ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸಿ: ಡಾ.ತಮ್ಮಯ್ಯ

KannadaprabhaNewsNetwork |  
Published : Feb 20, 2026, 03:00 AM IST
(ಫೋಟೊಬಿಕೆಟಿ4, ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ದತಿ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ತೋವಿವಿಯ ಶಿಕ್ಷಣ ನಿರ್ದೇಶಕ ಡಾ.ತಮ್ಮಯ್ಯ ಎನ್) | Kannada Prabha

ಸಾರಾಂಶ

ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸಿದಲ್ಲಿ ಗುಣಮಟ್ಟದ ದಾಳಿಂಬೆ ಹಣ್ಣು ಬೆಳೆಯಲು ಸಾಧ್ಯವಾಗುತ್ತದೆ ಎಂದು ತೋವಿವಿಯ ಶಿಕ್ಷಣ ನಿರ್ದೇಶಕ ಡಾ.ತಮ್ಮಯ್ಯ ಎನ್. ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸಿದಲ್ಲಿ ಗುಣಮಟ್ಟದ ದಾಳಿಂಬೆ ಹಣ್ಣು ಬೆಳೆಯಲು ಸಾಧ್ಯವಾಗುತ್ತದೆ ಎಂದು ತೋವಿವಿಯ ಶಿಕ್ಷಣ ನಿರ್ದೇಶಕ ಡಾ.ತಮ್ಮಯ್ಯ ಎನ್. ಹೇಳಿದರು.

ತೋವಿವಿಯ ರೈತ ಭವನದ ತರಬೇತಿ ಕೇಂದ್ರದಲ್ಲಿ ಮುಖ್ಯ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಬೀಳಗಿ ಹಾಗೂ ಡಾ.ಎಸ್.ಬಿ. ದಂಡಿನ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ದಾಳಿಂಬೆ ಬೆಳೆಯಲು ಮೊದಲು ಭೂಮಿಯ ಫಲವತ್ತತೆ ಮುಖ್ಯ. ನಾಟಿ ಪೂರ್ವದಲ್ಲಿ ಭೂಮಿ ಪರೀಕ್ಷೆ ಮಾಡಿ, ಸಸ್ಯ ಜಂತು ನಿವಾರಣೆ ಮಾಡಬೇಕು. ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮ ಅನುಸರಿಸಿ ದಾಳಿಂಬೆ ಬೆಳೆಯಲು ಮುಂದಾಗಬೇಕು. ಹಣ್ಣು ಬೇರೆ ದೇಶಗಳಿಗೆ ರಪ್ತು ಮಾಡುವ ಮೂಲಕ ಉತ್ತಮ ಬೆಲೆ ಪಡೆದು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ, ಪ್ರತಿಯೊಂದು ತೋಟಗಾರಿಕೆ ಬೆಳೆಯಲ್ಲಿ ಬರುವ ಸಮಸ್ಯೆಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವಿಜ್ಞಾನಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಮುಂದುವರಿದು ರೈತರ ಜಮೀನಿನಲ್ಲಿಯೇ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲು ಸರಕಾರದ ಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಬೂದಿಹಾಳ ಗ್ರಾಮದಲ್ಲಿ 10 ಎಕರೆ ಜಮೀನು ಖರೀದಿಸಲಾಗಿದ್ದು, ದಾಳಿಂಬೆ ಬೆಳೆಯ ಸಸಿಗಳನ್ನು ತಯಾರಿ ಮಾಡಿಕೊಡುವ ಕೆಲಸ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಸಂಶೋಧನಾ ನಿರ್ದೇಶಕ ಡಾ.ಬಿ. ಫಕ್ರುದ್ದೀನ್ ಮಾತನಾಡಿ, ದಾಳಿಂಬೆ ಬೆಳೆ ಜಾಗೃತಿಯಿಂದ ಬೆಳೆಯಬೇಕು. ನೀರು ಕಡಿಮೆ ಇದ್ದರೂ ಬೆಳೆ ಬರುತ್ತದೆ. ಆದರೆ ಈ ಬೆಳೆಗೆ ಬರುವ ರೋಗ ನಿಯಂತ್ರಿಸುವ ಕೆಲಸವಾಗಬೇಕು. ಅದಕ್ಕಾಗಿ ಬೇಸಾಯ ಪದ್ಧತಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ರೈತರು ಗುಣಮಟ್ಟ ಬೆಳೆ ಬೆಳೆಯುವಂತೆ ಮಾಡುವ ನಿಟ್ಟಿನಲ್ಲಿ ತರಬೇತಿ ಆಯೋಜನೆ ಮಾಡಲಾಗಿದೆ. ತೋಟಗಾರಿಕೆ ಇಲಾಖೆಯ ಜೊತೆ ತೋವಿವಿ ಕೈಜೋಡಿಸಿ ರೈತರ ಹೊಲದಲ್ಲಿಯೇ ವೈಜ್ಞಾನಿಕ ಪದ್ದತಿ ಪ್ರಾಯೋಗಿಕವಾಗಿ ಕೈಗೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಲಾದಗಿ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಟಿ. ಪಾಟೀಲ ಅವರು ತಮ್ಮ ಅನುಭವ ಹಂಚಿಕೊಂಡರು. 1980ರಿಂದ ದಾಳಿಂಬೆ ಬೆಳೆ ಬೆಳೆಯುತ್ತಾ ಬಂದಿದ್ದು, ಆದಾಯದಿಂದ ಬರುವ ಹಣದಲ್ಲಿ ಒಂದು ಭಾಗ ಕೂಡಿಟ್ಟು, ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಹುಟ್ಟುಹಾಕಲಾಗಿದೆ. ಈ ಸಂಸ್ಥೆಯಲ್ಲಿ 1400 ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಿದ್ದಾರೆ. ಇವರಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರದ ಯೋಜನೆಗಳು ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವಾಗಬೇಕೆಂದು ಅಭಿಪ್ರಾಯಪಟ್ಟರು.

