ಬಿಸಿಯೂಟ ತಯಾರಕರ ಈ ಎಲ್ಲಾ ಬೇಡಿಕೆ ಈಡೇರಿಕೆ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ

KannadaprabhaNewsNetwork | Updated : Oct 26 2024, 11:44 AM IST

ಸಾರಾಂಶ

ತರೀಕೆರೆ, ಎಐಟಿಯುಸಿ ಬಿಸಿಯೂಟ ತಯಾರಕರ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವೇತನ ಹೆಚ್ಚಳ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು.

 ತರೀಕೆರೆ : ಎಐಟಿಯುಸಿ ಬಿಸಿಯೂಟ ತಯಾರಕರ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವೇತನ ಹೆಚ್ಚಳ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಬೆಂಗಳೂರಿನ ಸಮಗ್ರ ಶಿಕ್ಷಣ ಯೋಜನಾಧಿಕಾರಿಗಳ ಸಭಾಂಗಣದಲ್ಲಿ ಎಐಟಿಯುಸಿ ಬಿಸಿಯೂಟ ತಯಾರಕರ ಮತ್ತು ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಸಿಯೂಟ ತಯಾರಕರ ವಿವಿಧ ಸಮಸ್ಯೆ ಆಲಿಸಿ ಸೂಕ್ತ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಏಪ್ರಿಲ್ ಮೇ ತಿಂಗಳ ಬರಗಾಲ ಕಾರ್ಯಕ್ರಮದಲ್ಲಿ ಅಡುಗೆ ವೇತನ ಹಾಗೂ ಬಾಕಿ ಇರುವ ಆಗಸ್ಟ್ , ಸೆಪ್ಟೆಂಬರ್, ಅಕ್ಟೋಬರ್ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮರಣ ಪರಿಹಾರ ಜಾರಿಗೊಳಿಸಬೇಕು. ನಿವೃತ್ತ ಬಿಸಿಊಟ ತಯಾರಕರಿಗೆ ಘೋಷಣೆಯಾದ ಇಡುಗಂಟು ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹತ್ತರಿಂದ ಇಪ್ಪತ್ತು ವರ್ಷ ಅಡುಗೆ ತಯಾರಕರಾಗಿ ಕೆಲಸ ನಿರ್ವಹಿಸಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದಾಗ ಬಿಡುಗಡೆಗೊಳಿಸಿದ ಬಿಸಿಯೂಟ ತಯಾರಕರಿಗೂ ಇಡುಗಂಟು ಹಣ ಕೊಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. 

ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಎಸ್ ಡಿ ಎಂ ಸಿ ಮತ್ತು ಮುಖ್ಯ ಶಿಕ್ಷಕರ ಜಂಟಿ ಖಾತೆ ರದ್ದುಗೊಳಿಸಿ ಮುಖ್ಯ ಶಿಕ್ಷಕರು ಮತ್ತು ಅಡುಗೆಯವರ ಬ್ಯಾಂಕ್ ಜಂಟಿ ಖಾತೆ ಪುನಃ ಮುಂದುವರಿಸಬೇಕೆಂದು ಒತ್ತಾಯಿಸಲಾಯಿತು. ಆರು ದಿನ ಮೊಟ್ಟೆ ನೀಡಲಾಗುತ್ತಿರುವುದರಿಂದ ಮೊಟ್ಟೆ ಸುಲಿಯಲು ಈಗ ಇರುವ 30 ಪೈಸೆ ಬದಲಾಗಿ 50 ಪೈಸೆ ಕೊಡಬೇಕು. ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಕೊಡಬೇಕೆಂದು ಆಗ್ರಹಿಸಲಾಯಿತು.

ಈ ಎಲ್ಲಾ ಬೇಡಿಕೆ ಆಲಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೇಡಿಕೆ ಈಡೇರಿಸುವುದಾಗಿ ತಿಳಿಸಿ, ವೇತನ ಹೆಚ್ಚಳಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮುಖಂಡರಾದ ನಿರ್ಮಲಾ, ಶಶಿಕಲಾ, ಶಿಕ್ಷಣ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿ ರಿತೇಶ್ ಕುಮಾರ್, ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ ಮಧ್ಯಾಹ್ನ ಉಪಹಾರ ಯೋಜನೆ ನಿರ್ದೇಶಕ ಕುಮಾರ್‌ ರಾವ್, ಮಂಜುನಾಥ್ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

3 ತಿಂಗಳ ವೇತನ ಬಿಡುಗಡೆ

ಶಿಕ್ಷಣ ಸಚಿವರ ಜತೆ ಸಭೆ ನಡೆದ ದಿನವೇ ಬಾಕಿ ಇದ್ದ ಮೂರು ತಿಂಗಳ ವೇತನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದರು ಎಂದು ಚಿಕ್ಕಮಗಳೂರು ಜಿಲ್ಲಾ ಎಐಟಿಯುಸಿ ಉಪಾಧ್ಯಕ್ಷ ಟಿ.ಜಿ.ಶಿವಕುಮಾರ್ ತಿಳಿಸಿದ್ದಾರೆ.

ಒಟ್ಟಾರೆ ಸಭೆಯಲ್ಲಿ ಬಿಸಿಯೂಟ ತಯಾರಕರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಎಲ್ಲ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು ಎಂದರು.

Share this article