ಕನ್ನಡಪ್ರಭ ವಾರ್ತೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಣಿಸಿಕೊಂಡು ಆತಂಕ ಉಂಟು ಮಾಡಿದ್ದ ತಾಯಿ ಹುಲಿ ಮತ್ತದರ ಮೂರು ಮರಿಗಳ ಪೈಕಿ ಒಂದು ಗಂಡು ಹುಲಿಮರಿಯನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.ಬಿಳಿಕೆರೆ ಹೋಬಳಿ ವ್ಯಾಪ್ತಿಯ ಆರ್ಎಂಪಿ ಬಳಿ ಮಂಗಳವಾರ ಮಧ್ಯಾಹ್ನದ ವೇಳೆ 8 ರಿಂದ 10 ತಿಂಗಳ ಗಂಡು ಹುಲಿಮರಿಯನ್ನು ಪತ್ತೆ ಹಚ್ಚಲಾಗಿದೆ. ನಿತ್ರಾಣದಿಂದ ಬಳಲುತ್ತಿದ್ದ 8-10 ತಿಂಗಳ ವಯಸ್ಸಿನ ಹುಲಿಮರಿಯನ್ನು ಇಲಾಖೆ ಪಶುವೈದ್ಯಾಧಿಕಾರಿ ಡಾ. ಆದರ್ಶ ಮತ್ತವರ ತಂಡ ಪ್ರಥಮ ಚಿಕಿತ್ಸೆಯೊಂದಿಗೆ ವೈದ್ಯರ ಸಲಹೆ ಮೇರೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಯಿತು. ಬಿಳಿಕೆರೆ ಹೋಬಳಿ ವ್ಯಾಪ್ತಿಯ ಚಿಕ್ಕಾಡನಹಳ್ಳಿ, ದೊಡ್ಡಕಾಡನಹಳ್ಳಿ, ರಟ್ನಹಳ್ಳಿ, ಹಳೇಕಾಮನಕೊಪ್ಪಲು, ಹೊಸಕಾಮನಕೊಪ್ಪಲು ಮತ್ತು ಈರಪ್ಪನಕೊಪ್ಪಲು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿನಿಂದ ಈ ಹುಲಿ ಕುಟುಂಬ ಪದೇ ಪದೇ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿತ್ತು. ವಿಷಯದ ಗಂಭೀರತೆಯನ್ನು ಅರಿತ ಅರಣ್ಯ ಇಲಾಖೆ ಕಳೆದ 10 ದಿನಗಳಿಂದ ಈ ವ್ಯಾಪ್ತಿಯಲ್ಲಿ ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆ, ಅರಣ್ಯ ಇಲಾಖೆ ಹುಣಸೂರು ಮತ್ತು ಮೈಸೂರಿ ಪ್ರಾದೇಶಿಕ ವಿಭಾಗ, ಮತ್ತು ಮೈಸೂರು ವನ್ಯಜೀವಿ ವಲಯದ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ಸಾಕಾನೆಗಳ ಸಹಾಯದೊಂದಿಗೆ ಕೂಂಬಿಂಗ್ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ನಂತರ 20ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಸಿಬ್ಬಂದಿ ಹುಟುಕಾಟ ನಡೆಸಿದ್ದರು. ಇದೀಗ ಕುಟುಂಬದ ಒಬ್ಬ ಸದಸ್ಯ ಕಾಣಿಸಿಕೊಂಡು ಸೆರೆಯಾಗಿದ್ದಾನೆ. ಕಾರ್ಯಾಚರಣೆಯಲ್ಲಿ ಮೈಸೂರು ವಲಯ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭುಗೌಡ, ಹುಣಸೂರು ಪ್ರಾದೇಶಿಕ ವಿಭಾಗದ ಡಿಸಿಎಫ್ ಮಹಮದ್ ಫಯಾಜುದ್ದೀನ್, ಮೈಸೂರು ಪ್ರಾದೇಶಿಕ ವಿಭಾಗದ ಡಿಸಿಎಫ್ ಪರಮೇಶ್, ಎಸಿಎಫ್ಗಳಾದ ಮಹದೇವಯ್ಯ, ಆರ್ಎಫ್ಒ ನಂದಕುಮಾರ್ ಸೇರಿದಂತೆ ವಿವಿಧ ಕಾರ್ಯಪಡೆ ಸಿಬ್ಬಂದಿ ಭಾಗವಹಿಸಿದ್ದರು.