ಗದಗ: ಅಕ್ಷರ ಜ್ಯೋತಿಯನ್ನು ಲಕ್ಷಾಂತರ ಬದುಕುಗಳಲ್ಲಿ ಬೆಳಗಿದ ದಿ. ಡಾ. ಬಿ.ಎಫ್. ದಂಡಿನ ಹಾಗೂ ದಿ. ಶಕುಂತಲಾ ಭೀಷ್ಟಪ್ಪ ದಂಡಿನ ಅವರ ಸ್ಮಾರಕವನ್ನು ರಾಜೀವ ಗಾಂಧಿನಗರದ ಕೆವಿಎಸ್ಆರ್ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಲು ನಗರದ ಕೆಎಸ್ಎಸ್ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸ್ಮಾರಕ ಉದ್ಘಾಟನೆಯಾಗುವ ವರೆಗೆ ಪ್ರತಿ ಭಾನುವಾರ ಬೆಳಗ್ಗೆ 10ಕ್ಕೆ ಗದುಗಿನ ಕೆಎಸ್ಎಸ್ ಮಹಾವಿದ್ಯಾಲಯದ ಡಾ. ಬಿ.ಎಫ್. ದಂಡಿನ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ನಿರ್ಧರಿಸಲಾಯಿತು. 10 ಊರುಗಳಲ್ಲಿ 68 ಶಾಲಾ- ಕಾಲೇಜುಗಳಾಗಿ ವಿಸ್ತರಿಸಿರುವ ದಂಡಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು, ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮುಂದಿನ ಸಭೆಗಳಲ್ಲಿ ಪಾಲ್ಗೊಂಡು ಸಲಹೆ- ಸೂಚನೆ ನೀಡಲು ಮನವಿ ಮಾಡಲಾಯಿತು.
ಸ್ಮಾರಕ ನಿರ್ಮಾಣಕ್ಕೆ ರಸೀದಿ ಪುಸ್ತಕ ಮುದ್ರಿಸಲು ಹಾಗೂ ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆಯಲು ತೀರ್ಮಾನ ಕೈಗೊಳ್ಳಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ವೈ.ಕೆ. ಪಿಡಗಣ್ಣವರ ಅವರು ಸ್ಮಾರಕ ನಿರ್ಮಾಣಕ್ಕೆ ₹50 ಸಾವಿರ ದೇಣಿಗೆ ಘೋಷಿಸಿ ಇತರರಿಗೆ ಸ್ಫೂರ್ತಿಯಾದರು.ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ರವಿಂದ್ರನಾಥ ಬಿ. ದಂಡಿನ, ವಿಶ್ರಾಂತ ಪ್ರಾ. ವಿ.ವೈ. ಮಕ್ಕಣ್ಣವರ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ, ಅಂದಾನೆಪ್ಪ ವಡಗೇರಿ, ಡಾ. ಸಿದ್ದಣ್ಣ ಜಕಬಾಳ, ಡಾ. ಎಂ.ಎನ್. ಕಾಮನಹಳ್ಳಿ, ಡಾ. ಟಿ.ಎನ್. ಗೋಡಿ, ಅನಿಲ ವೈದ್ಯ, ಈಶ್ವರ ಪಟ್ಟಣಶೆಟ್ಟಿ, ಶಿವಕುಮಾರ ಕುರಿ, ಎಚ್.ಎಸ್. ಕುರಿ, ಹನುಮೇಶ, ಎಸ್.ಎಸ್. ತಳಿಹಾಳ, ಎನ್.ಎಚ್. ಗುಡ್ಡದ, ಎಸ್.ಎಚ್. ಹೊಸಮನಿ ಇದ್ದರು.
ಗದಗ: ತಾಲೂಕಿನ ಹುಲಕೋಟಿಯಲ್ಲಿರುವ ಆರ್ಟಿಇ ಸೊಸೈಟಿಯ ರೂರಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ಮಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಸ್ಟಾರ್ಟ್ಅಪ್ ಹಬ್ ಹಾಗೂ ಕೃತಕ ಬುದ್ಧಿಮತ್ತೆ(ಎಐ), ರೊಬೊಟಿಕ್ಸ್ ಮತ್ತು ಸೈಬರ್ ಸೆಕ್ಯುರಿಟಿ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಲಾಯಿತು.ಆರ್ಟಿಇ ಸೊಸೈಟಿಯ ಗೌರವ ಕಾರ್ಯದರ್ಶಿ ಸಚಿನ್ ಡಿ. ಪಾಟೀಲ್ ಹಾಗೂ ಟೆಕ್ಮಿಯಾ ಸಲ್ಯೂಷನ್ಸ್ನ ಸಿಇಒ ಮೊಹಮ್ಮದ್ ಯಾಸೀನ್ ಶಭಾಜ್ ಕೇಂದ್ರವನ್ನು ಉದ್ಘಾಟಿಸಿ, ಇದು ವಿದ್ಯಾರ್ಥಿಗಳಲ್ಲಿ ಉದ್ಯಮಾಧಾರಿತ ಕೌಶಲ್ಯ ಬೆಳೆಸಲು ಮತ್ತು ನವೋದ್ಯಮ ಉತ್ತೇಜಿಸಲು ಸಹಕಾರಿಯಾಗಿದೆ ಎಂದರು.ಪ್ರಾಂಶುಪಾಲ ಡಾ. ಬಿ.ಎನ್. ಪಾಟೀಲ್ ಮಾತನಾಡಿ, ಈ ಕೇಂದ್ರವು ಅತ್ಯಾಧುನಿಕ ತಂತ್ರಜ್ಞಾನ ತರಬೇತಿ, ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶಗಳ ಮೂಲಕ ಶೈಕ್ಷಣಿಕ ಜ್ಞಾನ ಮತ್ತು ಕೈಗಾರಿಕಾ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ ಎಂದರು.