ಹರಪನಹಳ್ಳಿ: ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ ಅವರ ಗರಡಿಯಲ್ಲಿ ನಾವು ಬೆಳೆದಿದ್ದೇವೆ. ತಂದೆ ಎಂ.ಪಿ. ಪ್ರಕಾಶ, ಸಹೋದರ ಎಂ.ಪಿ. ರವೀಂದ್ರ ಅವರ ಹಾದಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ನಡೆಯುತ್ತೇನೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.
ನಾನು ಎಂಎಲ್ಎ ಅನ್ನುವುದಕ್ಕಿಂತ ಎಲ್ಲರ ಬಾಯಲ್ಲಿ ಈಗಿರುವ ಲತಕ್ಕ ಆಗಲು ಇಷ್ಟ ಎಂದ ಅವರು, ನಮ್ಮ ತಂದೆಯ ಪಾಠವನ್ನು ಯಾವತ್ತೂ ಮರೆಯಲ್ಲ. ಎಷ್ಟು ಸಾಧ್ಯವೋ ಅಷ್ಟು ಕೆಲಸವನ್ನು ಹರಪನಹಳ್ಳಿ ಕ್ಷೇತ್ರಕ್ಕೆ ಮಾಡುತ್ತೇವೆ ಎಂದರು.
ಅಂದು ನಮ್ಮ ತಂದೆ ಎಂ.ಪಿ. ಪ್ರಕಾಶ ಅವರು ಅನುಷ್ಠಾನಗೊಳಿಸಿದ ನಿರ್ಮಲ ಕರ್ನಾಟಕ ಯೋಜನೆಯನ್ನು ಇಂದು ಬಿಜೆಪಿಯವರು ಸ್ವಚ್ಛ ಭಾರತ ಎಂದು ನಾಮಕರಣ ಮಾಡಿದ್ದಾರೆ ಎಂದರು.ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಎಂ.ಪಿ. ಪ್ರಕಾಶ ಅವರು ನಮ್ಮ ಮುಂದೆ ಇಲ್ಲ. ಆದರೆ ಅವರು ನೀಡಿದ ಶಾಶ್ವತ ಯೋಜನೆಗಳು ನಮ್ಮ ಮುಂದೆ ಇವೆ. ರಾಜಕಾರಣಿಗಳು ಎಂ.ಪಿ. ಪ್ರಕಾಶ ಅವರನ್ನು ಆದರ್ಶರನ್ನಾಗಿ ಇಟ್ಟುಕೊಳ್ಳಬೇಕು ಎಂದರು.
ಎಂ.ಪಿ. ಪ್ರಕಾಶ ಅವರದು ರಾಜಕಾರಣದ ಜತೆಗೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ಇದೆ ಎಂದರು.
ಪುರಸಭಾ ಹಿರಿಯ ಸದಸ್ಯ ಅಬ್ದುಲ್ ರಹಿಮಾನ್ ಸಾಹೇಬ್ ಮಾತನಾಡಿ, ಎಂ.ಪಿ. ಪ್ರಕಾಶ ಅವರು ಅಪರೂಪದ ರಾಜಕಾರಣಿಯಾಗಿದ್ದರು. ಶಾಶ್ವತ ಯೋಜನೆಗಳನ್ನು ನಾಡಿಗೆ ನೀಡಿದ್ದಾರೆ ಎಂದರು.
ಮುಖಂಡರಾದ ಎಚ್.ಎಂ. ಮಲ್ಲಿಕಾರ್ಜುನ, ಗೌತಮಪ್ರಭು, ಎಚ್.ಎಂ. ಕೊಟ್ರಯ್ಯ, ಪುರಸಭಾ ಸದಸ್ಯರಾದ ಟಿ. ವೆಂಕಟೇಶ, ಉದ್ದಾರ ಗಣೇಶ, ಮುಖಂಡರಾದ ವಸಂತಪ್ಪ, ಲಕ್ಕಳ್ಳಿ ಹನುಮಂತಪ್ಪ, ದೊಡ್ಡಜ್ಜರ ಹನುಮಂತಪ್ಪ, ಮೈದೂರು ರಾಮಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ, ಗುಂಡಗತ್ತಿ ಗಾಯತ್ರಮ್ಮ, ಕವಿತಾ ಸುರೇಶ, ಭಾಗ್ಯಮ್ಮ, ಮತ್ತೂರು ಬಸವರಾಜ, ಶಿವರಾಜ, ಸಾಸ್ವಿಹಳ್ಳಿ ನಾಗರಾಜ, ಶಿವಕುಮಾರನಾಯ್ಕ, ಗುಡಿ ನಾಗರಾಜ ಇತರರು ಪಾಲ್ಗೊಂಡಿದ್ದರು.