ಗಂಗಾವತಿ : ಪೊಲೀಸ್ ಆಯುಕ್ತ ದಯಾನಂದ ಅಮಾನತು ಖಂಡಿಸಿ ತಾಲೂಕು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಪಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್ಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಕೂಡಲೇ ಸರ್ಕಾರ ಅಮಾನತು ಮಾಡಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪನಾಯಕ ಮಾತನಾಡಿ, ಆರ್ಸಿಬಿ ವಿಜಯೋತ್ಸವದ ವೇಳೆ 11 ಜನರನ್ನು ಬಲಿ ತೆಗೆದುಕೊಂಡು ಕರಾಳ ದಿನ ಆಚರಿಸಿದ್ದ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತಮ್ಮ ಉದ್ದಟತನ ಹಾಗೂ ಅಸಡ್ಡೆಯಿಂದ ಆಗಿರುವ ಅನಾಹುತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕಿತ್ತು. ಆದರೆ, ವಾಲ್ಮೀಕಿ ನಾಯಕ ಜನಾಂಗದ ದಕ್ಷ ಪೊಲೀಸ್ ಅಧಿಕಾರಿ ಹಾಗೂ ಬೆಂಗಳೂರು ನಗರ ಆಯುಕ್ತ ದಯಾನಂದ ಅವರನ್ನು ಅಮಾನತು ಮಾಡಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಸರ್ಕಾರ ವಾಲ್ಮೀಕಿ ಸಮಾಜವನ್ನು ಗುರಿಯಾಗಿಸಿಕೊಂಡಿದ್ದು ಈ ಮುಂಚೆ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರಿಗೆ ಎಷ್ಟೇ ಕಿರುಕುಳ ನೀಡಿ ಎಂತಹ ಸ್ಥಾನಮಾನ ಕೊಡಲಾಗಿದೆ ಎಂಬುವುದು ಸಮಾಜಕ್ಕೆ ತಿಳಿದಿದೆ. ದಕ್ಷ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ಕೊಡುವುದಾದರೆ 11 ಜನರ ಸಾವಿನ ದುರ್ಘಟನೆ ನಡೆದ 24 ಗಂಟೆಯಲ್ಲೇ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಮಾಜದ ಮುಖಂಡರಾದ ಕೃಷ್ಣಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ, ಜೋಗದ ನಾರಾಯಣಪ್ಪ ನಾಯಕ, ಹೊಸಮಲಿ ಮಲ್ಲೇಶಪ್ಪ ನಾಯಕ, ಯಮನೂರು ಚೌಡ್ಕಿ, ರಮೇಶ ಚೌಡ್ಕಿ, ಬಸಪ್ಪ ನಾಯಕ, ಯಮನೂರಪ್ಪ ನಾಯಕ, ವಿರೂಪಾಕ್ಷಗೌಡ ನಾಯಕ, ಎ.ಜೆ. ರಂಗನಾಥ, ಪಂಪಣ್ಣ ನಾಯಕ, ಹನುಮೇಶ ಕೇಸರಹಟ್ಟಿ, ಪಾಂಡುರಂಗ ಮಲ್ಲಾಪೂರು, ರಾಮಣ್ಣ ನಾಯಕ, ಅರ್ಜುನ ನಾಯಕ ಸೇರಿದಂತೆ ಇತರರು ಇದ್ದರು.