ಬೆಳೆಗಾರರು ಉದ್ಧಿಮೆದಾರರಾದಾಗ ಆರ್ಥಿಕ ಸದೃಢತೆ: ಡಾ.ಸುರೇಶ್

KannadaprabhaNewsNetwork |  
Published : Nov 27, 2024, 01:05 AM IST
೨೬ಕೆಎಂಎನ್‌ಡಿ-೫ಕೃಷಿ ಮೇಳದಲ್ಲಿ ಭತ್ತದ ನೂತನ ತಳಿಗಳನ್ನು ರೈತರಿಗೆ ಪರಿಚಯಿಸಲಾಯಿತು. | Kannada Prabha

ಸಾರಾಂಶ

ಇಂದಿನ ಯುವ ಪೀಳಿಗೆ ಉದ್ಯೋಗವನ್ನರಸಿಕೊಂಡು ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುತ್ತಿರುವ ಕಾರಣದಿಂದ ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಲಭ್ಯತೆ ಕಡಿಮೆ ಇದೆ. ಕೃಷಿ ಅನಿವಾರ್ಯವಾಗಿರುವ ಸಂದರ್ಭದಲ್ಲಿ ರೈತರು ಕೃಷಿ ಯಂತ್ರೋಪಕರಣಗಳ ಮೇಲಿನ ಅವಲಂಬನೆಯನ್ನು ಹೆಚ್ಚು ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿಕರು ಬಲಾಢ್ಯರಾಗಬೇಕಾದರೆ ಬೆಳೆಗಾರರೇ ಉದ್ಧಿಮೆದಾರರಾಗಬೇಕು. ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರತಿಯೊಬ್ಬ ರೈತರು ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ ತಿಳಿಸಿದರು.

ತಾಲೂಕಿನ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ರೈತರು ಹೆಚ್ಚಾಗಿ ಬೆಳೆಯುತ್ತಿರುವ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮೌಲ್ಯವರ್ಧನೆಗೊಳಿಸಬೇಕು. ರೈತ ಉತ್ಪಾದಕ ಸಂಸ್ಥೆಗಳನ್ನು ಸದೃಢಗೊಳಿಸುವಂತೆ ಸಲಹೆ ನೀಡಿದರು.

ಇಂದಿನ ಯುವ ಪೀಳಿಗೆ ಉದ್ಯೋಗವನ್ನರಸಿಕೊಂಡು ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುತ್ತಿರುವ ಕಾರಣದಿಂದ ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಲಭ್ಯತೆ ಕಡಿಮೆ ಇದೆ. ಕೃಷಿ ಅನಿವಾರ್ಯವಾಗಿರುವ ಸಂದರ್ಭದಲ್ಲಿ ರೈತರು ಕೃಷಿ ಯಂತ್ರೋಪಕರಣಗಳ ಮೇಲಿನ ಅವಲಂಬನೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದರು.

ಕೃಷಿಯಲ್ಲಿ ರೈತರು ರಾಸಾಯನಿಕ ಗೊಬ್ಬರವನ್ನು ಹಾಗೂ ಕೀಟನಾಶಕಗಳನ್ನು ಹೆಚ್ಚಾಗಿ ಬಳಸುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಮಣ್ಣಿನ ಪೋಷಕಾಂಶ ಹಾಗೂ ಫಲವತ್ತತೆಯನ್ನು ಕಾಪಾಡಿಕೊಂಡು ಕೃಷಿಯನ್ನು ಮುನ್ನಡೆಸಬೇಕು. ರೈತರು ಸಾವಯವ ಗೊಬ್ಬರವನ್ನು ಬೇಸಾಯದಲ್ಲಿ ಉಪಯೋಗಿಸುವುದರಿಂದ ಫಲವತ್ತತೆ ಹೆಚ್ಚುತ್ತದೆ. ಮಣ್ಣಿನ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಬಹಳ ದುಷ್ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದರು.

