ಕನ್ನಡಪ್ರಭ ವಾರ್ತೆ ತುಮಕೂರು ಗ್ರಾಮೀಣ ಜನರಿಗೆ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಮಟ್ಟದಲ್ಲಿ 50 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿಯೂ ತೆರೆದು ಸೇವೆ ಒದಗಿಸಲು ಶ್ರೀಸತ್ಯ ಸಾಯಿ ಸೇವಾ ಆಶ್ರಮದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಸತ್ಯಸಾಯಿ ಸೇವಾಶ್ರಮದ ಶ್ರೀಮಧುಸೂಧನ್ ಸಾಯಿ ತಿಳಿಸಿದ್ದಾರೆ. ಇಂದು ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅವರ ಮನೆಗೆ ಭೇಟಿ ನೀಡಿದ ವೇಳೆ ಮಾತನಾಡಿದರು. ಆರೋಗ್ಯ, ಶಿಕ್ಷಣವೆಂಬುದು ವ್ಯಾಪಾರವಾಗಿರುವ ಇಂದಿನ ದಿನಗಳಲ್ಲಿ ಬಡವರು, ಮಧ್ಯಮ ವರ್ಗದ ಜನರು ಗುಣಮಟ್ಟ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆಯುವುದು ಮರಿಚಿಕೆಯಾಗಿದೆ. ಸರ್ಕಾರದ ಆಸ್ಪತ್ರೆಯ ಬಗ್ಗೆ ಇಂದಿಗೂ ಜನರಲ್ಲಿ ಅಸಡ್ಡೆಯ ಭಾವನೆ ಇದೆ. ಹಾಗಾಗಿ ಮುದ್ದೇನಹಳ್ಳಿಯಲ್ಲಿರುವ ಶ್ರೀಸಾಯಿ ಗ್ರಾಮದಲ್ಲಿ ಇರುವ ಧರ್ಮಾಸ್ಪತ್ರೆಯ ರೀತಿಯಲ್ಲಿಯೇ ನುರಿತ ವೈದ್ಯರು ಮತ್ತು ಸಿಬ್ಬಂದಿ ಒಳಗೊಂಡ ಸಣ್ಣ ಸಣ್ಣ ಆಸ್ಪತ್ರೆಗಳನ್ನು ಗ್ರಾಮೀಣ ಭಾಗದಲ್ಲಿ ತೆರದು ಸೇವೆ ಒದಗಿಸಬೇಕೆಂಬುದು ಭಕ್ತರ ಕೋರಿಕೆಯಾಗಿದೆ. ನಮ್ಮಇಚ್ಛೆಯೂ ಆ ನಿಟ್ಟಿನಲ್ಲಿಯೇ ಇದ್ದು, ನಮ್ಮ ಉಚಿತ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು ರಾಜ್ಯದಾದ್ಯಂತ ವಿಸ್ತರಿಸಲಿವೆ ಎಂದರು.ನಮ್ಮ ಮೆಡಿಕಲ್ ಕಾಲೇಜಿನ ನುರಿತ ತಜ್ಞ ವೈದ್ಯರೇ ನಿಗದಿತ ದಿನಗಳಂದು ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ರೋಗಿಗಳನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲಿದ್ದಾರೆ ಎಂದರು. ಮಧುಗಿರಿಯಲ್ಲಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯುತ್ತಿದೆ. ಹೆದ್ದಾರಿ ಅಕ್ಕಪಕ್ಕದಲ್ಲಿ ಜಾಗ ನೋಡಿ, ಅಲ್ಲಿ 50 ಬೆಡ್ ಆಸ್ಪತ್ರೆ ತೆರೆಯಲು ಚಿಂತನೆ ನಡೆದಿದೆ. ಹೆದ್ದಾರಿಗಳಲ್ಲಿ ಅಪಘಾತ ನಡೆದಾಗ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ಶಿರಾ ತುಮಕೂರು ಮತ್ತು ದಾಬಸ್ಪೇಟೆ ನಡುವೆ ಇಂತಹ ಆಸ್ಪತ್ರೆ ತೆರೆಯುವ ಬಗ್ಗೆ ಆಲೋಚನೆ ಇದೆ. ಜಾಗ ಎಷ್ಟು ಶೀಘ್ರವಾಗಿ ದೊರೆಯುತ್ತದೆಯೋ ಅಷ್ಟು ಬೇಗ ಆಸ್ಪತ್ರೆ ನಿರ್ಮಾಣ ಕಾರ್ಯವೂ ನಡೆಯಲಿದೆ. ನಮ್ಮಆಸ್ಪತ್ರೆಯಿಂದ ಹೊರಬರುವ ವೈದ್ಯರುಗಳನ್ನೇ ಈ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ನೇಮಕ ಮಾಡಲಾಗುವುದು ಎಂದು ಸ್ವಾಮೀಜಿ ನುಡಿದರು.