ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಮದಕರಿನಾಯಕನ ಪುಣ್ಯತಿಥಿ ಅಂಗವಾಗಿ ಮುಂಜಾನೆಯಿಂದಲೇ ಸಿದ್ಧತೆಗಳು ನಡೆದವು. ಹೂಗಳಿಂದ ಸಿಂಗಾರ ಮಾಡುವುದ ದುರ್ಗದ ಯುವಕರು ತಂಡೋ ಪತಂಡವಾಗಿ ಆಗಮಿಸಿ ವೀಕ್ಷಿಸಿದರು. ದಿನವಿಡೀ ಸೆಲ್ಫಿಗಳನ್ನು ತೆಗೆದುಕೊಂಡು ಸ್ಟೇಟಸ್ಗಳಿಗೆ ಹಾಕಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಳಿಗ್ಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮದಕರಿ ನಾಯಕನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಸಮಾಜದವರು ಸೇರಿ ರಾಜಾವೀರ ಮದಕರಿನಾಯಕನ ಪುಣ್ಯಸ್ಮರಣೆ ಆಚರಿಸುತ್ತಿರುವುದು ನಿಜವಾಗಿಯೂ ನಾಡ ದೊರೆಗೆ ನೀಡುವ ಬಹುದೊಡ್ಡ ಗೌರವ. 77 ಪಾಳೇಗಾರರಲ್ಲಿ ಚಿತ್ರದುರ್ಗದ ಕೋಟೆ ಆಳಿದ ಮದಕರಿನಾಯಕ ಕೂಡ ಒಬ್ಬರು. 12ನೇ ವಯಸ್ಸಿನಲ್ಲಿಯೇ ಪಟ್ಟಾಭಿಷೇಕವಾಗಿ ಇಪ್ಪತ್ತೈದು ವರ್ಷಗಳ ಕಾಲ ಆಳ್ವಿಕೆ ನಡೆಸಿ ನಲವತ್ತು ವರ್ಷದಲ್ಲಿ ಮದಕರಿ ನಾಯಕನ ಅಂತ್ಯವಾಗುತ್ತದೆ. ಹಾಗಾಗಿ ಕೇವಲ ನಾಯಕ ಜನಾಂಗದವರಷ್ಟೆ ಅಲ್ಲ ಎಲ್ಲಾ ಜಾತಿಯವರು ಮದಕರಿನಾಯಕನ ಇತಿಹಾಸವನ್ನು ತಿಳಿದುಕೊಳ್ಳ ಬೇಕೆಂದರು.ಆಳ್ವಿಕೆಯಲ್ಲಿ ಶೌರ್ಯ ಪರಾಕ್ರಮ ಮೆರೆದಿರುವ ರಾಜಾವೀರ ಮದಕರಿನಾಯಕ ಶತ್ರುಗಳಿಂದ ಕೋಟೆಯನ್ನು ರಕ್ಷಿಸಿ ಅಜರಾಮರವಾಗಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿ ಪುಣ್ಯಸ್ಮರಣೆಯನ್ನು ನಾಯಕ ಸಮಾಜದಿಂದ ಸರಳವಾಗಿ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಾಭಿಷೇಕ, ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಇದಕ್ಕೆ ಎಲ್ಲಾ ಜಾತಿಯವರ ಸಹಕಾರ ಅತ್ಯವಶ್ಯಕ ಎಂದು ಕೋರಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಮದಕರಿನಾಯಕನ ಪ್ರತಿಮೆಗೆ ಪುಷ್ಪಾರ್ಚನೆ ಅರ್ಪಿಸಿ ಮಾತನಾಡಿ, ಚಿತ್ರದುರ್ಗ ದಲ್ಲಿ ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡುವುದಾಗಿ ನಮ್ಮ ನಾಯಕರುಗಳು ಕಳೆದ ವರ್ಷವೇ ಭರವಸೆ ನೀಡಿದ್ದಾರೆ. ಅದರಂತೆ ಎಲ್ಲವೂ ನಡೆಯುತ್ತದೆ ಎಂದು ಹೇಳಿದರು.