ಕೃಷಿ ಸಚಿವರ ವಿಶೇಷ ಅಧಿಕಾರಿ ಎ.ಬಿ.ಪಾಟೀಲ್ ಮಾತನಾಡಿ, ಪ್ರತಿಯೊಬ್ಬರು ಸಮೃದ್ಧ ಜೀವನ ನಡೆಸಬೇಕಾದರೆ ಸೇವಿಸುವ ಆಹಾರ ಆರೋಗ್ಯಕರವಾಗಿರಬೇಕು. ಆರೋಗ್ಯಯುತವಾದ ಆಹಾರವನ್ನು ಆರೋಗ್ಯವಾದ ಮಣ್ಣಿನಲ್ಲಿ ಮಾತ್ರ ಬೆಳೆಯಲು ಸಾಧ್ಯ. ಮಾನವನ ಆರೋಗ್ಯಕ್ಕೂ ಹಾಗೂ ಮಣ್ಣಿನ ಆರೋಗ್ಯಕ್ಕೂ ಬಹಳ ನೇರವಾಗಿ ಸಂಬಂಧವಿದೆ. ಮಣ್ಣು ಬರಡಾದರೆ ಕಣ್ಣು ಕುರುಡಾಯಿತು ಎಂಬ ಮಾತನ್ನು ನೆನೆಯುತ್ತ ಮಣ್ಣಿನ ಸಂರಕ್ಷಣೆ ಮಾಡುತ್ತಾ ಬಂದಲ್ಲಿ ನಮ್ಮನ್ನು ನಾವು ಸಂರಕ್ಷಣೆ ಮಾಡಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕಳೆದ ವರ್ಷ ಬಿಡುಗಡೆಯಾಗಿರುವ ಹೊಸ ತಳಿಗಳು, ತಂತ್ರಜ್ಞಾನ ಹಾಗೂ ಕಿರುಹೊತ್ತಿಗೆಗಳನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವ್ಯವಸ್ಥಾಪನ ಮಂಡಳಿಯ ಸದಸ್ಯರುಗಳಾದ ಡಾ ಹೆಚ್ ಎಲ್ ಹರೀಶ್, ಡಾ.ಟಿ.ಕೆ.ಪ್ರಭಾಕರ ಶೆಟ್ಟಿ, ಎನ್.ದಿನೇಶ್, ಡಾ.ಎಂ.ಚಂದ್ರೇಗೌಡ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲ ಸಚಿವ ಡಾ.ಕೆ.ಸಿ.ನಾರಾಯಣಸ್ವಾಮಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಎಸ್.ಶಿವರಾಮು, ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ, ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯ ಡೀನ್ (ಕೃಷಿ ) ಡಾ.ಪಿ.ಎಸ್.ಫಾತಿಮಾ, ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್ ಸಹ ವಿಸ್ತರಣಾಧಿಕಾರಿ ನಿರ್ದೇಶಕ ಡಾ.ಎ.ಡಿ.ರಂಗನಾಥ್ ಇತರರಿದ್ದರು.

ಕೃಷಿ ಮೇಳದ ವಿಶೇಷತೆಗಳು

ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಗಳಿದ್ದು, ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆ ಮಾಡಲಾಗಿರುವ ಮುಸುಕಿನ ಜೋಳದ ಅಭಿವೃದ್ಧಿ ತಳಿ, ಹಲಸಂದೆ ಕೆಬಿಸಿ -೧೨, ಎಣ್ಣೆ ಕಾಳು ಸೂರ್ಯಕಾಂತಿ ಕೆವಿಎಸ್‌ಹೆಚ್-೯೦ ಮತ್ತು ದೀರ್ಘವಾದ ಹಾಗೂ ಹೆಚ್ಚು ಬೆಳೆ ಕೊಡುವ ಪಿಎಲ್‌ಬಿ-೩೪೨ ಮೇವಿನ ಬೆಳೆಯಾದ ನಾಲ್ಕು ಪ್ರಮುಖ ತಳಿಗಳನ್ನು ಅನಾವರಣಗೊಳಿಸಲಾಗಿತ್ತು.

ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಶಿಫಾರಸ್ಸು ಮಾಡಲಾಗಿರುವ ಭತ್ತ, ರಾಗಿ ಮತ್ತು ಸಿರಿಧಾನ್ಯ, ಮುಸುಕಿನ ಜೋಳದಲ್ಲಿ ಹೈಬ್ರಿಡ್ ತಳಿ, ಅತ್ಯುತ್ತಮ ಇಳುವರಿ ಕೊಡುವ ಹಾಗೂ ಹೆಚ್ಚು ಸಕ್ಕರೆ ಅಂಶವಿರುವ ಕಬ್ಬಿನ ತಳಿಯಾದ ಬಾಹುಬಲಿ - ೫೧೭, ಮೇವಿನ ಬೆಳೆ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ನೀರಾವರಿ ಪದ್ಧತಿ ಹಾಗೂ ಇನ್ನಿತರೆ ರೈತರಿಗೆ ಬೇಕಾದ ಮುಖ್ಯ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.

