ಭಯೋತ್ಪಾದನೆ ಎಂಬುದು ಅಶಾಂತಿ, ಅಸ್ಥಿರತೆಯ ಸಂಕೇತ

KannadaprabhaNewsNetwork | Published : May 16, 2025 1:45 AM

ಸಂಪರ್ಕ ಕ್ರಾಂತಿಯ ಮೂಲಕ ಭಾರತಕ್ಕೆ ತಂತ್ರಜ್ಞಾನದ ಆಧುನಿಕ ಸ್ಪರ್ಶ ಕೊಟ್ಟು, 18 ವರ್ಷಕ್ಕೆ ಮತದಾನದ ಹಕ್ಕನ್ನು ಜಾರಿಗೊಳಿಸಿ, 73 ಮತ್ತು 74ನೇ ಸಂವಿಧಾನಾತ್ಮಕ ತಿದ್ದುಪಡಿಗೆ ಅಡಿಗಲ್ಲು ಹಾಕಿದ ಮೇರು ಚಿಂತಕ ರಾಜೀವ್ ಗಾಂಧಿ

ಕನ್ನಡಪ್ರಭ ವಾರ್ತೆ ಮೈಸೂರು

ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 34ನೇ ಸದ್ಭಾವನಾ ಯಾತ್ರೆ ಜ್ಯೋತಿಯನ್ನು ಮೈಸೂರಿಗೆ ಬರಮಾಡಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ಡಾ.ಬಿ.ಜೆ. ವಿಜಯಕುಮಾರ್‌, ರಾಜೀವ್ ಗಾಂಧಿ ಅವರು ನಮ್ಮನ್ನಗಲಿ ಇಂದಿಗೆ 34 ವರ್ಷ ಕಳೆದಿದ್ದರೂ ಕೂಡ ಅವರು ದೇಶಕ್ಕೆ ಕೊಟ್ಟ ಕೊಡುಗೆಗಳು ಚಿರಸ್ಥಾಯಿಯಾಗಿ ಉಳಿದಿವೆ ಎಂದು ಹೇಳಿದರು.

ಸಂಪರ್ಕ ಕ್ರಾಂತಿಯ ಮೂಲಕ ಭಾರತಕ್ಕೆ ತಂತ್ರಜ್ಞಾನದ ಆಧುನಿಕ ಸ್ಪರ್ಶ ಕೊಟ್ಟು, 18 ವರ್ಷಕ್ಕೆ ಮತದಾನದ ಹಕ್ಕನ್ನು ಜಾರಿಗೊಳಿಸಿ, 73 ಮತ್ತು 74ನೇ ಸಂವಿಧಾನಾತ್ಮಕ ತಿದ್ದುಪಡಿಗೆ ಅಡಿಗಲ್ಲು ಹಾಕಿದ ಮೇರು ಚಿಂತಕ ರಾಜೀವ್ ಗಾಂಧಿ ಎಂದು ನುಡಿದರು.

ಇಂದು ಭಾರತ ಭಯೋತ್ಪಾದನೆಯ ವಿರುದ್ಧ ಸಿಡಿದೆದ್ದು ಜಯವನ್ನು ಸಾಧಿಸಿದೆ. ಈ ಅಭೂತಪೂರ್ವ ಜಯಕ್ಕೆ ಕಾರಣಿಕರ್ತರಾದ ಎಲ್ಲಾ ಸೈನಿಕ ಬಾಂಧವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿ, ಇದೇ ಭಯೋತ್ಪಾದಕರ ದಾಳಿಗೆ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು. ಸದ್ಭಾವನ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವಂತಹ ಸದ್ಭಾವನ ಯಾತ್ರಾ ಸಮಿತಿ ರಾಜ್ಯ ಸಂಚಾಲಕ ದೊರೆ ಅವರಿಗೆ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದರು.

ಭಯೋತ್ಪಾದನೆ ಎಂಬುದು ಅಶಾಂತಿ ಮತ್ತು ಅಸ್ಥಿರತೆಯ ಸಂಕೇತ. ಹಾಗಾಗಿ ದಿವಂಗತ ರಾಜೀವ್ ಗಾಂಧಿ ಅವರು ಮಡಿದ ದಿನವನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಎಂದು ಘೋಷಣೆ ಮಾಡಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಿ ಶಾಂತಿ ಮತ್ತು ಸ್ಥಿರತೆಯನ್ನು ರಾಷ್ಟ್ರದಲ್ಲಿ ನಿರ್ಮಾಣ ಮಾಡುವ ಸಂಕಲ್ಪವನ್ನು ಈ ರಥಯಾತ್ರೆ ಹೊಂದಿದೆ ಎಂದು ಅವರು ತಿಳಿಸಿದರು.

ಜ್ಯೋತಿ ಸ್ವೀಕರಿಸಿ ಮೊದಲಿಗೆ ರಾಷ್ಟ್ರಗೀತೆಯೊಂದಿಗೆ ಸಭೆ ಆರಂಭಿಸಿ ನಂತರದಲ್ಲಿ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಒಂದು ನಿಮಿಷ ಮೌನಚರಿಸಲಾಯಿತು. ಜ್ಯೋತಿಯನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಕೆ.ಆರ್. ವೃತದವರೆಗೆ ಪಾದಯಾತ್ರೆ ಮೂಲಕ ತಂದು ಬಳಿಕ ಬೀಳ್ಕೊಡಲಾಯಿತು.

ಈ ವೇಳೆ ಸದ್ಭಾವನ ಯಾತ್ರಾ ಸಮಿತಿ ರಾಜ್ಯ ಸಂಚಾಲಕ ದೊರೆ, ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ನಗರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಡಿಸಿಸಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪುಷ್ಪಲತಾ ಚಿಕ್ಕಣ್ಣ, ಮಾಜಿ ಮೆಯರ್ ಚಿಕ್ಕಣ್ಣ, ಎಂ. ಶಿವಪ್ರಸಾದ್, ಹುಣಸೂರು ಬಸವಣ್ಣ, ಡೈರಿ ವೆಂಕಟೇಶ್ , ಸಾ.ಮಾ. ಯೋಗೇಶ್, ನಾಗೇಶ್, ಶಿವಶಂಕರಮೂರ್ತಿ, ಡಾ. ನಾಗರಾಜು, ಜಿ. ಮಹದೇವು, ಕಾಂತರಾಜು, ತಿಮ್ಮಯ್ಯ, ಪುಟ್ಟಸ್ವಾಮಿ, ಸಿದ್ದರಾಜು, ಲಕ್ಷ್ಮಿ, ಕೃಷ್ಣಪ್ಪ ಮೊದಲಾದವರು ಇದ್ದರು.