ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿಘ್ನನಿವಾರಕನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಮುಂದಿನ 11 ದಿನ ನಗರದಲ್ಲಿ ಗಣಪನದ್ದೇ ರಾಜ್ಯಭಾರ. ನಗರದ ಪ್ರಮುಖ ಗಣೇಶ ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗಿದ್ದು, ಈ ಬಾರಿ ಹಲವು ಮಂಡಳಿಗಳು ಎಐ ಕಲಾತ್ಮಕತೆಗೆ ಮೊರೆ ಹೋಗಿವೆ. ಹೀಗಾಗಿ ಗಣೇಶ ಮಂಟಪಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿವೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿಘ್ನನಿವಾರಕನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಮುಂದಿನ 11 ದಿನ ನಗರದಲ್ಲಿ ಗಣಪನದ್ದೇ ರಾಜ್ಯಭಾರ. ನಗರದ ಪ್ರಮುಖ ಗಣೇಶ ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗಿದ್ದು, ಈ ಬಾರಿ ಹಲವು ಮಂಡಳಿಗಳು ಎಐ ಕಲಾತ್ಮಕತೆಗೆ ಮೊರೆ ಹೋಗಿವೆ. ಹೀಗಾಗಿ ಗಣೇಶ ಮಂಟಪಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿವೆ.ಗಣೇಶೋತ್ಸವಕ್ಕೆ ಒಂದು ತಿಂಗಳಿನಿಂದಲೇ ಸಿದ್ಧತೆ ನಡೆಸಲಾಗಿದ್ದು, ನಗರದ ನಾನಾ ಬಡಾವಣೆಗಳಲ್ಲಿ 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಗಣೇಶ ಮಂಡಳಿಗಳು ಆಕರ್ಷಕ ಮಂಟಪಗಳನ್ನು ಸಿದ್ಧಪಡಿಸಿದ್ದು, ಏಕದಂತನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಜ್ಜಾಗಿವೆ. ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ, ಆರೋಗ್ಯ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಯುವಕ ಮಂಡಳಿಗಳು ಎಐ ಕಲಾತ್ಮಕತೆಗೆ ಮೊರೆ ಹೋಗಿದ್ದು, ವಾಟ್ಸ್ಆ್ಯಪ್ನಲ್ಲಿ ಥೀಮ್ ರಿವೀಲ್, ಎಲ್ಇಡಿ ಪರದೆಯಲ್ಲಿ ಎಐ ಮೂಲಕ ಸಿದ್ಧಪಡಿಸಿದ ಮಂಟಪದ ದೃಶ್ಯಾವಳಿ ಹಾಗೂ ಮೂರ್ತಿಯ 3ಡಿ ನೋಟ ಪ್ರದರ್ಶಿಸಲು ವ್ಯವಸ್ಥೆ ಮಾಡಿಕೊಂಡಿವೆ. ಟಿಳಕವಾಡಿ, ವಡಗಾವ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಪ್ರಮುಖ ಮಂಡಳಿಗಳು ಡಿಜಿಟಲ್ ಥೀಮ್ ರಿವೀಲ್ ಮಾಡಿಕೊಂಡಿದ್ದು, ಈ ಬಾರಿಯ ಗಣೇಶೋತ್ಸವದ ವಿಶೇಷ ಆಕರ್ಷಣೆಯಾಗಲಿದೆ.