ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಸಲ್ಲದು: ಡಾ.ಮಂತರ್ ಗೌಡ

KannadaprabhaNewsNetwork |  
Published : Mar 02, 2026, 03:00 AM IST
ಚಿತ್ರ :  28ಎಂಡಿಕೆ3 :  ತರಬೇತಿ ಕಾರ್ಯಕ್ರಮವನ್ನು ಶಾಸಕರಾದ ಡಾ.ಮಂತರ್ ಗೌಡ ಉದ್ಘಾಟಿಸಿದರು.  | Kannada Prabha

ಸಾರಾಂಶ

ಪತ್ರಕರ್ತರಿಗೆ ನಿರಂತರ ಕಲಿಕೆ ಮುಖ್ಯ. ಯಾವುದೇ ಸುದ್ದಿಯಾದರೂ ಸಕರಾತ್ಮಕ ವಿಮರ್ಶೆ ನೀಡಬೇಕು. ಪತ್ರಕರ್ತರಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಆಗಬಾರದು ಎಂದು ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪತ್ರಕರ್ತರಿಗೆ ನಿರಂತರ ಕಲಿಕೆ ಮುಖ್ಯ. ಯಾವುದೇ ಸುದ್ದಿಯಾದರೂ ಸಕರಾತ್ಮಕ ವಿಮರ್ಶೆ ನೀಡಬೇಕು. ಪತ್ರಕರ್ತರಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಆಗಬಾರದು ಎಂದು ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕೊಡಗು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪತ್ರಿಕೋದ್ಯಮ ಬಗ್ಗೆ ವಿಚಾರ ಸಂಕಿರಣ, ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂ ನಲ್ಲಿ ಎಐ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜ್ಞಾನಕ್ಕೆ ಮಿತಿ ಇಲ್ಲ. ಸಮಾಜದ ಅಂಕುಡೊಂಕುಗಳನ್ನುತಿದ್ದಲು ಪತ್ರಕರ್ತರು ಅತಿ ಮುಖ್ಯ. ರಾಜಕಾರಣಿಗಳು ತಲುಪದ ಕಡೆ ಪತ್ರಕರ್ತರು ತಲುಪುತ್ತಾರೆ. ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಕೆಲಸ ಮಾಡುತ್ತಾರೆ. ಈ ಸಂದರ್ಭ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಆಗಬಾರದು. ಏಕವಚನ ಪ್ರಯೋಗ, ನಿರಾಧಾರ ಆರೋಪಗಳ ಬಗ್ಗೆ ಗಮನ ಹರಿಸಬೇಕು ಎಂದರು.

ರಾಜಕಾರಣಿಗಳು ತಪ್ಪು ಮಾಡುತ್ತಾರೆ. ಅದನ್ನು ಬರೆಯಬೇಡಿ ಎಂದು ಹೇಳುವುದಿಲ್ಲ. ಆದರೆ ಸಕಾರಾತ್ಮಕ ವಿಮರ್ಶೆ ಇರಲಿ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಠೆ ಪತ್ರಕರ್ತರು ಮುಖ್ಯವಾಗಿದ್ದು, ಉತ್ತರದಾಯಿತ್ವ ಹಾಗೂ ಪಾರದರ್ಶಕತೆ ಇರಬೇಕು ಎಂದು ಶಾಸಕರು ನುಡಿದರು.

ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅವರು ಮಾತನಾಡಿ, ಭಾರತವು ಸ್ವತಂತ್ರ ದೇಶವಾಗಿ, ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡು 80 ವರ್ಷಗಳಾಗುತ್ತ ಬರುತ್ತಿವೆ. ನಾವು 50-60 ವರ್ಷಗಳ ಕಾಲ ಸಂವಿಧಾನದ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ಒಂದು ದೇಶದ ರಾಜಕೀಯ ವ್ಯವಸ್ಥೆ, ಅಲ್ಲಿರುವ ಜನ ಸಮುದಾಯಗಳು, ಅಧಿಕಾರಿಗಳು ಕೇವಲ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ಮಾತ್ರ ಗಮನ ಹರಿಸುತ್ತ, ಕರ್ತವ್ಯವನ್ನು ಮರೆತರೆ ಹೀಗಾಗುತ್ತದೆ ಎನಿಸುತ್ತದೆ ಎಂದರು.

