ಹಾವೇರಿ: ಮನುಷ್ಯ ಜೀವನದಲ್ಲಿ ತನ್ನ ಗುರಿಯನ್ನು ಸಾಧಿಸಬೇಕೆಂಬ ದೃಢ ನಿರ್ಧಾರ ಜೊತೆಗಿದ್ದರೆ ಸೋಲು ಸಹ ನಮ್ಮ ಸಮೀಪ ಸುಳಿಯಲು ಹಿಂಜರಿಯುತ್ತದೆ. ಅದಕ್ಕಾಗಿ ನಮ್ಮ ಗಮನ ಯಾವಗಲೂ ಗುರಿಯ ಕಡೆ ಇರಬೇಕು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮರೋಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಜರುಗುತ್ತಿರುವ ಪರಿವರ್ತನೆಯಡೆಗೆ ಧರ್ಮಜಾಗೃತಿ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕಾಲ ಕೆಟ್ಟಿತೆಂದು ಕೆಲವರು ಹೇಳುತ್ತಾರೆ, ಆದರೆ ಕಾಲ ಕೆಡುವುದಿಲ್ಲ, ಕೆಟ್ಟಿರುವುದು ಮನುಷ್ಯನ ನಡತೆ ಮತ್ತು ಆಚಾರ ವಿಚಾರ ಎಂಬುದನ್ನು ನೆನಪಿಡಬೇಕಾಗುತ್ತದೆ. ಸಂಸ್ಕಾರ ಒಂದಿದ್ದರೇ ಸಂಪೂರ್ಣ ಜಗತ್ತುನ್ನು ಗೆಲ್ಲಬಹುದು, ಅಹಂಕಾರ ಒಂದಿದ್ದರೆ ಗೆದ್ದ ಜಗತ್ತನ್ನು ಕಳೆದುಕೊಳ್ಳಬಹುದು. ಚುಚ್ಚುವುದು ಸೂಜಿಯ ಗುಣ, ಆದರೆ ದಾರದ ಜೊತೆ ಗೆಳೆತನ ಮಾಡಿದ ಮೇಲೆ ಸೂಜಿಯು ಸಹ ಬದಲಾಗಿ ಅದು ಕೂಡ ಜೋಡಿಸುವ ಕಾರ್ಯವನ್ನು ಮಾಡುತ್ತದೆ. ಒಳ್ಳೇಯತನ ಜೊತೆಗಿದ್ದರೇ ಒಳ್ಳೆಯದೇ ಆಗುವುದು ಎಂದರು.ಪ್ರವಚನಕಾರ ಜಲ್ಲಾಪುರದ ಗುರುಮಹಾಂತಯ್ಯ ಶಾಸ್ತ್ರೀಜಿ ಆರಾಧ್ಯಮಠ ಭಸ್ಮದ ಕುರಿತು ಮಾತನಾಡಿ, ಭಸ್ಮ ಧಾರಣೆಯಿಂದ ಪಾಪವೆಲ್ಲವೂ ನಾಶವಾಗಿ ಶಿವನ ಸ್ಮರಣೆಯಾಗುತ್ತದೆ, ಭಸ್ಮವು ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದೆ, ಧಾರ್ಮಿಕವಾಗಿ ಇದು ಆಧ್ಯಾತ್ಮಿಕತೆಯ ಶುದ್ಧೀಕರಣ ನಕರಾತ್ಮಕ ಶಕ್ತಿಗಳಿಂದ ರಕ್ಷಣೆ ಮತ್ತು ಶಿವನ ಜೊತೆಗಿನ ಸಂಕೇತವನ್ನು ಪ್ರತಿನಿಧಿಸಿದರೆ, ವೈಜ್ಞಾನಿಕವಾಗಿ ಇದು ದೇಹದ ತೇವಾಂಶವನ್ನು ಹೀರಿಕೊಳ್ಳುವುದರ ಜೊತೆಗೆ ಶೀತ ಮತ್ತು ತಲೆನೋವನ್ನು ಕಡಿಮೆ ಮಾಡುವುದರ ಜೊತೆಗೆ ರೋಗ ನಿರೋಧಕ ಶಕ್ತಿದಾಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಕ್ತಾಧಿಗಳಿಗೆ ಶ್ರೀಗಳು ಭಸ್ಮಧಾರಣೆ ಮಾಡಿದರು. ಇದಕ್ಕೂ ಪೂರ್ವದಲ್ಲಿ ಶ್ರೀಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸದ್ಭವನಾ ಪಾದಯಾತ್ರೆ ಜರುಗಿತು. ಪಾದಯಾತ್ರೆಯಲ್ಲಿ ನೆಗಳೂರಿನ ಸಂಸ್ಥಾನ ಹಿರೇಮಠದ ಪಾಠಶಾಲಾ ವಿದ್ಯಾರ್ಥಿಗಳು, ಮರೋಳ, ಹಾಲಗಿ, ಬೆಳವಿಗಿ, ಮೇವುಂಡಿ, ಗ್ರಾಮಗಳ ಭಕ್ತಾಧಿಗಳು ಪಾಲ್ಗೊಂಡಿದ್ದರು.