ಹರಪನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಾಜಿ ದೇವದಾಸಿ ಮಹಿಳೆಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸ್ಥಳೀಯ ಪ್ರವಾಸಿ ಮಂದಿರದಿಂದ ಹೊಸಪೇಟೆ ರಸ್ತೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ ನಂತರ ವೆಲ್ ಕಂ ಬೋರ್ಡ್ ಬಳಿ ಇರುವ ಸಿಡಿಪಿಒ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಬೇಡಿಕೆಗಳು:ಸರ್ವೆಯಿಂದ ಹೊರಗುಳಿದ ಎಲ್ಲ ದೇವದಾಸಿ ಮಹಿಳೆಯರನ್ನು ವಯಸ್ಸಿನ ವಯೋಮಿತಿ ಇಲ್ಲದೇ ಸರ್ವೆ ಪಟ್ಟಿಗೆ ಸೇರಿಸಬೇಕು. ಹಿಂದೆ 2007-08ನೇ ಸಾಲಿನಲ್ಲಿ ಸರ್ವೆಯಲ್ಲಿ ಇರುವ ದೇವದಾಸಿ ಮಹಿಳೆಯರನ್ನು 30ರಿಂದ 35 ವರ್ಷದ ಮಹಿಳೆಯರನ್ನು ಸರ್ವೆ ಮಾಡಲಾಗಿತ್ತು. ಈಗಿನ ಸರ್ವೆಯರ ಜೊತೆಗೆ ಸರ್ವೆಯಲ್ಲಿರುವರು 35 ವರ್ಷ ಮಹಿಳೆಯರನ್ನು ವಯಸ್ಸು ಕಡಿಮೆ ಇದೆ ಎಂದು ಸರ್ವೆಯಿಂದ ತೆಗೆದು ಹಾಕಲಾಗಿದೆ. ಇದು ತಪ್ಪು ಈ ಮಹಿಳೆಯರು ಸಹ ಸರ್ವೆಯಲ್ಲಿ ಉಳಿಯಬೇಕಾಗಿದೆ.
ತಾಲೂಕಿಗೆ ಒಬ್ಬ ಯೋಜನಾ ಅನುಷ್ಠಾನಾಧಿಕಾರಿ ಬೇಕಾಗಿದೆ. ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಬೇಕು. ಇದರಲ್ಲಿ ದೇವದಾಸಿ ಮಹಿಳೆಯರ ಮಕ್ಕಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ದೇವದಾಸಿ ಮಹಿಳೆಯರಿಗೆ ಮಾಸಿಕ ಸಹಾಯಧನ ಮೂರು ಸಾವಿರ ಹಣ ನೀಡಲು ಒತ್ತಾಯಿಸುತ್ತೇವೆ. ದೇವದಾಸಿ ಕುಟುಂಬಕ್ಕೆ 5 ಎಕರೆ ಜಮೀನು ಕೊಡಲು ಒತ್ತಾಯ, ದೇವದಾಸಿ ಮಹಿಳೆಯರ ಪ್ರೋತ್ಸಾಹ ಧನ 2021ರಿಂದ ಜಾರಿಗೆ ಬರಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾದ್ಯಕ್ಷೆ ಟಿ.ವಿ. ರೇಣುಕಮ್ಮ, ತಾಲೂಕು ಅಧ್ಯಕ್ಷೆ ಈರಮ್ಮ, ಕಾರ್ಯದರ್ಶಿ ಹನುಮಕ್ಕ, ಮುತ್ತಮ್ಮ, ಗಂಗಮ್ಮ, ಕವಿತ, ಮೈಲಮ್ಮ, ಕೆಂಚಮ್ಮ, ಗೌರಮ್ಮ, ರೇಣುಕಮ್ಮ ಇತರರು ಪಾಲ್ಗೊಂಡಿದ್ದರು.