಸದಸ್ಯರ ಸಲಹೆ, ಆಗುಹೋಗುಗಳನ್ನು ತಿಳಿದುಕೊಂಡು ಪರಿಗಣಿಸಲಾಗುವುದು ಎಂದು ತಿಳಿಸಿದರು.ನಿರ್ದೇಶಕ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ನಾವುಗಳೆಲ್ಲಾ ಪುನರಾಯ್ಕೆ ಆದ ಸಂದರ್ಭದಲ್ಲಿ ಸಹಕಾರ ಸಂಘಕ್ಕೆ ಬ್ಯಾಂಕ್ ಕಟ್ಟಡ ನಿರ್ಮಿಸಲು ಚುನಾವಣೆ ಪೂರ್ವದಲ್ಲೇ ಹೇಳಲಾಗಿತ್ತು. ಸಹಕಾರ ಸಂಘದಿಂದ ₹9 ಕೋಟಿ ಸಾಲ ನೀಡಲಾಗಿದೆ. ಸಹಕಾರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸ್ಮಾರ್ಟ್ ಕಾರ್ಡು ವಿತರಿಸಲಾಗುತ್ತದೆ. ಸಹಕಾರ ಸಂಘಕ್ಕೆ ನೂತನ ಬ್ಯಾಂಕ್ ಕಟ್ಟಡ ನಿರ್ಮಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
-
ತರೀಕೆರೆಯಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ106ನೇ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ, ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷೆ ಬಿ.ಪುಷ್ಪಲತಾ, ನಿರ್ದೇಶಕರಾದ ಟಿ.ಎಸ್.ಪ್ರಕಾಶ್ ವರ್ಮ, ಎಂ.ನರೇಂದ್ರ ಮತ್ತಿತರರು ಇದ್ದರು.