ಕನ್ನಡಪ್ರಭ ವಾರ್ತೆ ಟಿ. ನರಸೀಪುರತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಎಡಗೈ ಸಮಾಜದ ಮಾದಿಗ ಸಮಾಜಕ್ಕೆ ಹೆಚ್ಚಿನ ಪ್ರಾತಿನಿದ್ಯ ಸಿಗಲಿದೆ ಎಂಬ ಕಾರಣಕ್ಕೆ ಜಾತಿ ಗಣತಿ ಸಮೀಕ್ಷೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ ಆರೋಪಿಸಿದ್ದಾರೆ.ರಾಜ್ಯಾದ್ಯಂತ ಪ. ಜನಾಂಗದವರ ಜಾತಿ ಗಣತಿ ಕಾರ್ಯ ಸೋಮವಾರದಿಂದಲೇ ಆರಂಭವಾಗಿದ್ದರೂ, ಮುಖ್ಯಮಂತ್ರಿಗಳಕ್ಷೇತ್ರದಲ್ಲೇ ಗಣತಿ ಆರಂಭಿಸದೇ ಅಧಿಕಾರಿಗಳು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ನಾಗಮೋಹನ್ ದಾಸ್ ಸಮಿತಿ ವತಿಯಿಂದ ನಡೆಯುತ್ತಿರುವ ಪ. ಜಾತಿಯ ಜಾತಿ ಗಣತಿ ನಿನ್ನೆಯಿಂದಲೇ ಆರಂಭವಾಗಿದೆಯಾದರೂ ತಾಲೂಕಿನಲ್ಲಿ ಸಮೀಕ್ಷೆ ಕಾರ್ಯ ಆರಂಭವಾಗಿಲ್ಲ. ಇದರಿಂದ ಮರಯ್ಯ ಅವರು ಬಿಇಓ ಕಚೇರಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುತ್ತಿದ್ದ ಕೊಠಡಿಗೆ ತೆರಳಿ ಬಿಇಓ ಶಿವಮೂರ್ತಿ ಹಾಗು ತಹಸೀಲ್ದಾರ್ ಟಿ.ಜೆ. ಸುರೇಶ್ ಆಚಾರ್ ಅವರನ್ನು ಸಮೀಕ್ಷೆ ವಿಳಂಬಕ್ಕೆ ಕಾರಣ ಕೇಳಿದ ವೇಳೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸರ್ವೆಯನ್ನು ವಿಳಂಬ ಮಾಡಿ ಗಣತಿಯಲ್ಲಿ ಮಾದಿಗ ಸಮುದಾಯದವರನ್ನು ಕಡಿಮೆ ತೋರಿಸುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ಜನಗಣತಿ ಕಾರ್ಯಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಬಿಇಓ ಶಿವಮೂರ್ತಿ ಹಾಗು ತಹಸೀಲ್ದಾರ್ ಟಿ.ಜೆ. ಸುರೇಶ್ ಆಚಾರ್ ಅವರ ಮೇಲೆ ಕ್ರಮ ಜರುಗಿಸಿ ಇಬ್ಬರನ್ನೂ ಅಮಾನತು ಮಾಡಬೇಕು, ಇಲ್ಲದಿದ್ದಲ್ಲಿ ಮಾದಿಗ ಸಮುದಾಯ ತಹಸೀಲ್ದಾರ್ ಹಾಗೂ ಬಿಇಓ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.ಬೇಕಾದ ಪರಿಕರಗಳು ಬಂದಿಲ್ಲತಹಸೀಲ್ದಾರ್ ಟಿ.ಜೆ. ಸುರೇಶ್ ಆಚಾರ್ ಮಾತನಾಡಿ, ಸೋಮವಾರದಿಂದ ರಾಜ್ಯಾದ್ಯಂತ ಜನಗಣತಿ ಆರಂಭವಾಗಿದೆಯಾದರೂ ತಾಲೂಕಿಗೆ ಜನ ಗಣತಿ ಮಾಡಲು ಬೇಕಾದ ಪರಿಕರಗಳು ಬಂದಿಲ್ಲದ ಕಾರಣಕ್ಕೆ ಒಂದು ದಿನ ವಿಳಂಬವಾಗಿದೆ. ನಾಗಮೋಹನ ದಾಸ್ ಅವರ ಸಮಿತಿಯ ಪ್ರತಿ ಸಹ ನಮಗೆ ಈಗಷ್ಟೆ ತಲುಪಿದೆ. ಸಮೀಕ್ಷೆ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಕಾರ್ಯ ಭರದಿಂದ ನಡೆದಿದೆ. ಒಂದು ದಿನ ವಿಳಂಬವಾಗಿದೆಯಾದರೂ ನಿಗದಿತ ಸಮಯಕ್ಕೆ ಸಮೀಕ್ಷೆ ಕಾರ್ಯ ಪೂರ್ಣ ಗೊಳಿಸಿಕೊಡಲಾಗುತ್ತದೆ ಎಂದರು.