ಹರಪನಹಳ್ಳಿ : ಸಾಗುವಳಿ ಮಾಡಿದ್ದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದ್ದರಿಂದ ರೈತ ಮಹಿಳೆಯರು ಆತ್ಮಹ*ಗೆ ಯತ್ನಿಸಿದ ಘಟನೆ ಹರಪನಹಳ್ಳಿ ತಾಲೂಕಿನ ಮಾಚಿಹಳ್ಳಿ ಬಳಿ ಜರುಗಿದೆ.
ಮಾಚಿಹಳ್ಳಿ ಸರ್ವೆ ನಂಬರ 382 ಭೂಮಿಯಲ್ಲಿ ತಾಳೇದಹಳ್ಳಿ ತಾಂಡಾದ ಆರು ಜನ ಹಾಗೂ ಮಾಚಿಹಳ್ಳಿ ಕೊರಚರ ಹಟ್ಟಿಯ ಒಬ್ಬ ಒಟ್ಟು 7 ಜನರು ಸಾಗುವಳಿ ಮಾಡಿ ಬಿತ್ತನೆ ಕೈಗೊಂಡಿದ್ದರು.
ಈ ಕುರಿತು ವಲಯ ಅರಣ್ಯಾಧಿಕಾರಿ ರಾಜು ಗೊಂದಕರ್ ಮಾಹಿತಿ ನೀಡಿದ್ದು, ಅವರು ಸಾಗುವಳಿ ಮಾಡಿದ ಭೂಮಿ ಅರಣ್ಯ ಪ್ರದೇಶಕ್ಕೆ ಒಳಪಟ್ಟಿದ್ದು, ಸಾಗುವಳಿ ಮಾಡಬೇಡಿ ಎಂದು ಹೇಳಿದರೂ ಕೇಳಲಿಲ್ಲ. ಆದ್ದರಿಂದ ಜೂ. 27ರಂದು 7 ಜನರ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿತ್ತು. ಆದರೂ ಅವರು ಬಿತ್ತನೆ ಕಾರ್ಯ ಮಾಡಿದ್ದರು.
ಅಕ್ರಮ ಬಿತ್ತನೆ ಮಾಡಿದ್ದರಿಂದ ಆ. 1 ಮತ್ತು 2ರಂದು ಪೋಲೀಸರ ರಕ್ಷಣೆಯೊಂದಿಗೆ ತಹಸೀಲ್ದಾರ್ ಸಮ್ಮುಖದಲ್ಲಿ ಅಂದಾಜು 40 -45 ಎಕರೆ ಭೂಮಿಯಲ್ಲಿ ಬೆಳೆ ನಾಶಪಡಿಸಿ ತೆರವುಗೊಳಿಸಿದೆವು ಎಂದು ತಿಳಿಸಿದರು.
ಅಧಿಕಾರಿಗಳ ದೌರ್ಜನ್ಯ, ಆತ್ಮಹ*ಗೆ ಯತ್ನ:
ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯದಿಂದ ಬೇಸತ್ತ ದಲಿತ ರೈತ ಮಹಿಳೆಯರುಆತ್ಮಹ*ಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಚಿಹಳ್ಳಿ ಕೊರಚರಹಟ್ಟಿಯ ಲೋಕಮ್ಮ, ದುರ್ಗಮ್ಮ ಹೊಲದಲ್ಲಿಯೇ ವಿಷಸೇವಿಸಿ ಆತ್ಮಹ*ಗೆ ಯತ್ನಿಸಿದ್ದಾರೆ. ಗ್ರಾಮಸ್ಥರು ಕೂಡಲೇ ಅವರನ್ನು ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಬೆಳೆ ನಾಶ ಮಾಡಿರುವುದು 31 ಬಿ ಸರ್ವೆ ನಂಬರ್ ಇದ್ದು, ಇದು ಕಂದಾಯ ಇಲಾಖೆಗೆ ಸಂಬಂಧಪಟ್ಟಿರುತ್ತದೆ. ಸಕ್ರಮಗೊಳಿಸಿಕೊಳ್ಳಲು 1991ರಿಂದ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೂ ಸಕ್ರಮಗೊಳಿಸಿಲ್ಲ. 382 ಸರ್ವೆ ನಂಬರ್ ಕೂಡ 1991ರಿಂದ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. 98ರಲ್ಲಿ ಅದೇ ಸರ್ವೆ ನಂಬರ್ನಲ್ಲಿ ಹಲವರಿಗೆ ಹಕ್ಕುಪತ್ರ ನೀಡಿದ್ದಾರೆ. ಇದೀಗ ದಿಢೀರ್ 12 ಜೆಸಿಬಿ ಬಳಸಿ ಬೆಳೆ ನಾಶ ಮಾಡಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್ಪಿ ಲಿಂಬ್ಯಾನಾಯ್ಕ ಆರೋಪಿಸಿದ್ದಾರೆ.