ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಕೃತಕ ಮಣ್ಣಿನ ಗುಡ್ಡ ನಿರ್ಮಾಣವಾಗಿದ್ದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಉಕ ಜಿಲ್ಲಾ ರೈತ ಮೋರ್ಚಾ ಹಾಗೂ ಅಂಕೋಲಾ ಮಂಡಲದ ವತಿಯಿಂದ ಶನಿವಾರ ಅಂಕೋಲಾ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ವಿ.ಎಸ್. ಭಟ್ಟ್ ಮಾತನಾಡಿ, ಶಿರೂರಿನ ಗುಡ್ಡ ಕುಸಿತದಿಂದ ನದಿಯ ಮಧ್ಯದಲ್ಲಿ ಕೃತಕ ಗುಡ್ಡ ನಿರ್ಮಾಣವಾಗಿದ್ದರಿಂದ ನದಿಯ ಹಿಂದಿನ ತಟದ ಹಲವಾರು ಗ್ರಾಮಗಳಿಗೆ ನೆರೆಯ ಭೀತಿ ಎದುರಾಗಿದೆ.2019 ಹಾಗೂ 2021ರ ಪ್ರವಾಹ ಬಂದಾಗ ತಾಲೂಕಿನ ಸಗಡಗೇರಿ, ಮೊಗಟಾ, ವಾಸರಕುದ್ರಗಿ, ಅಗಸೂರು, ಸುಂಕಸಾಳ, ಡೋಂಗ್ರಿ, ಪಂಚಾಯಿತಿಯ ಹಲವಾರು ಗ್ರಾಮಗಳ ತೋಟಗಳು, ಗದ್ದೆಗಳು ರೈತರ ಮನೆಗಳು ಮುಳುಗಡೆಯಾಗಿದ್ದವು. ಆದರೀಗ ಸಣ್ಣ ಸಣ್ಣ ಮಳೆಗೂ ಪ್ರಭಾಹ ಎದುರಾಗುವ ಭೀತಿ ನಿರ್ಮಾಣವಾಗಿದೆ ಎಂದರು.
ಅಂಕೋಲಾ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಗುಡ್ಡದ ಮಣ್ಣನ್ನು ನದಿಯಿಂದ ತೆರೆವುಗೊಳಿಸದೆ ಹೋದಲ್ಲಿ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ನಾಶವಾಗುವ ಸಂಭವವಿದೆ. ಇಂದಿನ ದಿನಗಳಲ್ಲಿ ಪ್ರತಿ ಮಳೆಯಲ್ಲೂ ರೈತರಿಗೂ ಪ್ರವಾಹದ ಭೀತಿ ಎದುರಾಗುತ್ತಿದೆ. ಈಗಾಗಲೇ ನೆರೆ ಭೀತಿಯಿಂದ ಗದ್ದೆಗಳು ಪಾಳು ಬಿದ್ದಿವೆ. ನದಿಯಲ್ಲಿರುವ ಗುಡ್ಡದ ಮಣ್ಣನ್ನು ಕೂಡಲೇ ತೆರವುಗೊಳಿಸುವ ಕಾರ್ಯ ಸಂಬಂಧಪಟ್ಟ ಇಲಾಖೆ ಮೂಲಕ ಮಾಡಿಸುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿನಿತ್ಯಾನಂದ ಗಾಂವಕರ್, ಅಂಕೋಲಾ ಮಂಡಲ ಪ್ರ. ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ಜಿಲ್ಲಾ ಉಪಾಧ್ಯಕ್ಷೆ ಆರತಿ ಗೌಡ, ಬಿಜೆಪಿ ಪ್ರಮುಖರಾದ ಭಾಸ್ಕರ ನಾರ್ವೆಕರ್, ದಾಮು ರಾಯ್ಕರ್, ಎಂ.ಎನ್. ಭಟ್ಟ್, ನಾರಾಯಣ ಹೆಗಡೆ, ಮಹೇಶ ನಾಯಕ, ಸದಾನಂದ ನಾಯಕ, ಈಶ್ವರ ಗೌಡ, ಪ್ರವೀಣ ನಾಯ್ಕ, ಸಂದೀಪ ಗಾಂವಕರ್, ಈಶ್ವರ ನಾಯ್ಕ, ನಾಗೇಶ ಸಿದ್ಧಿ ರಾಮಚಂದ್ರ ಹೆಗಡೆ, ಮಹೇಶ ನಾಯ್ಕ, ಮನೋಹರ್ ನಾಯ್ಕ, ಗಣಪತಿ ನಾಯ್ಕ, ನಾಗೇಶ ಕಿಣಿ, ಬಿಂದೇಶ ನಾಯಕ, ರಾಘವೇಂದ್ರ ನಾಯ್ಕ, ಹಾಗೂ ರೈತ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.