ಚನ್ನಪಟ್ಟಣ: ಗುಂಪಿನಿಂದ ದೂರಾಗಿ ನಗರದ ಜನವಸತಿ ಪ್ರದೇಶ ಹಾಗೂ ಗ್ರಾಮಾಂತರ ಭಾಗದಲ್ಲಿ ಓಡಾಡಿ ಆತಂಕ ಮೂಡಿಸಿದ್ದ ಒಂಟಿ ಸಲಗವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸೋಮವಾರ ಸೆರೆ ಹಿಡಿದಿದೆ.
ಗುಂಪಿನಿಂದ ಬೇರ್ಪಟ್ಟ ಆನೆ:
ಭಾನುವಾರ ರಾತ್ರಿ ಕಬ್ಬಾಳು ಅರಣ್ಯ ಪ್ರದೇಶದಿಂದ ಮೂರು ಆನೆಗಳು ಚನ್ನಪಟ್ಟಣದ ಕಡೆಗೆ ಆಗಮಿಸಿವೆ. ಈ ವೇಳೆ ಒಂಟಿ ಸಲಗ ಗುಂಪಿನಿಂದ ಬೇರ್ಪಟ್ಟಿದೆ. ಮೊದಲಿಗೆ ಸೋಮವಾರ ಬೆಳಗ್ಗೆ ತಾಲೂಕಿನ ಕೂಡ್ಲೂರು ಬಳಿಯ ಶಿಶಿರ ರೆಸಾರ್ಟ್ ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಆನಂತರ ಕೂಡ್ಲೂರು ಕೆರೆಯಲ್ಲಿ ಈಜಿ ಅಲ್ಲಿಂದ ಮರಳಹೊಲ ಬಳಸಿ ನಗರದತ್ತ ಆನೆ ಪ್ರಯಾಣ ಬೆಳೆಸಿದೆ. ನಗರದ ಸಾತನೂರು ರಸ್ತೆಯಲ್ಲಿರುವ ಎಲ್ಎನ್ ಕಲ್ಯಾಣ ಮಂಟಪದ ಬಳಿ ಸುಮಾರು ೧೨ ಗಂಟೆಗೆ ಆನೆ ಕಾಣಿಸಿಕೊಂಡಿದೆ. ಅಲ್ಲಿಂದ ನಗರದ ಹೌಸಿಂಗ್ ಬೋರ್ಡ್ ಬಡಾವಣೆ, ೮೦ ಅಡಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಗಜರಾಯ ಸಂಚರಿಸಿ, ಆನಂತರ ಸುಣ್ಣಘಟ್ಟ ಕೆರೆ ಬಳಿಗೆ ಆನೆಯನ್ನು ಹಿಮ್ಮಟಿಸಿ ಅಲ್ಲಿನ ಒಂದು ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.ಸುಣ್ಣಘಟ್ಟ ಗ್ರಾಮದ ಬಳಿ ಬೀಡುಬಿಟ್ಟಿದ್ದ ಆನೆಗೆ ಡಾ.ರಮೇಶ್ ಮತ್ತು ಡಾ.ಆದರ್ಶ್ ಅರವಳಿಕೆ ತುಂಬಿದ ಸಿರಂಜ್ ಅನ್ನು ಶೂಟ್ ಮಾಡಿ, ಪ್ರಜ್ಞೆ ತಪ್ಪಿಸಿ ಸೆಣಬಿನ ಹಗ್ಗ ಹಾಗೂ ಸರಪಳಿಯಿಂದ ಬಿಗಿದು ದುಬಾರೆ ಆನೆ ಶಿಬಿರದಿಂದ ಆಗಮಿಸಿದ ಪಳಗಿದ ಆನೆಗಳಾದ ಭೀಮ, ಶ್ರೀಕಂಠ, ಮಹೇಂದ್ರ ಆನೆಗಳ ಸಹಕಾರರಿಂದ ಆನೆಯನ್ನು ಲಾರಿಗೆ ಹತ್ತಿಸಿ ಬೇರೆಡೆ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಯಿತು.
ಸೋಮವಾರ ಬೆಳಗ್ಗೆ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಆನೆ, ಸಾತನೂರು ರಸ್ತೆ, ಹೌಸಿಂಗ್ ಬೋರ್ಡ್ನಲ್ಲಿ ಓಡಾಡಿ ನಗರ ನಾಗರಿಕರನ್ನು ಆತಂಕಕ್ಕೀಡು ಮಾಡಿತ್ತು. ನಗರ ಪ್ರದೇಶದಲ್ಲಿ ಆನೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನ ಮನೆಯಿಂದ ಆಚೆ ಬರಲು ಹಿಂಜರಿಯುವಂತಾಗಿತ್ತು. ಆನೆ ಓಡಾಟ ಕಂಡುಬಂದ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಾರೂ ಮನೆಯಿಂದ ಆಚೆ ಬಾರದಂತೆ ಮನವಿ ಮಾಡಿದ್ದರು.
ನಗರದ ಹೌಸಿಂಗ್ ಬೋರ್ಡ್ನಲ್ಲಿ ದಾಂಗುಡಿ ನಡೆಸಿದ ಒಂಟಿ ಸಲಗ ಒಂದು ಹಸುವನ್ನು ಸಾಯಿಸಿದ್ದು, ಇನ್ನೊಂದು ಹಸುವನ್ನು ಗಾಯಗೊಳಿಸಿದೆ. ಇದೇ ವೇಳೆ ಗುಡಿಸಿಲೊಂದಕ್ಕೆ ನುಗ್ಗಿ ದ್ವಂಸಗೊಳಿಸಿದೆ. ಗುಡಿಲಲ್ಲಿದ್ದ ರಾಜಪ್ಪ ಎದ್ದು ಓಡಿ ಜೀವ ಉಳಿಸಿಕೊಂಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಆನೆ ಗುದ್ದಿದ್ದು, ಕಾರಿಗೆ ಹಾನಿ ಮಾಡಿದೆ.
ಕಬ್ಬಾಳು ಅರಣ್ಯ ಪ್ರದೇಶದಿಂದ ಮೂರು ಆನೆಗಳು ಬಂದಿದ್ದು, ಅದರಲ್ಲಿ ಒಂದು ಆನೆ ದಾರಿತಪ್ಪಿ ನಗರಕ್ಕೆ ಬಂದಿತ್ತು. ಅದನ್ನ ಸುಣ್ಣಘಟ್ಟ ಗ್ರಾಮದ ಕೆರೆಗೆ ಓಡಿಸಿ ಬಳಿಕ ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. ಸೆರೆಹಿಡಿದ ಆನೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು.
ಕೋಟ್.........
-ರಾಮಕೃಷ್ಣಪ್ಪ, ಡಿಎಫ್ಒ, ಬೆಂ.ದ. ಜಿಲ್ಲೆ
ಪೊಟೋ೨೭ಸಿಪಿಟಿ೨:
ಚನ್ನಪಟ್ಟಣ ನಗರದಲ್ಲಿ ಓಡಾಡಿ ಆತಂಕ ಮೂಡಿಸಿದ್ದ ಒಂಟಿ ಸಲಗ.