ಹಲವು ಮಂಡಳಿಗಳು ಗಣೇಶ ಚತುರ್ಥಿಗೆ ಒಂದು ವಾರ ಮುಂಚೆಯೇ ಮೂರ್ತಿಗಳನ್ನು ಮಂಟಪಗಳಿಗೆ ತಂದು ಅಲಂಕಾರ ಕಾರ್ಯ ಆರಂಭಿಸಿವೆ. ಕೆಲ ಮಂಟಪಗಳಲ್ಲಿ ಧಾರ್ಮಿಕ ವಾತಾವರಣಕ್ಕೆ ಒತ್ತು ನೀಡಿದ್ದರೆ, ಇನ್ನು ಕೆಲವೆಡೆ ಕಲಾತ್ಮಕ ಅಲಂಕಾರ, ಸಾಮಾಜಿಕ ಸಂದೇಶ ಹಾಗೂ ವಿಷಯಾಧಾರಿತ ವಿನ್ಯಾಸಗಳಿಗೆ ಆದ್ಯತೆ ನೀಡಲಾಗಿದೆ. ಹೀಗಾಗಿ 11 ದಿನಗಳ ಕಾಲ ಬೆಳಗಾವಿಯತ್ತ ಭಕ್ತರ ಹರಿವು ಹೆಚ್ಚುವ ನಿರೀಕ್ಷೆಯಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಜನರು ಗಣೇಶ ಮೂರ್ತಿಗಳ ದರ್ಶನಕ್ಕೆ ಆಗಮಿಸುವ ಸಾಧ್ಯತೆಯಿದೆ.ಮನೆ ಮನೆಗೂ ಗಣಪ:
ಸಾರ್ವಜನಿಕ ಮಂಟಪಗಳ ಸಿದ್ಧತೆ ಒಂದು ಕಡೆಯಾದರೆ, ಮನೆ ಮನೆಗಳಲ್ಲಿಯೂ ಗಣಪನ ಸ್ವಾಗತಕ್ಕೆ ಸಿದ್ಧತೆ ನಡೆದಿದೆ. ಮಂಟಪ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಕುಟುಂಬ ಸದಸ್ಯರು ತೊಡಗಿದ್ದಾರೆ. ಕೆಲವರು ಸರಳ ಮಂಟಪಕ್ಕೆ ಆದ್ಯತೆ ನೀಡಿದರೆ, ಇನ್ನು ಕೆಲವರು ಕಲಾತ್ಮಕ ವಿನ್ಯಾಸದ ಮಂಟಪ ನಿರ್ಮಿಸಿ ಗಣಪನಿಗೆ ವಿಶೇಷ ಅಲಂಕಾರ ಮಾಡುತ್ತಿದ್ದಾರೆ.ಪಾಲಿಕೆಯಿಂದ ಸಿದ್ಧತೆ: ಗಣೇಶೋತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಪಿಲೇಶ್ವರ ಹಳೆಯ ಹೊಂಡ, ಕಪಿಲೇಶ್ವರ ಹೊಸ ಹೊಂಡ, ಜಕ್ಕೇರಿ ಹೊಂಡ ಸೇರಿದಂತೆ ಎಂಟು ಕಡೆ ವಿಸರ್ಜನೆಗೆ ಹೊಂಡಗಳನ್ನು ಸಿದ್ಧಪಡಿಸಲಾಗಿದೆ. ಹಾಳಾಗಿದ್ದ ರಸ್ತೆಗಳನ್ನು ದುರಸ್ತಿಗೊಳಿಸಲಾಗಿದ್ದು, ಅಪಾಯದ ಸ್ಥಿತಿಯಲ್ಲಿದ್ದ ವಿದ್ಯುತ್ ಪರಿಕರಗಳನ್ನು ಸರಿಪಡಿಸಲಾಗಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು 1, 3, 5, 7 ಹಾಗೂ 9ನೇ ದಿನಗಳಲ್ಲಿ ವಿಸರ್ಜಿಸುವವರಿಗೆ ಅನುಕೂಲವಾಗುವಂತೆ ಸಂಚಾರಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಗಣೇಶೋತ್ಸವ ವೀಕ್ಷಣೆಗೆ ಆಗಮಿಸುವ ಜನರ ಅನುಕೂಲಕ್ಕಾಗಿ ಆಯ್ದ ಸ್ಥಳಗಳಲ್ಲಿ ಸಂಚಾರಿ ಶೌಚಾಲಯಗಳನ್ನೂ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.