ಕನ್ನಡಪ್ರಭ ವಾರ್ತೆ ಹಾಸನಶ್ರೀ ಶಿವಕುಮಾರ ಸ್ವಾಮೀಜಿ ಸ್ವಸಹಾಯ ಸಂಘದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 6ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿತ್ತು.ನಗರದ ಸುಭಾಷ್ ಚೌಕದಲ್ಲಿರುವ ಮಲ್ಲೇಶ್ವರ ದೇವಸ್ಥಾನ ಹತ್ತಿರ ಮಹಾಶಿವರಾತ್ರಿ ಹಬ್ಬದ ವಿಶೇಷ ದಿನದ ಅಂಗವಾಗಿ ಪೂಜೆ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಂತರ ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ನಡೆಯಿತು. ಸಾರ್ವಜನಿಕರು, ಭಕ್ತರು ಹಾಗೂ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದೇ ವೇಳೆ ಸಮಾಜ ಸೇವಕ ಕಾಂತರಾಜು ಮಾತನಾಡಿ, ಮಲ್ಲೇಶ್ವರ ವೃತ್ತದಲ್ಲಿ ಪ್ರತಿ ವರ್ಷ ಶಿವರಾತ್ರಿ ಮಾರನೇ ದಿವಸ ಅನ್ನದಾನವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಸ್ವಸಹಾಯ ಸಂಘದ ವತಿಯಿಂದ ನೆರವೇರಿಸುತ್ತಿದ್ದಾರೆ. ಮುಂದೆಯೂ ಕೂಡ ಇನ್ನಷ್ಟು ಹೆಚ್ಚಿನ ರೀತಿ ಮುಂದುವರಿಸಿಕೊಂಡು ಹೋಗಲೆಂದು ಹಾರೈಸಿದರು.ಎಂ.ಕೆ. ಬಸವರಾಜು ಮಾಧ್ಯಮದೊಂದಿಗೆ ಮಾತನಾಡಿ, ನಗರದ ಮಲ್ಲೇಶ್ವರ ದೇವಸ್ಥಾನ ಹತ್ತಿರ ಪ್ರತಿವರ್ಷ ಶ್ರೀ ಶಿವಕುಮಾರ ಸ್ವಾಮೀಜಿ ಸ್ವ ಸಹಾಯ ಸಂಘದ ವತಿಯಿಂದ ಏಳನೇ ವರ್ಷದ ಅನ್ನಸಂತರ್ಪಣೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದೇವೆ. ಈ ಕಾರ್ಯಕ್ರಮ ಯಶಸ್ವಿಗೆ ಅಕ್ಕಪಕ್ಕದ ಗ್ರಾಹಕರು ಮತ್ತು ಇತರರು ಸಹಕಾರ ನೀಡಿದ್ದಾರೆ. ಎಂಟು ಸಾವಿರಕ್ಕೂ ಹೆಚ್ಚು ಜನರಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿಸಲಾಗಿದೆ. ಮಲ್ಲೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಅಣ್ಣಯ್ಯ ಅವರು ಕೂಡ ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಎಡಿಸಿ ಆಗಿ ಕರ್ತವ್ಯ ನಿರ್ವಹಿಸಿದ ಮಂಜುನಾಥ್, ನಾಗರಾಜು, ಶಶಿಧರ್, ಪ್ರವೀಣ್, ದಿನೇಶ್, ಮಂಜೇಗೌಡ, ಸಚಿನ್, ಹರೀಶ್ ಇತರರು ಉಪಸ್ಥಿತರಿದ್ದರು.