ಮರಿಯಮ್ಮನಹಳ್ಳಿ : ಎಲ್ಲ ಕಲೆಗಳಿಗೂ ಜಾನಪದ ಕಲೆ ತಾಯಿ ಬೇರಾಗಿದ್ದು, ಜಾನಪದ ಕಲೆ ಉಳಿಸಿಕೊಳ್ಳಲು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಜಾನಪದ ಕಲೆ ಕಲಿಸಬೇಕಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮಾತಾ ಬಿ. ಮಂಜಮ್ಮ ಜೋಗತಿ ಹೇಳಿದರು.
ಇಲ್ಲಿನ ದುರ್ಗಾದಾಸ್ ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆ ಅಡಿಯಲ್ಲಿ ನಡೆದ ಹಾಡಿರೋ ರಾಗಗಳ - ತೂಗಿರೇ ದೀಪಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಜಾನಪದ ಕಲೆ ಉಳಿದುಕೊಂಡಿವೆ. ಹಬ್ಬ-ಜಾತ್ರೆಗಳಲ್ಲಿ ಬಯಲಾಟ, ನಾಟಕ, ಹಾಡು, ಕುಣಿತ, ಕೋಲಾಟ, ಭಜನಾ ಪದ, ಹಲಗೆ ವಾದನ, ಸೋಬಾನೆ ಪದ ಸೇರಿದಂತೆ ಅನೇಕ ಜಾನಪದ ಕಲೆಗಳ ಪ್ರದರ್ಶನ ನಡೆಯುತ್ತಿರುವ ಮೂಲಕ ಇಂದಿಗೂ ಜಾನಪದ ಕಲೆಯನ್ನು ಜೀವಂತವಾಗಿ ಇರಿಸಿದ್ದಾರೆ. ಈ ಜಾನಪದ ಕಲೆಗಳನ್ನುಸಂಗ್ರಹಿಸಬೇಕಾದ ಮತ್ತು ಇವುಗಳನ್ನು ನಮ್ಮ ಮಕ್ಕಳಿಗೆ ಕಲಿಸುವ ಮೂಲಕ ಜಾನಪದ ಕಲೆಯನ್ನು ಉಳಿಸಲು ಮುಂದಾಗಬೇಕಾಗಿದೆ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಮಾತನಾಡಿ, ನಮ್ಮ ನೆಲದ ಮೂಲ ಕಲೆಯಾದ ಜಾನಪದ ಕಲೆ, ಸಂಸ್ಕೃತಿನ್ನು ಉಳಿಸಿ ,ಬೆಳೆಸಿದ ಸಮಾಜದ ಕಟ್ಟಕಡೆಯ ಜನಪದರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಮುಖ್ಯ ಎಂದರು.
ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕಲಾವಿದೆ ಡಾ. ಕೆ. ನಾಗರತ್ನಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಪಂ ಸದಸ್ಯ ಕೆ. ಮಂಜುನಾಥ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗನಿರ್ದೇಶಕ ಬಿ.ಎಂ.ಎಸ್. ಪ್ರಭು, ಲಲಿತ ಕಲಾರಂಗದ ಅಧ್ಯಕ್ಷ ಎಚ್. ಮಂಜುನಾಥ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೆ. ರಾಮಚಂದ್ರಪ್ಪ ಮುಖ್ಯಅತಿಥಿಗಳಾಗಿದ್ದರು.
ಕಲಾವಿದರಾದ ಬಿ.ಎಂ. ಯೋಗೇಶ್ ಸ್ವಾಗತಿಸಿ, ನಿರೂಪಿಸಿದರು. ಸರದಾರ ಬಿ. ವಂದಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಎಚ್. ಕೆಂಚಪ್ಪ ಮತ್ತು ತಂಡದವರಿಂದ ಜಾನಪದ ಗಾಯನ, ಎಸ್.ಎಸ್. ಮನೋಜ ಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ, ಬಿ.ಎಂ. ಯೋಗೇಶ್ ಮತ್ತು ತಂಡದವರಿಂದ ಜಾನಪದ ಗೀತೆ, ಸರದಾರ ಬಿ. ಮತ್ತು ತಂಡದವರಿಂದ ರಂಗಗೀತೆಗಳು, ಹುಲಿಗೆಮ್ಮ ಮತ್ತು ತಂಡದವರಿಂದ ಸೋಬಾನೆ ಪದ, ತುರುಮಲೇಶ್ ಮತ್ತು ತಂಡದವರಿಂದ ಭಾವಗೀತೆ, ಡಾ. ಯಶೋಧ ಬಿಲ್ವಿದಗೆರೆ ಮತ್ತು ತಂಡದವರಿಂದ ಶಾಸ್ತ್ರೀ ಸಂಗೀತ, ವೆಟ್ಟ ರಾಮಪ್ಪ ಸುಂಕದಕಲ್ಲು ಮತ್ತು ತಂಡದವರಿಂದ ಬಯಲಾಟ ಪದ, ಅಂಜಿನಮ್ಮ ಮತ್ತು ತಂಡದವರಿಂದ ಸೋಬಾನೆ ಪದ, ಹನುಮಯ್ಯ ಮತ್ತು ತಂಡದವರಿಂದ ತತ್ವ ಪದಗಳು, ಮಹೇಶ್ ಮತ್ತು ತಂಡದವರಿಂದ ಭಜನೆ ಪದಗಳು, ಬಸಮ್ಮ ಮತ್ತು ತಂಡದವರಿಂದ ಸೋಬಾನ ಪದಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.