ಧಾರವಾಡ:
ಇಲ್ಲಿಯ ಕೆ.ಸಿ. ಪಾರ್ಕ್ ಹತ್ತಿರದ ಅರಣ್ಯ ಸಂಕಿರ್ಣದಲ್ಲಿ ಅರಣ್ಯ ಇಲಾಖೆ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅರಣ್ಯ ಸಂರಕ್ಷಣೆ ವಿಚಾರವಾಗಿ ನ್ಯಾಯಾಂಗ ಇಲಾಖೆಯಿಂದ ಹಲವು ತೀರ್ಪುಗಳನ್ನು ನೀಡಲಾಗಿದೆ ಎಂದರು.
ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ವಿವಿಧ ಚಟುವಟಿಕೆ ನಡೆಸುವುದರಿಂದ ಅಲ್ಲಿಯ ಪ್ರಾಣಿ-ಪಕ್ಷಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ಸಣ್ಣ ಬೆಂಕಿಯ ಕಿಡಿಯೊಂದು ಹುಲ್ಲಿಗೆ ತಗುಲಿದರೂ ಇಡೀ ಅರಣ್ಯ ಪ್ರದೇಶವನ್ನೇ ನಾಶಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.ಬಂಡೀಪುರ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚಿನಿಂದ ಸಾಕಷ್ಟು ತೊಂದರೆ ಉಂಟಾಗಿರುವ ಘಟನೆಗಳನ್ನು ನೋಡಿದ್ದೇವೆ. ಕಾಡ್ಗಿಚ್ಚಿನಿಂದ ಅರಣ್ಯ ಹಾಗೂ ಪ್ರಾಣಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಕಾಡ್ಗಿಚ್ಚು ಸಂಭವಿಸಿದ ಸಂದರ್ಭದಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ರಕ್ಷಕರು ಸಾಕಷ್ಟು ತೊಂದರೆ ಎದುರಿಸುತ್ತಾರೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಕೆಲವರು ತಮ್ಮ ಜೀವವನ್ನೂ ಕಳೆದುಕೊಂಡಿರುವ ಘಟನೆಗಳಿವೆ. ಹೀಗಾಗಿ ಅರಣ್ಯ ಸಂರಕ್ಷಣೆಯಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದರು.
ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಮಾತನಾಡಿ, ನಾವೇ ಶ್ರೇಷ್ಠ ಜೀವಿಗಳು ಎಂಬ ಅಹಂಕಾರವಿದ್ದು, ಕೋವಿಡ್ನಂತಹ ಸಣ್ಣ ವೈರಸ್ ಕೂಡ ಮೂರು-ನಾಲ್ಕು ವರ್ಷಗಳ ಕಾಲ ಇಡೀ ಜಗತ್ತಿಗೆ ಸಂಕಷ್ಟ ತಂದಿತು. ಇದರಿಂದ ಪ್ರಕೃತಿ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ಅರಿಯಬೇಕು. ನದಿಗಳಿಗೆ ಆಣೆಕಟ್ಟು ನಿರ್ಮಿಸಿ ನೀರನ್ನು ನಿಯಂತ್ರಿಸಬಹುದು ಎಂಬ ದರ್ಪವೂ ಮನುಷ್ಯರಲ್ಲಿದೆ. ಆದರೆ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮನುಷ್ಯ ಪ್ರಕೃತಿಯ ಮುಂದೆ ಎಷ್ಟು ಸಣ್ಣವನು ಎಂಬುದು ಅರಿವಾಗುತ್ತದೆ. ಆದ್ದರಿಂದ ಪ್ರಕೃತಿ ಬಗ್ಗೆ ಅಹಂಕಾರ ಇರಬಾರದು. ನಮಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ದೊರೆತಿದೆ. ಅದೇ ರೀತಿಯ ಸ್ವಚ್ಛ ಪರಿಸರವನ್ನು ಮುಂದಿನ ಪೀಳಿಗೆಗೂ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.