ವಿಚಾರ ಸಂಕಿರಣ: ಗೋಷ್ಠಿ 1 ರಲ್ಲಿ ಫ್ಯಾಕ್ಟ್ ಚೆಕ್ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಎಂಬ ವಿಷಯದ ಕುರಿತು ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಮಾತನಾಡಿ, ನಾವು ಸುದ್ದಿಸ್ಪೋಟದಂತಹ ಕಾಲಘಟ್ಟದಲ್ಲಿದ್ದೇವೆ. ಮುದ್ರಣ ಮಾಧ್ಯಮವೂ ಈ ಹಂತದಲ್ಲಿದೆ. ನಾವು ಭಾಷೆ ಬೆಳೆಸುವ ಬದಲು ಕೊಲ್ಲುತ್ತಿದ್ದೇವಾ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಸುಧಾ ವಾರಪತ್ರಿಕೆಯ ಸಂಪಾದಕಿ ರಶ್ಮಿ ಎಸ್.ಮಾತನಾಡಿ, ಕನ್ನಡದ ಭಾಷೆಗಿರುವ ಧ್ವನಿ ಇಂದು ಪತ್ರಿಕೋದ್ಯಮದಲ್ಲಿ ಕಳೆದು ಹೋಗುತ್ತಿದೆ. ಧ್ವನಿ ಹಿಡಿಯುವ ಭಾಷೆ ನಮ್ಮದಾಗಬೇಕು. ಸಂಜಯನ ಪಾತ್ರದಂತೆ, ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ ನಾವು ಮಂಥರೆಯ ಭಾಷೆ ಬಳಸುತ್ತಿದ್ದೇವೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.

ನಮ್ಮ ಓದುಗರು ನಮಗಿಂತ ಹೆಚ್ಚು ತಿಳಿದವರು. ಆದ್ದರಿಂದ ನಮ್ಮಲ್ಲಿ ಸಾಕಷ್ಟು ಪದಸಿರಿ ಇರಬೇಕು. ನಮ್ಮ ಬಂಡವಾಳ ಶಬ್ದಗಳೇ ಆಗಿರಬೇಕು ಎಂದು ಸಲಹೆ ಮಾಡಿದರು.

2ನೇ ಗೋಷ್ಠಿ

ಗೋಷ್ಠಿ- 2ರಲ್ಲಿ ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂ ನಲ್ಲಿ ಎಐ ಎಂಬ ವಿಷಯದ ಕುರಿತು ದೆಹಲಿ ಪದವೀಧರರು ಹಾಗೂ ಎಐ ಪರಿಣಿತರಾದ ಐಐಟಿ ರಾಹುಲ್ ಗುಂಡಾಲ ವಿಚಾರ ಮಂಡಿಸಿದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಸವಿತಾ ರೈ ಹಾಗೂ ಇತರರು ಇದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎನ್.ಎಸ್.ಮಹೇಶ್ ಸ್ವಾಗತಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮ್ಯಾರಥಾನ್‌ನಲ್ಲಿ ಕುಸಿದು ಬಿದ್ದು ಕುಂದಾಪುರ ಎಸ್‌ಐ ನಾಸೀರ್ ಹುಸೇನ್ ನಿಧನ
ಮತದಾರರ ಪಟ್ಟಿಯ ಪರಿಷ್ಕರಣೆ ಮಹತ್ವದ್ದು: ಶಾಸಕ ಸಿ.ಸಿ. ಪಾಟೀಲ