ಗಜೇಂದ್ರಗಡ: ಪಟ್ಟಣದ ಜೋಡು ರಸ್ತೆ ಸೇರಿದಂತೆ ಪ್ರಮುಖ ವೃತ್ತಗಳ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿದ್ದ ಅನಿರ್ದಿಷಾವಧಿ ಹೋರಾಟ ಶುಕ್ರವಾರ ಉಪ ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ಸಂಧಾನ ಯಶಸ್ವಿಯಾದ ಹಿನ್ನೆಲೆ ಪ್ರತಿಭಟನಾಕಾರರು ಹೋರಾಟ ಮೊಟಕುಗೊಳಿಸಿದರು.
ಅಧಿಕಾರಿಗಳಿಂದ ಸೂಕ್ತ ಭರವಸೆ ಸಿಗದ ಹಿನ್ನೆಲೆ ಪ್ರತಿಭಟನಾಕಾರರು ಗುರುವಾರ ರಾತ್ರಿಯು ಧರಣಿ ಸತ್ಯಗ್ರಾಹ ಮುಂದುವರೆಸಿದ್ದರು. ಹೀಗಾಗಿ ಶುಕ್ರವಾರ ಮಧ್ಯಾಹ್ನ ಉಪ ತಹಸೀಲ್ದಾರ್, ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೀದಿ ಬದಿ ವ್ಯಾಪಾರಸ್ಥರ ಅಹವಾಲು ಆಲಿಸಿದ ಬಳಿಕ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ತೊಂದರೆ ನೀಡುವದಿಲ್ಲ. ಆದರೆ ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಮಯಾವಕಾಶ ಬೇಕು ಎಂದು ಮೌಖಿಕವಾಗಿ ಅಧಿಕಾರಿಗಳು ತಿಳಿಸಿ ಸಮಸ್ಯೆ ಪರಿಹಾರದ ಬಗ್ಗೆ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನಾಕಾರರು ೮ ದಿನದೊಳಗೆ ಸಭೆ ಕರೆದು ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆ ಈಡೇರಿಸಲು ಅಧಿಕಾರಿಗಳು ಮುಂದಾಗದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಉಪ ತಹಸೀಲ್ದಾರ್ ಪಿ.ವಿ. ಶೀಂಗ್ರಿ, ಪುರಸಭೆ ಶಿವು ಇಲಾಳ ಸೇರಿದಂತೆ ಪೀರು ರಾಠೋಡ, ದಾವಲ್ ತಾಳಿಕೋಟಿ, ಬಾಲು ರಾಠೋಡ, ಶಾಮಿದ್ ದಿಂಡವಾಡ ಸೇರಿ ೩೦ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ಇದ್ದರು.