ಸಿದ್ದಾಪುರ: ಅರಣ್ಯವಾಸಿಗಳು ಗಿಡ ನೆಡುವುದು ಪರಿಸರ ಜಾಗೃತಿಯ ಸಂಕೇತ. ಅರಣ್ಯಭೂಮಿ ಸಾಗುವಳಿ ಜೊತೆಯಲ್ಲಿ ಪರಿಸರ ಉಳಿಸಿ ಬೆಳೆಸುವ ಕಾರ್ಯವು ಅರಣ್ಯವಾಸಿಗಳ ಅವಿಭಾಜ್ಯ ಕಾರ್ಯ. ಕಾಡು ಮಲೆನಾಡಿನ ಐರ್ಶಯ್ಯ ಮಾತ್ರವಲ್ಲದೇ ಬದುಕಿನ ಭಾಗವೂ ಆಗಿದೆ. ಕಾಡು ಇದ್ದರೆ ನಾಡು ಎಂದು ಹಿರಿಯ ಚಿಂತಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಅವರು ಶನಿವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ತಾಲೂಕಿನ ಬೇಡ್ಕಣಿಯ ಹನುಮಂತ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ದಶ ಲಕ್ಷ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಮರ ಬಿಟ್ಟು ಮಾನವನಿಲ್ಲ, ಮಾನವನಿಲ್ಲದೇ ಮರವಿಲ್ಲ. ಇಂದಿನ ಬದುಕಿನ ಜೀವನದಲ್ಲಿ ಪರಿಸರ ಜಾಗೃತಿಗೆ ಅರಣ್ಯವಾಸಿಗಳು ಗಿಡ ನೆಡುವ ಕಾರ್ಯ ಪ್ರಶಂಸನೀಯ. ಅರಣ್ಯವಾಸಿಗಳು ಭೂಮಿ ಹಕ್ಕಿನ ಹೋರಾಟಕ್ಕೆ ನೀಡುವ ಪ್ರಾಮುಖ್ಯತೆಯಷ್ಟೇ ಪರಿಸರ ಉಳಿಸಿ ಬೆಳೆಸುವುದಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.
ದಶಲಕ್ಷ ಗಿಡ ನೆಡುವ ಅಭಿಯಾನ ಇಂದಿನಿಂದ ಮುಂದಿನ ೧೫ ದಿನಗಳವರೆಗೆ ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ಸಹಸ್ರಾರು ಅರಣ್ಯವಾಸಿಗಳು ಮನೆ ಮನೆಯಲ್ಲಿ ಗಿಡ ನೆಡುವ ಕಾರ್ಯ ಜರುಗಲಿದೆ ಎಂದು ಅಧ್ಯಕ್ಷ ರವೀಂದ್ರ ಹೇಳಿದರು.ಅಭಿಯಾನದ ಸಂಘಟಕ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ದಶಲಕ್ಷ ಗಿಡ ನೆಡುವ ಅಭಿಯಾನ ಇಂದಿನಿಂದ ಮುಂದಿನ ೧೫ ದಿನಗಳವರೆಗೆ ಇಡೀ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಹಸ್ರಾರು ಅರಣ್ಯವಾಸಿಗಳ ಮನೆ ಮನೆಯಲ್ಲಿ ಗಿಡ ನೆಡುವ ಕಾರ್ಯ ಜರುಗಲಿದೆ ಎಂದರು.
ಹಿರಿಯರಾದ ತಿಮ್ಮಣ ನಾಯ್ಕ ಕಡಕೇರಿ, ವಿ.ಎನ್. ನಾಯ್ಕ ಬಿಲಾನೆ, ಜಗದೀಶ ನಾಯ್ಕ ಶಿರಳಗಿ, ಹರಿರರ ನಾಯ್ಕ, ಓಂಕಾರ, ರಾಘವೇಂದ್ರ ಕವಂಚೂರು ಮುಂತಾದವರು ಮಾತನಾಡಿದರು.ಗ್ರೀನ್ ಕಾರ್ಡ್ ಪ್ರಮುಖರಾದ ದಿನೇಶ ನಾಯ್ಕ ಬೇಡ್ಕಣಿ, ಸುಧಾಕರ ಮಡಿವಾಳ, ಜಯಂತ ನಾಯ್ಕ ಕಾನಗೋಡ, ಕಮಲಾಕರ್ ತ್ಯಾರ್ಸಿ, ಚಂದ್ರು ಚೆನ್ನಯ್ಯ, ರಾಮಚಂದ್ರ ನಾಯ್ಕ ತ್ಯಾಗಲೆಮನೆ ಉಪಸ್ಥಿತರಿದ್ದರು.
ಅಭಿಯಾನದ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಸ್ವಾಗತಿಸಿದರು. ವಿನಾಯಕ ದೊಡ್ಮನೆ ನಿರೂಪಿಸಿದರು. ನಾಗರಾಜ ಮರಾಠಿ ಕೋಡಿಗದ್ದೆ ವಂದಿಸಿದರು.