ಅಭಿನಯ, ವಾಚಿಕ, ರಂಗ ಸಂಗೀತ, ವಸ್ತ್ರಾಲಂಕಾರ ಮುಂತಾದ ವಿಷಯಗಳ ಕುರಿತು ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಾನಸಗಂಗೋತ್ರಿಯಲ್ಲಿರುವ ವಿಶ್ವವಿದ್ಯಾನಿಲಯ ಲಲಿತ ಕಲಾ ಕಾಲೇಜಿನಲ್ಲಿ ಶ್ರೀ ಗುಬ್ಬಿ ವೀರಣ್ಣ ಪೀಠದ ವತಿಯಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ರಂಗಾಸಕ್ತರಿಗಾಗಿ ಒಂದು ದಿನದ ಪ್ರಸಾಧನ ಹಾಗೂ ಮುಖವಾಡ ತಯಾರಿಕಾ ಕಾರ್ಯಾಗಾರವನ್ನು ಶನಿವಾರ ಆಯೋಜಿಸಲಾಗಿತ್ತು.ಶ್ರೀ ಗುಬ್ಬಿ ವೀರಣ್ಣ ಪೀಠದ ರಂಗತಜ್ಞ ಅರಸೀಕೆರೆ ಯೋಗಾನಂದ ಮಾತನಾಡಿ, ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಇಂತಹ ಕಾರ್ಯಾಗಾರಗಳ ಅಗತ್ಯವಿದ್ದು, ಮುಂದಿನ ಪ್ರತಿ ಶನಿವಾರಗಳಂದು ಅಭಿನಯ, ವಾಚಿಕ, ರಂಗ ಸಂಗೀತ, ವಸ್ತ್ರಾಲಂಕಾರ ಮುಂತಾದ ವಿಷಯಗಳ ಕುರಿತು ಕಾರ್ಯಾಗಾರಗಳು ನಡೆಯಲಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಟಾ ವಿಮಲಾ ಬ್ರಾಗ್ಸ್ ಮಾತನಾಡಿ, ಲಲಿತ ಕಲಾ ಕಾಲೇಜು 60ನೇ ವರ್ಷಕ್ಕೆ ಕಾಲಿಟ್ಟಿದ್ದು, ವಜ್ರ ಮಹೋತ್ಸವದ ಸಂಭ್ರಮಾಚರಣೆ ಆಚರಿಸಿಕೊಳ್ಳುತ್ತಿದ್ದು, ಓಪನ್ ಎಲೆಕ್ಟೀವ್ ನ ಸ್ನಾತಕೋತ್ತರ ಹಾಗೂ ಸ್ನಾತಕಪೂರ್ವ ಅಧ್ಯಯನ ನಡೆಸುತ್ತಿರುವ ಸುಮಾರು 80 ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ರಂಗಾಯಣದ ಹಿರಿಯ ಕಲಾವಿದ ಸಂತೋಷ್ ಕುಮಾರ್ ಕುಸನೂರ ಅವರು, ವಿವಿಧ ರೀತಿಯ ಮುಖವರ್ಣಿಕೆ ಮಾಡಿ ತೋರಿಸಿದರು. ಕಾಗದ ಹಾಗೂ ಪಿಓಪಿ ಯಿಂದ ಮುಖವಾಡಗಳನ್ನು ಮಾಡುವ ವಿಧಾನ ಕಲಿಸಿಕೊಟ್ಟರು. ವಿಧ್ಯಾರ್ಥಿಗಳು ಸ್ವತಃ ಒಬ್ಬರಿಗೊಬ್ಬರು ಪ್ರಸಾಧನ ಮಾಡಿ ಸಂಭ್ರಮಿಸಿದರು. ಮುಖವಾಡಗಳನ್ನು ತಯಾರಿಸಿ ಪ್ರದರ್ಶಿಸಿದರು.ಕಾಲೇಜಿನ ಅಧ್ಯಾಪಕರಾದ ಸುಬ್ಬುಲಕ್ಷ್ಮಿ, ಗೀತಾ, ಸೂರ್ಯಪ್ರಭ, ಮೇಘ ಸಮೀರ, ನಾಗೇಂದ್ರ, ರಂಗಕರ್ಮಿಗಳಾದ ಶ್ರೀನಿವಾಸ ಪಾಲಹಳ್ಳಿ, ಕೆಂಪರಾಜು, ನಿಂಗರಾಜ ಚಿತ್ತಣ್ಣ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.