ಗದಗ: ಮನುಷ್ಯನ ದುರಾಸೆಗೆ ಪ್ರಕೃತಿ ನಾಶವಾಗಿ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಪರಿಸರ ನಾಶದಿಂದ ಅಸಮತೋಲನ ಉಂಟಾಗಿ ಪ್ರಾಕೃತಿಕ ವಿಪತ್ತುಗಳಿಗೆ ಕಾರಣವಾಗಿದೆ. ಭೂಮಿಯ ಮೇಲೆ ಪ್ರತಿಯೊಬ್ಬರೂ ನೆಮ್ಮದಿಯಾಗಿ ಇರಲು ಮನೆಗೊಂದು ಮರ ಬೆಳೆಸಿ ಹಾಗೂ ಗೋವು ಸಾಕಬೇಕು ಎಂದು ನರಸಾಪುರ ಅನ್ನದಾನೀಶ್ವರ ಶಾಖಾ ಮಠದ ಶ್ರೀ ವೀರೇಶ್ವರ ಸ್ವಾಮೀಜಿ ಹೇಳಿದರು.
ಕಳೆದ 7 ವರ್ಷಗಳಿಂದ ವೃಕ್ಷಭಾರತಿ ಸೇವಾ ಸಮಿತಿ ಸದಸ್ಯರು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಸಾವಿರಾರು ಸಸಿಗಳನ್ನು ನೆಟ್ಟು ಅವುಗಳನ್ನು ದೊಡ್ಡ ಮರವಾಗಿ ಬೆಳೆಸಿದ್ದಾರೆ. ಅದೇ ರೀತಿ ಪ್ರತಿ ವರ್ಷ ತುಳಸಿ ವಿವಾಹ ಪೂರ್ವ ತುಳಸಿ ಸಸಿಗಳನ್ನು ವಿತರಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಪ್ರತಿಯೊಬ್ಬರೂ ಮನೆಯಲ್ಲಿ ಹತ್ತಾರು ತುಳಸಿ ಸಸಿಗಳನ್ನು ಬೆಳೆಸಬೇಕು. ತುಳಸಿ ಗಿಡ ಪರಿಶುದ್ಧ ಆಮ್ಲಜನಕ ನೀಡುತ್ತದೆ. ಇದರಿಂದ ನಮ್ಮ ಮನೆಗೆ ಬೇಕಾದ ಶುದ್ಧ ಗಾಳಿಯನ್ನು ನಾವು ಪಡೆಯಬಹುದು ಹಾಗೂ ತುಳಸಿ ಸಸ್ಯ ಆರೋಗ್ಯಕ್ಕೆ ಹತ್ತಾರು ರೀತಿಯಲ್ಲಿ ಸಹಾಯಕವಾಗಿದೆ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ವಿಚಾರ, ಆಚಾರ, ಸಂಸ್ಕಾರಗಳನ್ನು ಅಳವಡಿಸಿಕೊಂಡು ಪರಿಸರ ಸೇವೆ ಮಾಡಬೇಕು ಎಂದರು.ನಾರಾಯಣ ಕ್ಷೀರಸಾಗರ ಅಧ್ಯಕ್ಷತೆ ವಹಿಸಿದ್ದರು. ಸೋಮಣ್ಣ ನೆಗಳೂರ, ಶರಣಪ್ಪ ಆಲೂರ, ಮಂಜಣ್ಣ ಪಾಸ್ತೆ, ತಮ್ಮಣ್ಣ ಮಾಗುಂಡ, ಗೋಪಾಲ ಹೆಗಡೆ, ಗೋಪಾಲ ಮಳೇಕರ, ಮಹೇಶ ನಾಗರಾಳ, ಡಾ. ಅಯ್ಯನಗೌಡ್ರ, ಈರಣ್ಣ ಭಾವಿಕಟ್ಟಿ, ಯಶವಂತ ಮತ್ತೂರ ಇದ್ದರು. ಮಂಜುನಾಥ ಬ್ಯಾಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.