ಹೊಸ ತಳಿಗಳ ಬಿಡುಗಡೆ:

ಬಂಬಾರ ಕಡಲೆ ಮತ್ತು ಹಡಲೆ ರಾಗಿ

ಕೃಷಿ ಮೇಳದಲ್ಲಿ ಆರೋಗ್ಯದ ದೃಷ್ಟಿಯಿಂದ ಉಪಯೋಗವಾಗುವಂತಹ ಬಂಬಾರ ಮತ್ತು ಹಡಲೆ ರಾಗಿ ಎಂಬ ೨ ಬೆಳೆಗಳನ್ನು ಹೊಸದಾಗಿ ಪರಿಚಯ ಮಾಡುವುದರ ಜೊತೆಗೆ ಬೆಳೆಸುವ ವಿಧಾನವನ್ನು ರೈತರಿಗೆ ತಿಳಿಸಿಕೊಡಲಾಯಿತು.

ಅಡಲೆ ರಾಗಿಯಲ್ಲಿ ಅಧಿಕ ಪ್ರೊಟೀನ್ ಅಂಶ ಇದ್ದು, ಮೇಘಾಲಯ, ಮಿಜೋರಾಮ್, ಸಿಕ್ಕಿಂನಲ್ಲಿ ಈ ಬೆಳೆಯನ್ನು ಬೆಳೆದು ಗಂಜಿ ರೂಪದಲ್ಲಿ ಬಳಸಲಾಗುತ್ತದೆ. ಹಡಲೆ ರಾಗಿಯು ಮಾನವನ ಮೂಳೆಯ ಸಾಂದ್ರತೆ ಕಾಪಾಡಲು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹಾಸ್ಟಿಯೋ ಪೊರೋಸಿಸ್ ರೋಗವನ್ನು ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ.

ಬಂಬಾರ ನೆಲೆಗಡಲೆಯು ಹಲಸಂದೆ ಬೆಳೆಯ ಜಾತಿಗೆ ಸೇರಿದೆ. ಬಂಬಾರವು ನೆಲಗಡಲೆಯ ರೀತಿ ನೆಲದಲ್ಲಿ ಬಿಡುವುದರಿಂದ ಇದು ವಿಶೇಷವಾಗಿದೆ. ಬಂಬಾರ ನೆಲಗಡಲೆಯಲ್ಲಿ ಪೊಟ್ಯಾಶಿಯಂ ಅಂಶ ಜಾಸ್ತಿ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಹಳ ಉಪಯುಕ್ತವಾಗುತ್ತದೆ.

ರಾಜಮುಡಿ ಎತ್ತರ, ಅವಧಿ ಕಡಿಮೆ

ಕೃಷಿಯಲ್ಲಿ ರಾಜಮುಡಿ ತಳಿ ಭತ್ತವು ಬಹಳ ಗುಣಮಟ್ಟದ ತಳಿಯಾಗಿದೆ. ಇದು ಎತ್ತರವಾಗಿ ಬೆಳೆಯುವ ಹಾಗೂ ಕೊಟ್ಟಿಗೆ ಗೊಬ್ಬರದಲ್ಲಿ ಮಾತ್ರ ಬೆಳೆಯಾಗಿತ್ತು. ಹಿಂದೆ ರಾಜಮುಡಿ ಬೆಳೆಯನ್ನು ೧ ವರ್ಷಕ್ಕೆ ೧ ಬೆಳೆಯನ್ನು ಬೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ನಾವು ವಾರ್ಷಿಕವಾಗಿ ೨ ಬೆಳೆ ಬೆಳೆಯಲು ರಾಜಮುಡಿ ತಳಿಯಲ್ಲಿ ಗುಣಮಟ್ಟತೆಯನ್ನು ಕಾಪಾಡುವ ಜೊತೆಗೆ ಅದರ ಎತ್ತರ ಹಾಗೂ ಅವಧಿಯನ್ನು ಕಡಿಮೆಗೊಳಿಸಲಾಗಿದೆ. ಸಾವಯವ ಹಾಗೂ ರಾಸಾಯನಿಕ ಸಮಗ್ರ ಗೊಬ್ಬರದಿಂದ ಬೆಳೆಯುವ ಜೊತೆಗೆ ಹಿಂಗಾರು ಹಾಗೂ ಮುಂಗಾರು ೨ ಹವಾಮಾನಕ್ಕೂ ಹೊಂದಿಕೆಯಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಚಿರತೆ ದಾಳಿಗೆ ಮಹಿಳೆ ಬಲಿ