ಹದಿಹರೆಯ ಬದುಕು ರೂಪಿಸಿಕೊಳ್ಳುವ ಹೊತ್ತು: ಜಗದೀಶ ಶರ್ಮ ಸಂಪ

KannadaprabhaNewsNetwork | Published : Jan 13, 2025 12:46 AM

ಬಾಲ್ಯದಲ್ಲಿ ಒಳ್ಳೆಯದನ್ನು ತುಂಬಿಕೊಳ್ಳಲು ಬಹಳ ಅವಕಾಶಗಳು ಇರುತ್ತದೆ. ಹೀಗಾಗಿ ಬಾಲ್ಯ ಹದಿಹರೆಯ ಯೌವ್ವನದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿಕೊಳ್ಳಬೇಕು.

ಕುಮಟಾ: ಹದಿಹರೆಯವೆಂಬುದು ಎಲ್ಲರೂ ಬದುಕನ್ನು ರೂಪಿಸಿಕೊಳ್ಳುವ ಹೊತ್ತು. ಹದಿಹರೆಯವು ಕನಸು ಕಾಣುವಂತಹ ಸಮಯ. ಕನಸು ಕಂಡು ಅಂತೆಯೇ ಸಾಧನೆ ಮಾಡಿದವರು ಇದ್ದಾರೆ. ಆ ತರಹ ಆಗದವರೂ ಇದ್ದಾರೆ. ಹದಿಹರೆಯ ಹಾಗೂ ಯೌವ್ವನ ಬದುಕನ್ನು ಕಟ್ಟಿಕೊಳ್ಳುವ ಸಮಯವಾದ ಕಾರಣ ಈ ಕಾಲದಲ್ಲಿ ಉತ್ತಮ ಚಿಂತನೆಗಳು ಒಡಮೂಡಬೇಕು. ಎಂದು ಖ್ಯಾತ ವಿದ್ವಾಂಸ, ವಾಗ್ಮಿ, ಲೇಖಕ ವಿ. ಜಗದೀಶ ಶರ್ಮ ಸಂಪ ಅಭಿಪ್ರಾಯಪಟ್ಟರು.

ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ನಡೆದ ಸುಜ್ಞಾನ ಸಂಪದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ರಾಕ್ಷಸರಿಗೆ ಬಾಲ್ಯವಿಲ್ಲ. ಹುಟ್ಟುವಾಗಲೇ ತಾಯಿಯಷ್ಟು ವಯಸ್ಸು ಅವರದ್ದಾಗುತ್ತಿತ್ತು. ಆದ ಕಾರಣವೇ ಅವರಿಗೆ ರಾಕ್ಷಸೀಯ ಪ್ರವೃತ್ತಿ ಬೆಳೆಯಿತು ಎಂಬುದು ಗಮನಾರ್ಹ. ಹೀಗಾಗಿ ಬಾಲ್ಯವು ಬಹು ಮಹತ್ವಪೂರ್ಣವಾದದ್ದು. ಬಾಲ್ಯದಲ್ಲಿ ಒಳ್ಳೆಯದನ್ನು ತುಂಬಿಕೊಳ್ಳಲು ಬಹಳ ಅವಕಾಶಗಳು ಇರುತ್ತದೆ. ಹೀಗಾಗಿ ಬಾಲ್ಯ ಹದಿಹರೆಯ ಯೌವ್ವನದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿಕೊಳ್ಳಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು ಗಣ್ಯರನ್ನು ಸ್ವಾಗತಿಸಿ, ಪರಿಚಯಿಸಿದರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಮೌಲ್ಯ ಶಿಕ್ಷಣವನ್ನು ಅಳವಡಿಸುವಲ್ಲಿ ವಿದ್ವಾನ್ ಜಗದೀಶ ಶರ್ಮ ಅವರ ಪಾತ್ರ ಮಹತ್ವದ್ದು, ಅವರ ಜ್ಞಾನ- ವಿಜ್ಞಾನ ಅಧ್ಯಯನ ಕೇಂದ್ರದ ಪುಸ್ತಕಗಳೇ ಇಂದು ಬಳಕೆಯಲ್ಲಿ ಇರುವಂತಹುದು ಎಂದರು.

ಸಂಸ್ಥೆಯ ಅಧ್ಯಕ್ಷ ವಿಠ್ಠಲ ಆರ್. ನಾಯಕ, ಹಿರಿಯ ವಿಶ್ವಸ್ಥ ರಮೇಶ ಪ್ರಭು, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ವೇದಿಕೆಯಲ್ಲಿದ್ದರು. ಸಿವಿಎಸ್‌ಕೆ ಹಾಗೂ ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಸವಿ ಸವಿದರು. ಮುಖ್ಯೋಪಾಧ್ಯಾಯ ಗಣೇಶ ಜೋಶಿ ನಿರೂಪಿಸಿ, ವಂದಿಸಿದರು.೧೪ರಂದು ಗಣೇಶಗುಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ದೇಹಳ್ಳಿ ಗ್ರಾಪಂ ವ್ಯಾಪ್ತಿಯ ಕಟ್ಟಿಗೆಯ ಶ್ರೀ ಕ್ಷೇತ್ರ ಗಣೇಶಗುಡಿಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜ. ೧೪ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಬೆಳಗ್ಗೆ ೯ ಗಂಟೆಗೆ ಅರ್ಚಕರ ಮನೆಯ ನೂತನ ಕಟ್ಟಡದ ಪಂಚಗವ್ಯ ಹೋಮ, ವಾಸ್ತು ಹೋಮ, ಮಧ್ಯಾಹ್ನ ೧೨ ಗಂಟೆಗೆ ಗೋಪಾಲಕೃಷ್ಣ ದೇವರ ದೇವಕಾರ್ಯ, ಮಹಾನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ಪ್ರಸಾದ ಭೋಜನ, ಮಧ್ಯಾಹ್ನ ೨ರಿಂದ ರಾಷ್ಟ್ರೀಯ ಸೇವಾ ಸಹಕಾರಿ ಸಂಘದ ಕಟ್ಟಿಗೆ ಶಾಖಾ ಸಂಕ್ರಾಂತಿ ಉತ್ಸವದಲ್ಲಿ ಶಿರಸಿಯ ನಾಗೇಶ ಅವರಿಂದ ಬೌದ್ಧಿಕ, ಮಧ್ಯಾಹ್ನ ೨.೩೦ರಿಂದ ೩.೩೦ರ ವರೆಗೆ ಆರೋಗ್ಯ ಭಾರತಿಯ ಶಿರಸಿ ವಿಭಾಗದ ಸಂಯೋಜಕ ಡಾ. ಮಂಜುನಾಥ ಅವರಿಂದ "ಆಹಾರ ಆರೋಗ್ಯ " ಎಂಬ ಕುರಿತು ಚಿಂತನೆ, ಮಧ್ಯಾಹ್ನ ೩.೩೦ರಿಂದ ಮಾಗೋಡಿನ ಶ್ರೀ ವೀರ ಮಾರುತಿ ಹವ್ಯಾಸಿ ತಾಳಮದ್ದಲೆ ಕೂಟದಿಂದ "ರುಕ್ಮಿಣಿ ಸ್ವಯಂವರ " ತಾಳಮದ್ದಲೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರರು ತಿಳಿಸಿದ್ದಾರೆ.