ಜಿಂದಾಲ್‌ಗೆ ಸರ್ಕಾರಿ ಭೂಮಿ ಮಾರಾಟ ವಿವಾದ : ರೈತರಿಂದ ತೀವ್ರ ಆಕ್ರೋಶ, ಪ್ರತಿಭಟನೆ

KannadaprabhaNewsNetwork | Updated : Sep 03 2024, 05:02 AM IST

ಸಾರಾಂಶ

ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಗೆ ಸರ್ಕಾರಿ ಭೂಮಿ ಮಾರಾಟ ಮಾಡಲು ಸಚಿವ ಸಂಪುಟದ ತೀರ್ಮಾನವನ್ನು ರೈತ ಸಂಘ ಹಾಗೂ ಹಸಿರು ಸೇನೆ ಖಂಡಿಸಿವೆ. ಖರಾಬು ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.

ಸಂಡೂರು: ಜಿಂದಾಲ್ ಕಂಪನಿಗೆ ಅತಿ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಹಿಂದಕ್ಕೆ ಪಡೆಯಬೇಕು. ತಾಲೂಕಿನಲ್ಲಿ ಖರಾಬು ಎಂದು ತೀರ್ಮಾನಿಸಿರುವ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಸೋಮವಾರ ತಹಶೀಲ್ದಾರ್ ಜಿ. ಅನಿಲ್‌ಕುಮಾರಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವರಮನಿ ಮಹೇಶ, ಜಿಂದಾಲ್ ಉಕ್ಕು ಕಂಪನಿಗೆ ರಾಜ್ಯ ಸರ್ಕಾರವು ೩೬೬೬ ಎಕರೆ ಸರ್ಕಾರಿ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಒಪ್ಪಿಗೆ ನೀಡಿರುವುದನ್ನು ರೈತ ಸಂಘ ಖಂಡಿಸುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಸರ್ಕಾರ ನಿದಗಿ ಮಾಡಿದ ಬೆಲೆಗಿಂತ ಹತ್ತುಪಟ್ಟು ನೀಡಿ ರೈತರು ಖರೀದಿಸಲು ಸಿದ್ಧರಿದ್ದಾರೆ. ರೈತರಿಗೆ ಆ ಭೂಮಿಯನ್ನು ನೀಡಲಿ ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಕೃಷಿ ಯೋಗ್ಯ ಭೂಮಿಯನ್ನು ಬಿ ಖರಾಬು ಎಂದು ತೀರ್ಮಾನಿಸಿರುವ ಆದೇಶವನ್ನು ರದ್ದುಗೊಳಿಸಿ, ಸಾಗುವಳಿ ಮಾಡುವ ರೈತರಿಗೆ ಪಟ್ಟಾ ನೀಡುವಂತೆ ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ದೇವೇಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಶಾಂತಕುಮಾರ, ಗೌರವಾಧ್ಯಕ್ಷ ಬಿ.ಎಂ. ಉಜ್ಜಿನಯ್ಯ, ಪ್ರಧಾನ ಕಾರ್ಯದರ್ಶಿ ಆರ್. ಬಸವರಾಜ, ಕೆ. ಪರಶುರಾಮ, ವಿ.ಎಂ. ಬಸವರಾಜ, ಕೃಷ್ಣಪ್ಪ, ಸಿದ್ಲಿಂಗಪ್ಪ, ಕಲ್ಲಪ್ಪ, ಓಬಳೇಶ, ಬಸವರಾಜ, ನಾಗರಾಜ, ಅಂಜಿನಪ್ಪ, ಟಿ.ಡಿ. ನರಸಿಂಹ, ಮಲಿಯಪ್ಪ, ರಾಮಾಂಜಿನಪ್ಪ, ಅಂಜಿನಪ್ಪ, ಹುಲಿರಾಜ, ವೆಂಕಟೇಶ, ಮಲ್ಲೇಶ್ ಮುಂತಾದವರು ಉಪಸ್ಥಿತರಿದ್ದರು.

ಸಂಡೂರಿನಲ್ಲಿ ಸೋಮವಾರ ರೈತ ಸಂಘದ ಮುಖಂಡರು ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

Share this article