ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಥಳಿಯರಾದ ಶಾಸಕ ಎಂ. ಚಂದ್ರಪ್ಪ ಅವರ ಪುತ್ರ ರಘುಚಂದನ್ಗೆ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರನ್ನು ರಾಷ್ಟ್ರೀಯ ಈಡಿಗ ಮಹಾ ಮಂಡಳಿ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇದುವರೆವಿಗೂ ಹೊರಗಿನವರು ಬಂದು ಆಯ್ಕೆಯಾಗಿದ್ದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾವ ಕಾಳಜಿಯನ್ನು ವಹಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಥಳಿಯರಾದ ಶಾಸಕ ಎಂ. ಚಂದ್ರಪ್ಪ ಅವರ ಪುತ್ರ ರಘುಚಂದನ್ಗೆ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರನ್ನು ರಾಷ್ಟ್ರೀಯ ಈಡಿಗ ಮಹಾ ಮಂಡಳಿ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಅಕ್ಕ-ಪಕ್ಕದ ಜಿಲ್ಲೆಗಳಾದ ದಾವಣಗರೆ, ತುಮಕೂರು ಜಿಲ್ಲೆಗಳು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿಯಾಗಿವೆ. ಇದಕ್ಕೆ ಕಾರಣ ಅಲ್ಲಿ ಸ್ಥಳಿಯರು ಲೋಕಸಬಾ ಸದಸ್ಯರಾಗಿದ್ದಾರೆ. ಇದರಿಂದ ಅವರಲ್ಲಿ ಬದ್ಧತೆ ಇದ್ದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಆದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯರು ಹೂರಗಿನವರಾಗಿದ್ದಾರೆ. ಅವರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಚಿತ್ರದುರ್ಗ 20 ವರ್ಷ ಹಿಂದೆ ಯಾವ ರೀತಿ ಇತ್ತು ಈಗಲೂ ಸಹಾ ಅದೇ ರೀತಿ ಇದೆ ಎಂದು ಆರೋಪಿಸಿದರು.
ಈ ಬಾರಿಯು ಲೋಕಸಬಾ ಚುನಾವಣೆಯಲ್ಲಿ ಬಿಜೆಪಿ ಹೊರಗಿನವರಿಗೆ ಟಿಕೆಟ್ ನೀಡುವ ಬದಲು ಸ್ಥಳಿಯರಿಗೆ ನೀಡಿದರೆ ಚಿತ್ರದುರ್ಗ ಅಭಿವೃದ್ಧಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಶಾಸಕ ಎಂ. ಚಂದ್ರಪ್ಪ ಅವರ ಪುತ್ರ ರಘು ಚಂದನ್ ಅವರಿಗೆ ಟಿಕೆಟ್ ನೀಡಬೇಕು. ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದ್ದು ಇದರ ಬಗ್ಗೆ ಇದುವರೆಗೂ ಯಾವ ಸಂಸದರೂ ಸಹಾ ಗಮನ ನೀಡಿಲ್ಲ. ಬರೀ ಸಭೆಯನ್ನು ಮಾಡುವುದರ ಮೂಲಕ ಕಾಗದದಲ್ಲಿ ಅಭಿವೃದ್ಧಿ ತೋರಿಸುತ್ತಿದ್ದಾರೆ ಎಂದು ತಿಪ್ಪೇಸ್ವಾಮಿ ದೂರಿದರು.
ಈ ಭಾಗಕ್ಕೆ ಕೈಗಾರಿಕೆಗಳಾಗಲಿ, ಕಂಪನಿಗಳಾಗಲಿ ಬಾರದೇ ಇರುವುದರಿಂದ ಯುವ ಜನತೆ ಕೆಲಸವನ್ನು ಹುಡುಕಿಕೊಂಡು ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ನಮ್ಮ ಯುವ ಜನತೆಯನ್ನು ಇಲ್ಲಿಯೇ ಹಿಡಿದಿಟ್ಟುಕೊಳ್ಳುವಂತಹ ಕೈಗಾರಿಕೆಗಳು ವಿವಿಧ ಕಂಪನಿಗಳು ಬರುವಂತೆ ಮಾಡಬೇಕಿರುವುದು ಚುನಾಯಿತ ಪ್ರತಿನಿಧಿಗಳ ಕೆಲಸವಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮನು, ಕಾರ್ಯದರ್ಶಿ ಮೋಹನ್, ಸದಸ್ಯರಾದ ರಂಗನಾಥ್, ಗಂಗಾಧರ್, ಕುಮಾರ್ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.