ಕಲಬುರಗಿ ಚಂಪಾ ಬ್ಯಾಡ್ಮಿಂಟನ್‌ ಮೈದಾನದ ಅವ್ಯವಸ್ಥೆ ಸರಿಪಡಿಸಿ

KannadaprabhaNewsNetwork | Published : Aug 28, 2024 12:50 AM

ಸಾರಾಂಶ

ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಒಳಾಂಗಣ ಬ್ಯಾಡ್ಮಿಂಟನ್‌ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಬ್ಯಾಡ್ಮಿಂಟನ್‌ ಅಸೋಶಿಯೇಷನ್ ಕಲಬುರಗಿ ಅಧ್ಯಕ್ಷ ಅರುಣಕುಮಾರ ಪಾಟೀಲ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಒಳಾಂಗಣ ಬ್ಯಾಡ್ಮಿಂಟನ್‌ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಬ್ಯಾಡ್ಮಿಂಟನ್‌ ಅಸೋಶಿಯೇಷನ್ ಕಲಬುರಗಿ ಅಧ್ಯಕ್ಷ ಅರುಣಕುಮಾರ ಪಾಟೀಲ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿರುವ ಬ್ಯಾಡ್ಮಿಂಟನ್‌ ಸುಸಜ್ಜಿತ ಒಳಾಂಗಣ ಬಿಟ್ಟರೆ ಕಲಬುರಗಿಯಲ್ಲಿ ಮಾತ್ರ ಇರೋದು, 6 ಬ್ಯಾಡ್ಮಿಂಟನ್‌ ಕೋರ್ಟ್‌ಗಳಿರುವ ಒಳಾಂಗಣ ಇರುವುದು ಇಲ್ಲೇ. ಆದಾಗ್ಯೂ ಇವು ಸುಸಜ್ಜಿತವಾಗಿಲ್ಲವೆಂದು ದೂರಿದ್ದಾರೆ.

ಸಾಕಷ್ಟು ಯುವಕ/ಯುವತಿಯರು ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಹೊತ್ತು ಸುಮಾರು ವಿದ್ಯಾರ್ಥಿಗಳು ರು. 400, ಹಾಗೂ ಯುವಕರು ರು.500 ಕೊಟ್ಟು ದಿನಾಲೂ ಆಟ ಆಡುತ್ತಿದ್ದಾರೆ. ಒಳಾಂಗಣದಲ್ಲಿ ಸಮಸ್ಯೆಗಳ ಸರಮಾಲೆ ಬಹಳ ವರ್ಷಗಳಿಂದ ಇದ್ದಿರುತ್ತದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ. ತಾವುಗಳು ಮಂಡಳಿಯ ಅನುದಾನದಲ್ಲಿ ಸರಿಪಡಿಸಿ ಕ್ರೀಡಾಪಟುಗಳಿಗೆ ಸಹಾಯ ಮಾಡುವಂತೆ ಅರುಣ ಆಗ್ರಹಿಸಿದ್ದಾರೆ.

6 ಕೋರ್ಟಗಳ ಮೇಲೆ ಮ್ಯಾಟ್ ಹಾಳಾಗಿ ಹೋಗಿವೆ, ಇಲ್ಲಿರುವ ಪುರುಷ/ಮಹಿಳೆಯರ ಶೌಚಾಲಯಗಳು ಹದಗೆಟ್ಟು ಹೋಗಿವೆ, ಒಳಾಂಗಣದಲ್ಲಿ ಮೇಲ್ಚಾವಣಿ ಸೋರಿ ಉಡನ್ ಫ್ಲೋರಿಂಗ್ ಹಾಳಾಗಿದೆ. ಈ ಒಳಾಂಗಣಕ್ಕೆಂದೇ ತಂದಿರತಕ್ಕಂತಹ ಜನರೇಟರ್ ಬೇರೆ ಸರಕಾರಿ ಇಲಾಖೆಗೆ ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ವಿದ್ಯುತ್ ಇಲ್ಲದಿದ್ದರೆ ಬೆಳಕಿಲ್ಲದಂತಾಗಿದೆ ಎಂದು ಕ್ರೀಡಂಗಣದ ಅವ್ಯವಸ್ಥೆ ಪಟ್ಟಿ ಮಾಡಿದ್ದಾರೆ.

ಸುಮಾರು ವರ್ಷಗಳಿಂದ ಒಳಾಂಗಣದಲ್ಲಿರುವ ರೂಮ್ ಗಳ ರಿಪೇರಿ ಆಗಿಲ್ಲ. ಒಳಾಂಗಣದಲ್ಲಿ ವೆಂಟಿಲೇಟರ್‌ಗಳು ಹಾಳಾಗಿದ್ದು ಸರಿಪಾಡೋರು ಇಲ್ಲ, ಸುಮಾರು ವರ್ಷಗಳಿಂದ ಒಳಾಂಗಣಕ್ಕೆ ಬಣ್ಣ ಹಚ್ಚಿಲ್ಲ. ಕ್ರೀಡಾಪಟುಗಳಿಗೆ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿಲ್ಲ ಎಂದು ಅರುಣ ಪಾಟೀಲ್‌ ಖೇದ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಕ್ರೀಡಾ ಸಚಿವರ ಇಚ್ಛೆಯಂತೆ ಹವಾನಿಯಂತ್ರಿತ ಕ್ರೀಡಾಂಗಣ ಮಾಡಿದ್ದಾರೆ. ಈ ಭಾಗದ ಕ್ರೀಡಾಪಟುಗಳಿಗೆ ಮಾಡಿ ಕೊಟ್ಟರೆ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಾವಳಿ ಆಯೋಜನೆ ಮಾಡಲು ಸಹಾಯವಾಗುತ್ತದೆ. ಮಾಸಿಕ ರು.60,000/- ರಿಂದ 70,000/- ರವರೆಗೆ ಒಳಾಂಗಣ ಕ್ರೀಡಾಪಟುಗಳಿಂದ ಹಣ ಸಂಗ್ರಹಿಸಿ ಪ್ರಾ. ಆಯುಕ್ತರ ಖಾತೆಗೆ ಹಾಕಿಯೂ ನಾವು ಸೌಲಭ್ಯ ವಂಚಿತವಾಗಿದ್ದೇವೆಂದು ಅರುಣ ಪಾಟೀಲ್‌ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ರ ಗಮನ ಸೆಳೆದಿದ್ದಾರೆ.

ಈ ಸಂದರ್ಭದಲ್ಲಿ ದುಂಡೇಶ್ ಸುಬೇದಾರ್, ಸತೀಶ್ ಗೋಳ, ಜಗನ್ನಾಥ್ ಪಟ್ಟಣಶೆಟ್ಟಿ, ಶರಣು ಬೂಸನೂರ್, ಉದಯ್ ಪಾಟೀಲ ಇದ್ದರು.

Share this article