ಕನ್ನಡಪ್ರಭ ವಾರ್ತೆ ಮಂಗಳೂರು
ದೆಹಲಿಯಲ್ಲಿ ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿ ಮಂಗಳೂರಿಗೆ ಭೇಟಿ ನೀಡದಿದ್ದರೂ ಹಣಕಾಸು ಸಚಿವರಾಗಿದ್ದಾಗ ಆಗಮಿಸಿದ್ದರು.ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದ ಕಾರ್ಪೊರೇಷನ್ ಬ್ಯಾಂಕ್ನ ಕಾರ್ಸ್ಟ್ರೀಟ್ ಶಾಖೆಯ ಹೊಸ ಕಟ್ಟಡ ಉದ್ಘಾಟನೆಗೆ ಸಚಿವ ಮನಮೋಹನ ಸಿಂಗ್ ಆಗಮಿಸಿದ್ದರು. ಹಳೆ ಕಟ್ಟಡವನ್ನು ಕೆಡವಿ ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಲಾಗಿತ್ತು. ಅದಕ್ಕೆ ಬ್ಯಾಂಕ್ ಹೌಸ್ (ಬ್ಯಾಂಕ್ ಭವನ) ಎಂದು ಹೆಸರಿಸಲಾಗಿತ್ತು. ಅದರ ಉದ್ಘಾಟನೆಗೆ 1993ರಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ ಸಿಂಗ್ ಆಗಮಿಸಿದ್ದರು. ಉದ್ಘಾಟನೆ ನೆರವೇರಿಸಿದ ಬಳಿಕ ಪಾಂಡೇಶ್ವರದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಮನಮೋಹನ ಸಿಂಗ್ ಭಾಷಣ ಮಾಡಿದ್ದರು.
ಭಾಷಣದಲ್ಲಿ ಕರಾವಳಿಯನ್ನು ‘ಬ್ಯಾಂಕ್ಗಳ ತೊಟ್ಟಿಲು’ ಎಂದು ಕರೆದಿದ್ದ ಮನಮೋಹನ ಸಿಂಗ್, 1906ರಲ್ಲಿ ಸ್ಥಾಪನೆಯಾದ ಅತಿ ಪುರಾತನ ಕಾರ್ಪ್ ಬ್ಯಾಂಕ್ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರಾವಳಿಯ ಕೊಡುಗೆಯನ್ನು ಅವರು ಶ್ಲಾಘಿಸಿದ್ದರು ಎಂದು ಸ್ಮರಿಸುತ್ತಾರೆ ಆಗ ಬ್ಯಾಂಕ್ನ ನಿರ್ದೇಶಕರಾಗಿದ್ದ ಟಿ.ಆರ್.ಭಟ್. ಬಳಿಕ ಮನಮೋಹನ ಸಿಂಗ್ ಅವರು ಗ್ರೂಪ್ ಫೋಟೋ ತೆಗೆಸಿಕೊಂಡಿದ್ದರು. ಸಂಸದ ಧನಂಜಯ ಕುಮಾರ್, ಶಾಸಕ ಬ್ಲೇಸಿಯಸ್ ಡಿಸೋಜಾ, ಶಿಕ್ಷಣ ಸಚಿವ ವೀರಪ್ಪ ಮೊಯ್ಲಿ ಜೊತೆಗೆ ಬ್ಯಾಂಕಿನ ಅಧ್ಯಕ್ಷ ಕೆ.ಆರ್.ಕರಾಮಮೂರ್ತಿ, ಅಧಿಕಾರಿಗಳು, ಸಿಬ್ಬಂದಿ ಜೊತೆ ಫೋಟೋ ತೆಗೆಸಿಕೊಂಡಿದ್ದರು ಎನ್ನುತ್ತಾರೆ ಅವರು.ಇದನ್ನು ಹೊರತುಪಡಿಸಿದರೆ ಪ್ರಧಾನಿಯಾಗಿ ಮನಮೋಹನ ಸಿಂಗ್ ಮಂಗಳೂರಿಗೆ ಆಗಮಿಸಿಲ್ಲ.
ಜನಾರ್ದನ ಪೂಜಾರಿ ಸಂತಾಪ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ದೇಶಕ್ಕೆ ದೊಡ್ಡ ನಷ್ಟ. ಭಾರತ ಸರ್ಕಾರದ ಹಣಕಾಸು ಇಲಾಖೆಯ ಸಲಹೆಗಾರರಾಗಿ, ರಿಸರ್ವ್ ಬ್ಯಾಂಕ್ ಗವರ್ನರ್ರಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ದೇಶಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಸಂತಾಪ ಸೂಚಿಸಿದ್ದಾರೆ.ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತಂದು ಕೊಟ್ಟ ಅವರು ಆರ್ಥಿಕ ಸುಧಾರಣೆಗಳ ಮೂಲಕ ಭಾರತಕ್ಕೆ ಜಾಗತಿಕ ಮನ್ನಣೆ ತಂದು ಕೊಟ್ಟಿದ್ದರು. ಅರ್ಥ ಖಾತೆಯ ಸಚಿವನಾಗಿದ್ದಾಗ ಮನಮೋಹನ್ ಸಿಂಗ್ ಅವರು ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿದ್ದುಕೊಂಡು ನಮ್ಮ ಒಡನಾಟ ಅತ್ಯುತ್ತಮ ಬಾಂಧವ್ಯದಿಂದ ಕೂಡಿತ್ತು. ಯಾವುದೇ ಕೆಲಸದಲ್ಲಿ ಅವರ ಶ್ರದ್ಧೆ ಇತರರಿಗೆ ಮಾದರಿ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದು ಜನಾರ್ದನ ಪೂಜಾರಿ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ..................
ಇಂದಿನ ಬೀಚ್ ಉತ್ಸವ ಮುಂದೂಡಿಕೆದ.ಕ.ಜಿಲ್ಲೆಯಾಡಳಿತ ವತಿಯಿಂದ ಡಿ.28 ಮತ್ತು 29 ರಂದು ತಣ್ಣೀರುಬಾವಿ ಬೀಚ್ನಲ್ಲಿ ಬೀಚ್ ಉತ್ಸವವನ್ನು ಮುಂದೂಡಲಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಪ್ರಯುಕ್ತ ರಾಜ್ಯಾದ್ಯಂತ ಶೋಕಾಚರಣೆ ಇರುವುದರಿಂದ ಬೀಚ್ ಉತ್ಸವ ಮುಂದೂಡಲಾಗಿದೆ. ಬೀಚ್ ಉತ್ಸವದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.