ಒಂಟಿ ಸಲಗ ಸೆರೆಹಿಡಿದ ಅರಣ್ಯ ಸಿಬ್ಬಂದಿ

KannadaprabhaNewsNetwork |  
Published : Apr 28, 2026, 01:30 AM IST
ಪೊಟೋ೨೭ಸಿಪಿಟಿ೧: ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಸೆರೆ ಸಿಕ್ಕ ಒಂಟಿ ಸಲಗ | Kannada Prabha

ಸಾರಾಂಶ

ಚನ್ನಪಟ್ಟಣ: ಗುಂಪಿನಿಂದ ದೂರಾಗಿ ನಗರದ ಜನವಸತಿ ಪ್ರದೇಶ ಹಾಗೂ ಗ್ರಾಮಾಂತರ ಭಾಗದಲ್ಲಿ ಓಡಾಡಿ ಆತಂಕ ಮೂಡಿಸಿದ್ದ ಒಂಟಿ ಸಲಗವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸೋಮವಾರ ಸೆರೆ ಹಿಡಿದಿದೆ

ಚನ್ನಪಟ್ಟಣ: ಗುಂಪಿನಿಂದ ದೂರಾಗಿ ನಗರದ ಜನವಸತಿ ಪ್ರದೇಶ ಹಾಗೂ ಗ್ರಾಮಾಂತರ ಭಾಗದಲ್ಲಿ ಓಡಾಡಿ ಆತಂಕ ಮೂಡಿಸಿದ್ದ ಒಂಟಿ ಸಲಗವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸೋಮವಾರ ಸೆರೆ ಹಿಡಿದಿದೆ.

ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಸೋಮವಾರ ಸಂಜೆ ೧೮ ವರ್ಷದ ಒಂಟಿ ಸಲಗ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಸಫಲರಾಗಿದ್ದಾರೆ.

ಗುಂಪಿನಿಂದ ಬೇರ್ಪಟ್ಟ ಆನೆ:

ಭಾನುವಾರ ರಾತ್ರಿ ಕಬ್ಬಾಳು ಅರಣ್ಯ ಪ್ರದೇಶದಿಂದ ಮೂರು ಆನೆಗಳು ಚನ್ನಪಟ್ಟಣದ ಕಡೆಗೆ ಆಗಮಿಸಿವೆ. ಈ ವೇಳೆ ಒಂಟಿ ಸಲಗ ಗುಂಪಿನಿಂದ ಬೇರ್ಪಟ್ಟಿದೆ. ಮೊದಲಿಗೆ ಸೋಮವಾರ ಬೆಳಗ್ಗೆ ತಾಲೂಕಿನ ಕೂಡ್ಲೂರು ಬಳಿಯ ಶಿಶಿರ ರೆಸಾರ್ಟ್ ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಆನಂತರ ಕೂಡ್ಲೂರು ಕೆರೆಯಲ್ಲಿ ಈಜಿ ಅಲ್ಲಿಂದ ಮರಳಹೊಲ ಬಳಸಿ ನಗರದತ್ತ ಆನೆ ಪ್ರಯಾಣ ಬೆಳೆಸಿದೆ. ನಗರದ ಸಾತನೂರು ರಸ್ತೆಯಲ್ಲಿರುವ ಎಲ್‌ಎನ್ ಕಲ್ಯಾಣ ಮಂಟಪದ ಬಳಿ ಸುಮಾರು ೧೨ ಗಂಟೆಗೆ ಆನೆ ಕಾಣಿಸಿಕೊಂಡಿದೆ. ಅಲ್ಲಿಂದ ನಗರದ ಹೌಸಿಂಗ್ ಬೋರ್ಡ್ ಬಡಾವಣೆ, ೮೦ ಅಡಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಗಜರಾಯ ಸಂಚರಿಸಿ, ಆನಂತರ ಸುಣ್ಣಘಟ್ಟ ಕೆರೆ ಬಳಿಗೆ ಆನೆಯನ್ನು ಹಿಮ್ಮಟಿಸಿ ಅಲ್ಲಿನ ಒಂದು ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಸುಣ್ಣಘಟ್ಟ ಗ್ರಾಮದ ಬಳಿ ಬೀಡುಬಿಟ್ಟಿದ್ದ ಆನೆಗೆ ಡಾ.ರಮೇಶ್ ಮತ್ತು ಡಾ.ಆದರ್ಶ್ ಅರವಳಿಕೆ ತುಂಬಿದ ಸಿರಂಜ್ ಅನ್ನು ಶೂಟ್ ಮಾಡಿ, ಪ್ರಜ್ಞೆ ತಪ್ಪಿಸಿ ಸೆಣಬಿನ ಹಗ್ಗ ಹಾಗೂ ಸರಪಳಿಯಿಂದ ಬಿಗಿದು ದುಬಾರೆ ಆನೆ ಶಿಬಿರದಿಂದ ಆಗಮಿಸಿದ ಪಳಗಿದ ಆನೆಗಳಾದ ಭೀಮ, ಶ್ರೀಕಂಠ, ಮಹೇಂದ್ರ ಆನೆಗಳ ಸಹಕಾರರಿಂದ ಆನೆಯನ್ನು ಲಾರಿಗೆ ಹತ್ತಿಸಿ ಬೇರೆಡೆ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಯಿತು.

