ಲಕ್ಷಾಂತರ ರೂ. ಮುಂಗಡ ಪಡೆದು ಪರಾರಿಯಾದ ತಮಿಳುನಾಡಿನ ವ್ಯಕ್ತಿ
ತಮಿಳುನಾಡು ಮೂಲಕ ವ್ಯಕ್ತಿಯೋರ್ವ ಪಟ್ಟಣದ ರಥಬೀದಿಯಲ್ಲಿ ಗೃಹಪಯೋಗಿ ಅಂಗಡಿ ತೆರೆದು ಕಡಿಮೆ ಬೆಲೆಗೆ ಸಾಮಗ್ರಿ ನೀಡುವುದಾಗಿ ಜನರಿಂದ ಲಕ್ಷಾಂತರ ಹಣ ಮುಂಗಡ ಪಡೆದು ಪರಾರಿಯಾಗಿದ್ದು, ಬುಧವಾರ ಬೆಳಗ್ಗೆ ಹಣ ನೀಡಿ ವಂಚನೆಗೊಳಗಾದ ಗ್ರಾಹಕರು ಅಂಗಡಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ರಥಬೀದಿಯಲ್ಲಿರುವ ಯೂನಿಯನ್ ಬ್ಯಾಂಕ್ ಎದುರಿನ ಕಾಂಪ್ಲೆಕ್ಸ್ನಲ್ಲಿ ಕಳೆದ 25ದಿನಗಳ ಹಿಂದೆ ಗ್ಲೋಬಲ್ ಎಂಟರ್ ಪ್ರೈಸಸ್ ಎಂಬ ಗೃಹಪಯೋಗಿ ಅಂಗಡಿ ತೆರೆದ ತಮಿಳುನಾಡು ಮೂಲದ ವ್ಯಕ್ತಿ ಸ್ಥಳೀಯ 6 ಜನ ಯುವಕ-ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡು ಮಾರುಕಟ್ಟೆಯಲ್ಲಿ ಸಿಗುವ ಗೃಹಪಯೋಗಿ ಸಾಮಗ್ರಿಗಳ ಬೆಲೆಗಿಂತ ಅರ್ಧ ಬೆಲೆಗೆ ನೀಡುವುದಾಗಿ ಗ್ರಾಹಕರನ್ನು ವಂಚಿಸಿ ಲಕ್ಷಾಂತರ ಹಣ ಮುಂಗಡ ಪಡೆದಿದ್ದಾರೆ. ಹಣ ಪಡೆದ ಬಗ್ಗೆ ರಶೀದಿ ಕೂಡ ಕೊಟ್ಟಿದ್ದಾರೆ. ಅಂಗಡಿ ಆರಂಭಿಸಿದ ದಿನಗಳಲ್ಲಿ ಹಣ ಪಡೆದ ನಾಲ್ಕೇ ದಿನಗಳಲ್ಲೇ ಟಿವಿ, ಪ್ರೀಡ್ಜ್, ಎಸಿಗಳನ್ನ ನೀಡಿದ ವ್ಯಕ್ತಿ ಜನರಿಗೆ ತನ್ನ ಮೇಲೆ ನಂಬಿಕೆ ಬರುವಂತೆ ಮಾಡಿ ನಂತರ ಭಿತ್ತಿಪತ್ರಗಳನ್ನು ಮನೆಗೆ ಮನೆಗೆ ಹೋಗಿ ಹಂಚಿ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಪಸಮಯದಲ್ಲೆ ಇವನ ಮೋಸದಾಟಕ್ಕೆ ನಂಬಿದ ಗ್ರಾಹಕರು 1 ಲಕ್ಷದ ತನಕ ಮುಂಗಡ ಹಣ ನೀಡಿ ತಮಗೆ ಬೇಕಾದ ಸಾಮಗ್ರಿಗಳಿಗೆ ಬೇಡಿಕೆ ಇಟ್ಟಿದ್ದರು. ಬುಧವಾರ ಬೆಳಗ್ಗೆ ಈತ ಅಂಗಡಿಯಲ್ಲಿಲ್ಲದೇ ನಾಪತ್ತೆ ಆಗಿರುವುದನ್ನು ಖಚಿತಪಡಿಸಿಕೊಂಡ ಗ್ರಾಹಕರು ಅಂಗಡಿ ಮುಂದೆ ಜಮಾಯಿಸಿ ಬೀಗ ಒಡೆದು ಅಂಗಡಿಯಲ್ಲಿದ್ದ ಸಾಮಗ್ರಿ ತೆಗದುಕೊಂಡು ಹೋಗುವ ಪ್ರಯತ್ನಕ್ಕೂ ಮುಂದಾದರು. ಆದರೆ ತಕ್ಷಣ ಸ್ಥಳಕ್ಕಾಗಮಿಸಿದ ನಗರ ಠಾಣೆಯ ಇನ್ಸ್ಪೆಕ್ಟರ್ ದಿವಾಕರ ಎಂ. ಆಕ್ರೋಶಗೊಂಡಿದ್ದ ಗ್ರಾಹಕರನ್ನು ಸಮಾಧಾನಿಸಿ ಮುಂಗಡ ಹಣ ನೀಡಿದ ಬಗ್ಗೆ ವೈಯಕ್ತಿಕವಾಗಿ ದೂರು ನೀಡಿದರೆ ಕ್ರಮ ಜರುಗಿಸುವ ಬಗ್ಗೆ ತಿಳಿಸಿದಾಗ ಜನರು ಸಮಾಧಾನದಿಂದ ಹೊರ ನಡೆದರು.ಮೋಸ ಮಾಡಿದ ತಮಿಳುನಾಡಿನ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಬೇಕು. ಕಳೆದುಕೊಂಡ ನಮ್ಮ ಹಣ ಮರಳಿ ಆತನಿಂದ ಒದಗಿಸಬೇಕು ಎಂದು ಒತ್ತಾಯಿಸಿದರು.