ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಕೋಟೆ ಆಂಜನೇಯ ದೇವಸ್ಥಾನದ ಬಳಿ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ 3.15ಕ್ಕೆ ಬೃಹತ್ ಶೋಭಾಯಾತ್ರೆ ಆರಂಭಗೊಂಡಿತು.
ಕೋಟೆ ಆಂಜನೇಯ ದೇವಸ್ಥಾನದಿಂದ ಹರಿಹರ ರಸ್ತೆ, ಇಜಾರಿ ಸಿರಸಪ್ಪ ವೃತ್ತ, ಪುರಸಭೆ, ಹಳೆಬಸ್ ನಿಲ್ದಾಣ ಹೀಗೆ ಹೊಸಪೇಟೆ ರಸ್ತೆ ಮೂಲಕ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿ ಅಲ್ಲಿಂದ ಕಾಯಕದಹಳ್ಳಿ ರಸ್ತೆಯಲ್ಲಿರುವ ನಾಯಕನಕೆರೆಯಲ್ಲಿ ವಿಸರ್ಜನೆಗೊಂಡಿತು.ಹೊಸಬಸ್ ನಿಲ್ದಾಣದ ಬಳಿ ಇರುವ ಇಜಾರಿ ಶಿರಸಪ್ಪ ವೃತ್ತದಲ್ಲಿ ಕ್ರೇನ್ ಮೇಲಿಂದ ಪಟ್ಟಣದ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು ಗಣೇಶ ಮೂರ್ತಿ ಮೇಲೆ ಹೂವಿನ ಸುರಿಮಳೆ ಗೈದರು.
ಡಿಜೆ ಹಾಡಿಗೆ ಯುವ ಜನತೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಈ ಗಣೇಶ ಮೆರವಣಿಗೆಯ ಬೃಹತ್ ಶೋಭಾ ಯಾತ್ರೆ ಕಣ್ತುಂಬಿಕೊಳ್ಳಲು ಪಟ್ಟಣದ ವಿವಿಧ ಬಡಾವಣೆಗಳಿಂದ ಯುವಕರು, ವೃದ್ಧರು, ಮಹಿಳೆಯರು, ಮಕ್ಕಳು ಆಗಮಿಸಿದ್ದರು.
ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಜಿ. ಸಜ್ಜನ ನೇತೃತ್ವದಲ್ಲಿ ಪಟ್ಟಣದ ಪಿಎಸ್ಐ ಶಂಭುಲಿಂಗ ಹಿರೇಮಠ, ತಾಲೂಕಿನ ವಿವಿಧ ಠಾಣೆಗಳ ಪಿಎಸ್ಐಗಳಾದ ಕಿರಣಕುಮಾರ, ವಿಜಯಕೃಷ್ಣ, ನಾಗರತ್ನಮ್ಮ, ಕೂಡ್ಲಿಗಿ ಪಿಎಸ್ಐ ಪ್ರಕಾಶ, ಹೂವಿನ ಹಡಗಲಿ ಪಿಎಸ್ಐ ಮಣಿಕಂಠ ಸೇರಿದಂತೆ ಸಾಕಷ್ಟು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು. ವಿಎಚ್ಪಿ, ಬಜರಂಗದಳದ ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.