ಮುಖ್ಯ ತೋಟಗಾರಿಕಾ ವಿಜ್ಞಾನ ಕೇಂದ್ರದ ಸಹ ಸಂಶೋಧನಾ ಹಾಗೂ ವಿಸ್ತರಣೆ ನಿರ್ದೇಶಕ ಡಾ.ವಸಂತ ಗಾಣಿಗೇರ, ಕ್ಷೇತ್ರ ಅಧೀಕ್ಷಕ ಡಾ.ಆನಂದ ನಂಜಪ್ಪನವರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ ದಂಡನ್ನವರ ಉಪಸ್ಥಿತರಿದ್ದರು.

ವಾಣಿಜ್ಯ ಬೆಳೆಯಾದ ದಾಳಿಂಬೆ ಹಣ್ಣಿನ ಸಂಶೋಧನೆ ಹಾಗೂ ಪ್ರಾತ್ಯಕ್ಷಿಕೆ ತೋವಿವಿಯಲ್ಲಿ ನಡೆಯುತ್ತಿದ್ದು, ರೈತರಿಗೆ ಆಧುನಿಕ ತಂತ್ರಜ್ಞಾನದ ಪದ್ಧತಿಗಳನ್ನು ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದ ದಾಳಿಂಬೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ.

- ಡಾ.ವಸಂತ ಗಾಣಿಗೇರ ಸಹ ಸಂಶೋಧಕರು ತೋವಿವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

11 ದಿನ ಗಣಪನದ್ದೇ ರಾಜ್ಯಭಾರ
ಇ.ಡಿ ಕಾರ್ಯವೈಖರಿಗೆ ಸವಾಲು ಹಾಕಿಲ್ಲ, ಕೆಲವು ವರದಿಗಳು ಸತ್ಯಕ್ಕೆ ದೂರ