ಆತಂಕ ಮೂಡಿಸಿದ್ದ ಆನೆ:

ಸೋಮವಾರ ಬೆಳಗ್ಗೆ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಆನೆ, ಸಾತನೂರು ರಸ್ತೆ, ಹೌಸಿಂಗ್ ಬೋರ್ಡ್‌ನಲ್ಲಿ ಓಡಾಡಿ ನಗರ ನಾಗರಿಕರನ್ನು ಆತಂಕಕ್ಕೀಡು ಮಾಡಿತ್ತು. ನಗರ ಪ್ರದೇಶದಲ್ಲಿ ಆನೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನ ಮನೆಯಿಂದ ಆಚೆ ಬರಲು ಹಿಂಜರಿಯುವಂತಾಗಿತ್ತು. ಆನೆ ಓಡಾಟ ಕಂಡುಬಂದ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಾರೂ ಮನೆಯಿಂದ ಆಚೆ ಬಾರದಂತೆ ಮನವಿ ಮಾಡಿದ್ದರು.

ಒಂದು ಹಸು ಸಾವು:

ನಗರದ ಹೌಸಿಂಗ್ ಬೋರ್ಡ್‌ನಲ್ಲಿ ದಾಂಗುಡಿ ನಡೆಸಿದ ಒಂಟಿ ಸಲಗ ಒಂದು ಹಸುವನ್ನು ಸಾಯಿಸಿದ್ದು, ಇನ್ನೊಂದು ಹಸುವನ್ನು ಗಾಯಗೊಳಿಸಿದೆ. ಇದೇ ವೇಳೆ ಗುಡಿಸಿಲೊಂದಕ್ಕೆ ನುಗ್ಗಿ ದ್ವಂಸಗೊಳಿಸಿದೆ. ಗುಡಿಲಲ್ಲಿದ್ದ ರಾಜಪ್ಪ ಎದ್ದು ಓಡಿ ಜೀವ ಉಳಿಸಿಕೊಂಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಆನೆ ಗುದ್ದಿದ್ದು, ಕಾರಿಗೆ ಹಾನಿ ಮಾಡಿದೆ.

ಕೋಟ್................

ಕಬ್ಬಾಳು ಅರಣ್ಯ ಪ್ರದೇಶದಿಂದ ಮೂರು ಆನೆಗಳು ಬಂದಿದ್ದು, ಅದರಲ್ಲಿ ಒಂದು ಆನೆ ದಾರಿತಪ್ಪಿ ನಗರಕ್ಕೆ ಬಂದಿತ್ತು. ಅದನ್ನ ಸುಣ್ಣಘಟ್ಟ ಗ್ರಾಮದ ಕೆರೆಗೆ ಓಡಿಸಿ ಬಳಿಕ ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. ಸೆರೆಹಿಡಿದ ಆನೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು.

-ಮಲ್ಲೇಶ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ

ಕೋಟ್.........

ಚನ್ನಪಟ್ಟಣ ನಗರದಲ್ಲಿ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ್ದ ಆನೆಯಲ್ಲಿ ಸೆರೆಹಿಡಿಯಲಾಗಿದೆ. ಇನ್ನೂ ಐದು ಆನೆಗಳ ಸೆರೆಗೆ ಅನುಮತಿ ಕೋರಿದ್ದು, ಅನುಮತಿ ಸಿಕ್ಕ ಬಳಿಕ ಅವುಗಳನ್ನೂ ಸೆರೆ ಹಿಡಿಯಲಾಗುವುದು. ಮುಂದಿನ ವಾರದಲ್ಲಿ ಮತ್ತೆ ಆನೆಸೆರೆ ಕಾರ್ಯಾಚರಣೆ ಆರಂಭಿಸುತ್ತೇವೆ.

-ರಾಮಕೃಷ್ಣಪ್ಪ, ಡಿಎಫ್‌ಒ, ಬೆಂ.ದ. ಜಿಲ್ಲೆ

ಪೊಟೋ೨೭ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಸೆರೆ ಸಿಕ್ಕ ಒಂಟಿ ಸಲಗ.

ಪೊಟೋ೨೭ಸಿಪಿಟಿ೨:

ಚನ್ನಪಟ್ಟಣ ನಗರದಲ್ಲಿ ಓಡಾಡಿ ಆತಂಕ ಮೂಡಿಸಿದ್ದ ಒಂಟಿ ಸಲಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗುವಂತೆ ಭಕ್ತರನ್ನು ಕಾಣುತ್ತಿದ್ದ ಸಿದ್ದಗಂಗಾ ಶ್ರೀಗಳು: ಜಗದೀಶ್‌ ಶೆಟ್ಟರ್
ಕವಿ ಕೆ.ಎಸ್.ನ ಸರೋವರಕ್ಕೆ ಜೀವ ತುಂಬಲು ಟ್ರಸ್ಟ್ ಸದಸ್ಯರಿಂದ ಚರ್ಚೆ