ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವೈಯಕ್ತಿಕ ಹಿತಾಸಕ್ತಿ ಮತ್ತು ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಅರಣ್ಯ ನಾಶದಂಚಿಗೆ ಬಂದು ನಿಂತಿದೆ. ಅರಣ್ಯ ಸಂರಕ್ಷಣೆ ಯಲ್ಲಿ ಬಿಷ್ನೋಯಿ ಸಮುದಾಯದ ನಾಯಕರಂತಹವರ ಸಂಖ್ಯೆ ಇಂದು ಕಾಣದಾಗಿದೆ. 363 ಜನರನ್ನು ಬಲಿಪಡೆದ ಕೇಜರ್ಲಿ ಹತ್ಯಾಕಾಂಡ ಸಾಮಾಜಿಕ ದುರಂತ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ಹೇಳಿದರು.ಇಲ್ಲಿನ ಅರಣ್ಯ ಇಲಾಖೆಯು ಶ್ರೀಗಂಧದ ಕೋಠಿಯ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಅರಣ್ಯ ರಕ್ಷಣೆಯ ಮಹತ್ವದ ಸೇವೆಯಲ್ಲಿ ತಮ್ಮ ಬದುಕನ್ನು ಮುಡುಪಾಗಿಸಿಕೊಂಡ ಅರಣ್ಯ ರಕ್ಷಕರಿಗೆ ಅವರ ಅವಲಂಬಿತರಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಗೌರವ, ಸೌಲಭ್ಯಗಳು ದೊರೆಯದಿರುವುದು ಅತ್ಯಂತ ನೋವಿನ ಸಂಗತಿ. ಅರಣ್ಯ ರಕ್ಷಕರಿಗೆ, ಅವರ ಕುಟುಂಬದ ಅವಲಂಬಿ ತರ ನೆಮ್ಮದಿಯ ಬದುಕಿಗೆ ನೈತಿಕ ಸ್ಥೈರ್ಯ ನೀಡುವ ಬಗ್ಗೆ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಕೈಗೊಳ್ಳ ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಿಂದೆಂದಿಗಿಂತ ಇಂದು ಅದರ ರಕ್ಷಣೆ ಅಗತ್ಯವಿದೆ. ಇಂದಿನ ಅವಶ್ಯಕತೆಗಿಂತ ಭವಿಷ್ಯದ ದಿನಗಳಲ್ಲಿ ಎದುರಿಸಬಹುದಾದ ಸಮಸ್ಯೆ-ಸವಾಲುಗಳ ಬಗ್ಗೆಯೂ ಚರ್ಚಿಸುವ ಅವಶ್ಯಕತೆ ಇದೆ ಎಂದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಜಗತ್ತಿನ ಮನುಕುಲವನ್ನು ಒಂದು ಮಾಡುವಲ್ಲಿ ಪ್ರಕೃತಿ ಮತ್ತು ಪರಿಸರದ ಮಹತ್ವ ಪ್ರಧಾನವಾದುದ್ದಾಗಿದೆ. ಅರಣ್ಯ ರಕ್ಷಣೆ ಇಲಾಖೆಯ ಒಂದು ಕಾರ್ಯಕ್ರಮ ಮಾತ್ರ ವಾಗಿರದೇ ಮಾನವೀಯ ನೆಲೆಯಲ್ಲಿಯೂ ಕಾರ್ಯನಿರ್ವಹಿಸಬಹುದಾದ ಸೇವಾ ವಲಯ ಎಂಬುದನ್ನು ಪಿ.ಶ್ರೀನಿವಾಸ್ ಅವರಂತಹ ಅನೇಕ ಹಿರಿಯ ಅರಣ್ಯಾಧಿಕಾರಿಗಳು ಸಾಬೀತುಪಡಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಅವಿನಾಭಾವ ಸಂಬಂಧ ಇರುವುದನ್ನು ಅವರು ಜನರಿಗೆ ಪರಿಚಯಿಸಿದರು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯೊಂದಿಗೆ ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂದಿ ಕವಾಯತಿನಲ್ಲಿ ಭಾಗವಹಿಸಿ, ಮೂರು ಸುತ್ತಿನ ಕುಶಾಲ ತೋಪುಗಳನ್ನು ಹಾರಿಸಿ, ಹುತಾತ್ಮ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಹುತಾತ್ಮರ ಪುತ್ಥಳಿಗೆ ಪುಷ್ಪಗುಚ್ಚವಿಟ್ಟು ಗೌರವ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಪ್ರಸನ್ನಕೃಷ್ಣ ಪಟಗಾರ್ , ಉಪ ಅರಣ್ಯ ಸಂರಕ್ಷಣಾಧಿಕಾರಿ ಈ.ಶಿವಶಂಕರ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಕೃತಿಯಲ್ಲಿ ದೈವತ್ವವ ಕಾಣುವ ಕಾಲ ಮಾಸಿದೆವನ್ಯಪ್ರಾಣಿ ಮತ್ತು ವನ್ಯಸಂಪತ್ತು ರಕ್ಷಣೆ ಇಂದು ಸವಾಲಾಗಿ ಪರಿಣಮಿಸಿದೆ. ಅಲ್ಲದೇ ಅದರ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಾದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಅಪಾಯಕಾರಿ ಸನ್ನಿವೇಶಗಳೂ ಎದುರಾಗಲಿವೆ. ಕಾಡ್ಗಿಚ್ಚುಗಳಂತಹ ಸಂದರ್ಭದಲ್ಲಿ ವನ್ಯಪ್ರಾಣಿಗಳ ರಕ್ಷಣೆ ತ್ರಾಸದಾಯಕ. ಪ್ರಕೃತಿ-ಪರಿಸರವನ್ನು ಹಿಂದಿನವರು ಭಕ್ತಿ-ಭಾವದಿಂದ ದೈವತ್ವಕ್ಕೆ ಏರಿಸಿ, ಪೂಜ್ಯಭಾವದಿಂದ ಕಾಣುತ್ತಿದ್ದರು. ಅದು ಇಂದು ಕಾಣೆಯಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಹೇಳಿದರು.