ಫೆ.೧೩ರಿಂದ ಮಹಾಶಿವರಾತ್ರಿ ಮಹೋತ್ಸವ, ಯುವಜನೋತ್ಸವ

KannadaprabhaNewsNetwork |  
Published : Feb 10, 2026, 01:30 AM IST
೯ಕೆಎಂಎನ್‌ಡಿ-೧ಮಂಡ್ಯ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಮುಖ್ಯ ಸಂಚಾಲಕಿ ಶಾರದಾ ಮಾತನಾಡಿದರು. | Kannada Prabha

ಸಾರಾಂಶ

ಮಂಡ್ಯ ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ಫೆ.೧೩ರಿಂದ ಫೆ.೧೯ರವರೆಗೆ ಬೆಳಗ್ಗೆ ೮ ಗಂಟೆಯಿಂದ ರಾತ್ರಿ ೯ರವರೆಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಮಹಾಶಿವರಾತ್ರಿ ಮಹೋತ್ಸವ, ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ಫೆ.೧೩ರಿಂದ ಫೆ.೧೯ರವರೆಗೆ ಬೆಳಗ್ಗೆ ೮ ಗಂಟೆಯಿಂದ ರಾತ್ರಿ ೯ರವರೆಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಮಹಾಶಿವರಾತ್ರಿ ಮಹೋತ್ಸವ, ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಮುಖ್ಯ ಸಂಚಾಲಕಿ ಶಾರದಾ ಹೇಳಿದರು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ೨೧ ಅಡಿ ಎತ್ತರದ ಶಿವಲಿಂಗ, ಭೂಲ್‌ ಬುಲಯ್ಯ, ಸ್ವರ್ಗ, ಮೈಂಡ್ ಸ್ಪಾ, ಉದ್ಭವ ಲಿಂಗ, ಸಹಸ್ರಲಿಂಗಗಳನ್ನು ವೀಕ್ಷಣೆಗೆ ತೆರೆದಿಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾ ಶಿವರಾತ್ರಿ ಪ್ರಯುಕ್ತ ನಿರಾಕಾರ ಜ್ಯೋತಿ ಸ್ವರೂಪದ ಶಿವಪರಮಾತ್ಮನ ೨೧ ಅಡಿ ಎತ್ತರದ ಆಕರ್ಷಕ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ಧಾರಾಪಾತ್ರೆಯಿಂದ ನಿತ್ಯಾಭಿಷೇಕ ನಡೆಯಲಿದೆ. ಭಾರತ ಭವಿಷ್ಯದಲ್ಲಿ ವಿಶ್ವಗುರುವಾಗಲಿದ್ದು ಶಿವನ ಮೂಲಕ ರಚಿಸಲ್ಪಡುತ್ತಿರುವ ಸ್ವರ್ಗ, ಪ್ಯಾರಡೈಸ್, ಬಹಿಸ್ತನ ಕಿರುದರ್ಶನ ಮಾಡುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡಲಾಗುವುದು ಎಂದರು.

ಅತ್ಯಾಕರ್ಷಕ ಭಾರತದ ಸುಪ್ರಸಿದ್ಧ ೧೨ ದ್ವಾದಶ ಜ್ಯೋತಿರ್ಲಿಂಗಗಳನ್ನು ಒಳಗೊಂಡ ಉದ್ಭವಲಿಂಗದ ದರ್ಶನ, ಪ್ರಾಪಂಚಿಕ ಕೆಲಸ ಕಾರ್ಯದಲ್ಲಿ ವ್ಯಸ್ತನಾಗಿ ತನ್ನನ್ನು ತಾನು ಮರೆತುಹೋಗಿರುವ ಮನುಷ್ಯ ರಾಜಯೋಗದ ಧ್ಯಾನದ ಮೂಲಕ ಈ ಎಲ್ಲಾ ಸಮಸ್ಯೆಗಳ ಸುಳಿಯಿಂದ ಹೇಗೆ ಹೊರಬರಲು ಸಾಧ್ಯ ಎಂಬುದರ ಬಗ್ಗೆ ಅರಿವು ಮೂಡಿಸುವ ಚಿತ್ರಣವನ್ನು ತೆರೆದಿಡುವುದಾಗಿ ಹೇಳಿದರು.

ಇಂದು ಮನಸ್ಸು ಒತ್ತಡದಿಂದ ನಿಶ್ಯಕ್ತವಾಗಿದ್ದು ವ್ಯರ್ಥ ಸಂಕಲ್ಪಗಳಲ್ಲಿ ಸಿಲುಕಿದೆ. ಇಂತಹ ಮನಸ್ಸನ್ನು ಶಕ್ತಿಶಾಲಿಗೊಳಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಆಡಿಯೋ-ವೀಡಿಯೋ ಮೂಲಕ ಐದು ನಿಮಿಷಗಳ ಧ್ಯಾನದ ಅನುಭವ ಮಾಡಿಸುವ ವಿಶೇಷ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.

ಒಂದೇ ಸ್ಥಳದಲ್ಲಿ ನಿಂತು ಏಕಕಾಲಕ್ಕೆ ಸಹಸ್ರಲಿಂಗ ದರ್ಶನ ಮಾಡುವ ಸುವರ್ಣವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ಈಶ್ವರೀಯ ವಿದ್ಯಾಲಯವು ಕಳೆದ ೯೦ ವರ್ಷಗಳಿಂದ ೨೦ ವಿಭಾಗಗಳಲ್ಲಿ ಸಲ್ಲಿಸುತ್ತಿರುವ ವಿಶ್ವಸೇವೆಯ ಬಗ್ಗೆ ವೀಡಿಯೋ ತುಣುಕುಗಳು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ಹೇಳಿದರು. ಗೋಷ್ಠಿಯಲ್ಲಿ ವಿಜಯಲಕ್ಷ್ಮೀ ಇದ್ದರು.ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಡ್ಯ: ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಯಡಿ ಶ್ರೀರಂಗಪಟ್ಟಣ ಸಮೀಪವಿರುವ ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜು ಮಾಡುವ ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಗೆ ಸೇರಿದ 66/11 ಕೆವಿ ವಿದ್ಯುತ್ ಉಪ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿಯನ್ನು ಸೆಸ್ಕ್ ವತಿಯಿಂದ ಫೆ.11ರಂದು ಹಮ್ಮಿಕೊಳ್ಳಲಾಗಿದೆ.

ಆ ದಿನದಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಶ್ರೀರಂಗಪಟ್ಟಣ ಸಮೀಪವಿರುವ ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆಯ ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ. ಆದ ಕಾರಣ ಫೆ.11 ರಂದು ಮಂಡ್ಯ ನಗರಕ್ಕೆ ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮಂಡ್ಯ ನಗರ ಸಾರ್ವಜನಿಕರಿಗೆ ಫೆ.11 ಮತ್ತು 12 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಡ್ಯ: ಮಾರಸಿಂಗನಹಳ್ಳಿಯಲ್ಲಿ ಸಿಡಿ ಉತ್ಸವ ಸಂಪನ್ನ
ಪರೀಕ್ಷೆಗಳು ಮುಗಿಯುವ ತನಕ ಟಿ20 ಕ್ರಿಕೆಟ್ ಮುಂದೂಡಲು ಆಗ್ರಹ